ಆ್ಯಪ್ನಗರ

ಧರ್ಮ ಸಂಕೋಲೆ ಮುರಿದ ಮನುಷ್ಯತ್ವ: ಬ್ರಾಹ್ಮಣನಿಗೆ ಹಿಂದೂ ಸಂಪ್ರದಾಯದಂತೆ ಮುಸ್ಲಿಮರಿಂದ ಅಂತ್ಯ ಸಂಸ್ಕಾರ

ಮಾನವೀಯತೆಯೇ ಪರಮೋ ಧರ್ಮ ಎಂಬುದಕ್ಕೆ ಉದಾಹರಣೆ ಈ ಘಟನೆ. ಕೋಮು ದಳ್ಳೂರಿ ಹೊತ್ತಿ ಉರಿಸುವ ಧರ್ಮಾಂಧರ ಕಣ್ಣು ತೆರೆಸುವಂತಿದೆ ಈ ಘಟನೆ.

TIMESOFINDIA.COM 16 Sep 2019, 10:26 am
ಅಹಮದಾಬಾದ್: ಧರ್ಮ, ಜಾತಿ ಎಂದು ರಾಜಕಾರಣಿಗಳೆಷ್ಟೇ ದ್ವೇಷದ ಬೀಜ ಬಿತ್ತಲಿ , ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಈ ನೆಲದಲ್ಲಿ ಧರ್ಮ ಸಹಿಷ್ಣುತೆ ಆಳವಾಗಿ ಬೇರೂರಿದೆ ಎಂಬುದಕ್ಕೆ ನಿದರ್ಶನವಾಗಿ ದೃಷ್ಟಾಂತಗಳು ಆಗಾಗ ಕಾಣಲು ಸಿಗುತ್ತಲೇ ಇರುತ್ತವೆ. ಗುಜರಾತಿನಲ್ಲಿ ನಡೆದಿದ್ದು ಸಹ ಇದೇ. ಮಾನವೀಯತೆ ಇಲ್ಲಿ ಧರ್ಮದ ಸಂಕೋಲೆಗಳನ್ನು ಮುರಿದು ಮೆರೆದಿದೆ.
Vijaya Karnataka Web Hindu


ಆಮ್ರೇಲಿ ಜಿಲ್ಲೆಯ ಸಾವರ್‌ಕುಂಡ್ಲಾ ನಗರದಲ್ಲಿ ಮೂವರು ಮುಸ್ಲಿಂ ಸಹೋದರರು ನಾಲ್ಕು ದಶಕಗಳ ತಮ್ಮ ತಂದೆಯ ಆತ್ಮೀಯ ಗೆಳೆಯನ ಅಂತ್ಯ ಸಂಸ್ಕಾರವನ್ನು ಅವರು ಬಯಸಿದಂತೆ ಮಾಡಿದ್ದಾರೆ. ಅಂದರೆ ಬ್ರಾಹ್ಮಣನಾಗಿದ್ದ ಆತನಿಗೆ ಅವರ ರೀತಿ ರಿವಾಜಿನಂತೆ ಮಣ್ಣು ಮಾಡಲಾಗಿದೆ.

ಭಾನುಶಂಕರ್ ಪಾಂಡ್ಯಾ ಹುಟ್ಟಾ ಬ್ರಾಹ್ಮಣ. ಅವರು ಹಲವು ವರ್ಷಗಳಿಂದ ಮುಸ್ಲಿಂ ಧರ್ಮೀಯ ಸ್ನೇಹಿತನೊಂದಿಗೆ ವಾಸಿಸುತ್ತಿದ್ದರು. ದಿನಗೂಲಿ ಕಾರ್ಮಿಕರಾಗಿರುವ ಸ್ನೇಹಿತನ ಮೂವರು ಮಕ್ಕಳಾದ ಅಬು, ನಾಸೀರ್, ಜುಬೇರ್ ಖುರೇಷಿ ದಿನಕ್ಕೆ ಐದು ಬಾರಿ ನಮಾಜ್ ಮಾಡುವಂತಹ, ರಂಜಾನ್ ಉಪವಾಸವನ್ನು ತಪ್ಪಿಸದಂತಹ ಕಟ್ಟಾ ಧರ್ಮಿಷ್ಠರು. ಆದರೆ ನಾಲ್ಕು ವರ್ಷದಿಂದ ತಮ್ಮವರಲ್ಲೊಬ್ಬರಾಗಿ ಜೀವನ ಸಾಗಿಸಿದ್ದ ಹಿಂದೂ ಅಂಕಲ್ ಮೃತ ಶರೀರದ ಅಂತ್ಯ ಸಂಸ್ಕಾರ ಮಾಡುವಾಗ ಅವರು ಧೋತಿ ಮತ್ತು ಜನಿವಾರ ಧರಿಸಲು ಹಿಂದೇಟು ಹಾಕಲಿಲ್ಲ.

ಭಾನುಶಂಕರ್ ಅಂಕಲ್ ಕೊನೆಯುಸಿರೆಳೆಯುವಾಗ ಗಂಗಾಜಲವನ್ನು ಬಾಯಿಗೆ ಹಾಕಿದೆವು. ಅವರು ಸಾವನ್ನಪ್ಪಿದಾಗ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತೇವೆಂದು ನೆರೆಹೊರೆಯವರಲ್ಲಿ ಹೇಳಿದಾಗ ಜನಿವಾರ ತೊಡಬೇಕಾಗುತ್ತದೆ ಎಂದು ಹೇಳಿದರು. ಅದಕ್ಕೆ ತಕರಾರು ಎತ್ತದೆ ಒಪ್ಪಿಕೊಂಡು ಅವರ ಆತ್ಮಕ್ಕೆ ಸಂತೋಷವಾಗುವಂತೆ ನಡೆದುಕೊಂಡೆವು, ಎಂದು ಸಹೋದರರು ಹೇಳುತ್ತಾರೆ.

ನಾಸೀರ್ ಮಗ ಅರ್ಮಾನ್ ಮೃತ ದೇಹಕ್ಕೆ ಬೆಂಕಿ ಹಚ್ಚಿದ. ಅವರ 12ನೇ ದಿನದಂದು ಆತನ ತಲೆಯನ್ನು ಸಹ ಬೋಳಿಸುತ್ತೇವೆ, ಎಂದು ಅವರ ಪರಿವಾರದವರು ತಿಳಿಸಿದ್ದಾರೆ.

ನಮ್ಮ ತಂದೆ ಭಿಖು ಖುರೇಷಿ ಮತ್ತು ಭಾನುಶಂಕರ್ 40 ವರ್ಷಗಳಿಂದ ಸ್ನೇಹಿತರಾಗಿದ್ದರು. ಕೂಲಿ ಮಾಡುತ್ತಿದ್ದಾಗ ಗೆಳೆಯರಾಗಿದ್ದ ಅವರಿಬ್ಬರು ಒಬ್ಬರನೊಬ್ಬರು ಬಿಟ್ಟಿರುತ್ತಿರಲಿಲ್ಲ. ಏಕಾಂಗಿಯಾಗಿ ಜೀವನ ಸವೆಸುತ್ತಿದ್ದ ಭಾನುಶಂಕರ್ ಕೆಲ ವರ್ಷದ ಹಿಂದೆ ಕಾಲು ಮುರಿದುಕೊಂಡಾಗ, ನಮ್ಮ ತಂದೆ ಅವರನ್ನು ಮನೆಗೆ ಕರೆತಂದು ಇಟ್ಟುಕೊಂಡರು. ಕಳೆದ ನಾಲ್ಕು ವರ್ಷದ ಹಿಂದೆ ತಂದೆ ತೀರಿಕೊಂಡರು. ಆಗ ಭಾನುಶಂಕರ್ ಬಹಳ ಆಘಾತಕ್ಕೊಳಗಾದರು. ಗೆಳೆಯನಿಲ್ಲದಿದ್ದರೂ ನಮ್ಮ ಜತೆಗೆ ಕಳೆದ ಅವರನ್ನು ನಮ್ಮ ಮಕ್ಕಳು ಅಜ್ಜ ಎಂದೇ ಕರೆಯುತ್ತಿದ್ದರು. ನಮ್ಮ ಪತ್ನಿಯರು ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದರು. ಈದ್ ಸೇರಿದಂತೆ ಎಲ್ಲ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅಂಕಲ್ ಮಕ್ಕಳಿಗೆ ಉಡುಗೊರೆ ತರುವುದರನ್ನು ಎಂದೂ ಮರೆಯುತ್ತಿರಲಿಲ್ಲ, ಎಂದು ನಾಸೀರ್ ಹೇಳುತ್ತಾರೆ.

ಅಷ್ಟೇ ಅಲ್ಲ ಅವರಿದ್ದಷ್ಟು ದಿನ ಅವರಿಗಾಗಿ ಪ್ರತ್ಯೇಕವಾಗಿ ಸಸ್ಯಾಹಾರಿ ಅಡುಗೆಯನ್ನು ಮಾಡುವುದನ್ನು ಪರಿವಾರ ಎಂದೂ ಮರೆಯುತ್ತಿರಲಿಲ್ಲ.

ಕೋಮು ಸೌಹಾರ್ದತೆಗೆ ಹೊಸ ಭಾಷ್ಯ ಬರೆದ ಈ ಸಹೋದರರ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ