ಆ್ಯಪ್ನಗರ

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಳಿನ್‌ ಕುಮಾರ್‌ ಕಟೀಲ್‌ ನೇಮಕ

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌ ನೇಮಕಗೊಂಡಿದ್ದಾರೆ. ರೇಸ್‌ನಲ್ಲಿದ್ದ ಹಲವರ ಬದಲಿಗೆ ಕಟೀಲ್‌ಗೆ ಉನ್ನತ ಪದವಿಯ ಅದೃಷ್ಟ ಒದಗಿ ಬಂದಿದೆ.

Vijaya Karnataka Web 20 Aug 2019, 10:38 pm
ಹೊಸದಿಲ್ಲಿ: ರಾಜ್ಯ ಬಿಜೆಪಿಗೆ ನೂತನ ಸಾರಥಿ ನೇಮಕವಾಗಿದೆ.
Vijaya Karnataka Web ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌


ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಈ ಸ್ಥಾನಕ್ಕೆ ಈಗ ಹೊಸಬರನ್ನು ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್‌ ಕುಮಾರ್ ಕಟೀಲ್‌ ಅವರನ್ನು ನೇಮಕ ಮಾಡಿ ಅಮಿತ್‌ ಶಾ ಆದೇಶ ಹೊರಡಿಸಿದ್ದಾರೆ.

ಅಮಿತ್‌ ಶಾ


ಬಿಜೆಪಿಯ ಸಿದ್ಧಾಂತರದ ಒಬ್ಬರಿಗೆ ಒಂದೇ ಹುದ್ದೆ ನೀತಿಯನ್ನು ಪಾಲಿಸಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ರಚನೆಯಾದ ದಿನವೇ ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕ ಮಾಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರು ಕೇಳಿಬರುತ್ತಿತ್ತು. ನಳಿನ್‌ ಕುಮಾರ್‌, ಕಟೀಲ್‌, ಸುನಿಲ್‌ ಕುಮಾರ್‌, ಸಿಟಿ ರವಿ, ಅರವಿಂದ ಲಿಂಬಾವಳಿ, ಜಗದೀಶ್‌ ಶೆಟ್ಟರ್‌, ಕೆಎಸ್‌ ಈಶ್ವರಪ್ಪ, ಆರ್‌. ಅಶೋಕ್‌ ಸೇರಿದಂತೆ ಹಲವು ನಾಯಕರ ಹೆಸರು ಕೇಳಿಬಂದಿತ್ತು.

ಆದರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್‌ ಕುಮಾರ್ ಕಟೀಲ್‌ಗೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಲಭಿಸಿದೆ.

ಯಡಿಯೂರಪ್ಪ ಈ ವಿಷಯದಲ್ಲಿ ತಮ್ಮದೇ ಹಿಡಿತ ಸಾಧಿಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ. ಆದರೆ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಈ ವಿಷಯದಲ್ಲಿ ಮೇಲುಗೈ ಸಾಧಿಸಿದ್ದಾರೆ ಎನ್ನಲಾಗಿದೆ.

ಹಿನ್ನೆಲೆ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ನಳೀನ್‌ ಕುಮಾರ್‌ ಕಟೀಲ್‌ ಮೂರನೇ ಬಾರಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾಗಿ 12 ವರ್ಷಗಳ ಕಾಲ ಸಂಘಟನೆಗಾಗಿ ದುಡಿದಿದ್ದು, ಪ್ರಖರ ಹಿಂದುತ್ವವಾದಿ ಎಂದು ಹೆಸರಾಗಿದ್ದಾರೆ. ವಿವಾದಾತ್ಮಕ ಹೇಳಿಕೆಗೆ ಖ್ಯಾತರಾಗಿರುವ ಕಟೀಲ್‌ಗೆ 2019ರ ಚುನಾವಣೆಯಲ್ಲಿ ಟಿಕೆಟ್‌ ನೀಡಬಾರದೆಂದು ಪಕ್ಷದ ಆಂತರಿಕ ವಲಯದಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಕರಾವಳಿ ಜಿಲ್ಲೆ ಹೊರತುಪಡಿಸಿ ರಾಜ್ಯದ ಇನ್ನುಳಿದ ಭಾಗ ಹಾಗೂ ನಾಯಕರ ಜತೆಗೆ ಸಂಪರ್ಕ ಹೊಂದಿಲ್ಲದ ಕಟೀಲ್‌ ಆಯ್ಕೆ ಬಿಜೆಪಿಯಲ್ಲಿ ಅಚ್ಚರಿ ಮೂಡಿಸಿದೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗಾಂಧಿ ಹತ್ಯೆ ಮಾಡಿದ ನಾಥುರಾಂ ಗೋಡ್ಸೆ ಪರ ಟ್ವೀಟ್‌ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದ ಕಟೀಲ್‌ಗೆ ಈಗ ಹೈಕಮಾಂಡ್‌ ರಾಜ್ಯಾಧ್ಯಕ್ಷ ಸಾರಥ್ಯ ನೀಡಿದೆ.

ತಕ್ಷಣ ಪ್ರಕಟ

ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಪ್ರಕ್ರಿಯೆಯಲ್ಲಿ ಯಡಿಯೂರಪ್ಪ ಮಗ್ನರಾಗಿರುವಾಗಲೇ ರಾಜ್ಯಾಧ್ಯಕ್ಷರ ನೇಮಕ ಮಾಡುವ ಮೂಲಕ ಹೈಕಮಾಂಡ್‌ ಶಾಕ್‌ ನೀಡಿದೆ. ತಾವು ಶಿಫಾರಸು ಮಾಡಿದವರಿಗೆ ಈ ಸ್ಥಾನ ನೀಡಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿಯಬಹುದೆಂಬ ಕಾರಣಕ್ಕೆ ಈ ನಡೆ ಅನುಸರಿಸಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಈ ಮೂಲಕ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಸದ್ಯದಲ್ಲೇ ಬಿಜೆಪಿಯ ಸಂಘಟನಾ ಚುನಾವಣೆಯೂ ನಡೆಯಲಿರುವುದರಿಂದ ಈ ಆಯ್ಕೆ ಮಹತ್ವ ಪಡೆದಿದೆ. ಇದರೊಂದಿಗೆ ಬಿ.ಎಸ್‌.ಯಡಿಯೂರಪ್ಪನವರ ಮೂರುವರೆ ವರ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನಿರ್ವಹಣೆಗೆ ತೆರೆ ಬಿದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ