ಆ್ಯಪ್ನಗರ

ಮೋದಿ ಮಿಷನ್ 2024: 3 ವರ್ಷದಲ್ಲಿ ರೈತರ ಆದಾಯ ದ್ವಿಗುಣ, 5 ವರ್ಷದಲ್ಲಿ ಬಲಿಷ್ಠ ಆರ್ಥಿಕತೆ

ನೀತಿ ಆಯೋಗದ ಸಭೆಯಲ್ಲಿ ಭವಿಷ್ಯದ ಗುರಿ ಬಿಚ್ಚಿಟ್ಟ ಪ್ರಧಾನಿ

Agencies 16 Jun 2019, 7:23 am
ಹೊಸದಿಲ್ಲಿ: 2022ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು 2024ರೊಳಗೆ ದೇಶದ ಆರ್ಥಿಕತೆಯನ್ನು ಐದು ಲಕ್ಷ ಕೋಟಿ ಡಾಲರ್‌ಗೆ ಏರಿಸುವುದು ಸೇರಿದಂತೆ ಬಲಿಷ್ಠ ಭಾರತಕ್ಕಾಗಿ ಹಲವು ಗುರಿಗಳನ್ನು ಪ್ರಧಾನಿ ನರೇಂದ್ರ ಮೋದಿ ತೆರೆದಿಟ್ಟಿದ್ದಾರೆ.
Vijaya Karnataka Web modi-ji_660_112918010414


ಭರ್ಜರಿ ಬಹುತಮದೊಂದಿಗೆ ಎರಡನೇ ಬಾರಿ ಅಧಿಕಾರಕ್ಕೇರಿದ ಬಳಿಕ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ಮಾತನಾಡಿದ ಮೋದಿ 'ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ವಿಶ್ವಾಸ್‌' ಎಂಬ ಮಂತ್ರವನ್ನು ಪರಿಪೂರ್ಣಗೊಳಿಸುವ ನಿಟ್ಟಿನಲ್ಲಿ ಆಯೋಗದ ಪಾತ್ರವನ್ನು ವಿವರಿಸಿದರು.

ಭಾರತದ ಜಿಡಿಪಿಯ ಮೌಲ್ಯನ್ನು ಐದು ಲಕ್ಷ ಕೋಟಿ ಡಾಲರ್‌ಗೇರಿಸಿ ವಿಶ್ವದ ಬೃಹತ್‌ ಆರ್ಥಿಕ ಶಕ್ತಿಗಳ ನಡುವೆ ತಲೆ ಎತ್ತಿ ನಿಲ್ಲುವ ಸಂಕಲ್ಪ ಸ್ವಲ್ಪ ಮಟ್ಟಿಗೆ ಸವಾಲಿನದ್ದೇ ಆದರೂ ರಾಜ್ಯಗಳ ಸಂಘಟಿತ ಪ್ರಯತ್ನದಿಂದ ಇದು ಖಂಡಿತ ಸಾಧ್ಯ ಎಂದರು.

ಬಡತನ, ನಿರುದ್ಯೋಗ, ಬರ, ಪ್ರವಾಹ, ಮಾಲಿನ್ಯ, ಭ್ರಷ್ಟಾಚಾರ ಮತ್ತು ಹಿಂಸೆಗಳ ವಿರುದ್ಧ ಎಲ್ಲರೂ ಜತೆಯಾಗಿ ಹೋರಾಡಬೇಕಾದ ಅನಿವಾರ್ಯತೆಯನ್ನು ಪ್ರತಿಪಾದಿಸಿದರು.


ಅಭಿವೃದ್ಧಿಯ ಪಂಚ ಮಂತ್ರ
- ಮೀನುಗಾರಿಕೆ ಮೇಲೆ ದೃಷ್ಟಿ
ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮೀನುಗಾರಿಕೆ, ಪಶುಸಂಗೋಪನೆ, ತೋಟಗಾರಿಕೆ, ಹಣ್ಣು ಮತ್ತು ತರಕಾರಿ ಬೆಳೆಗಳ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧಾರ. ಮಾರುಕಟ್ಟೆ ಬೆಂಬಲ, ಆಹಾರ ಪರಿಷ್ಕರಣೆ ವಲಯದ ಅಭಿವೃದ್ಧಿಯೂ ಇದರಲ್ಲಿ ಸೇರಿದೆ.

-ಜಿಡಿಪಿಗೆ ಜಿಲ್ಲಾ ಮಟ್ಟದ ಲೆಕ್ಕ
ದೇಶದ ಜಿಡಿಪಿ ಮೌಲ್ಯವನ್ನು ಐದು ಲಕ್ಷ ಕೋಟಿ ಡಾಲರ್‌ಗೆ ಏರಿಸುವ ನಿಟ್ಟಿನಲ್ಲಿ ಸ್ಪರ್ಧಾತ್ಮಕವಾಗಿ ಕೆಲಸ ಮಾಡಬೇಕೆಂದು ಹೇಳಿದ ಮೋದಿ ಜಿಲ್ಲಾ ಮಟ್ಟದಿಂದಲೇ ಜಿಡಿಪಿ ಲೆಕ್ಕಾಚಾರ ಆರಂಭವಾಗಬೇಕೆಂದಿದ್ದಾರೆ.

-ಎಲ್ಲ ಮನೆಗಳಿಗೆ ಪೈಪ್‌ ನೀರು
ನೂತನ ಜಲ ಶಕ್ತಿ ಸಚಿವಾಲಯದಡಿ ಜಲ ಸಂರಕ್ಷಣೆ ಮತ್ತು ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, 2024ರೊಳಗೆ ಗ್ರಾಮೀಣ ಭಾರತದ ಪ್ರತಿ ಮನೆಗೂ ಪೈಪ್‌ ನೀರು ಒದಗಿಸುವ ಸಂಕಲ್ಪ ಮಾಡಲಾಗಿದೆ. ಪ್ರತಿ ಹನಿಗೂ ಬೆಳೆ ಎಂಬ ಧ್ಯೇಯದಡಿ ಬರ ನಿರ್ವಹಣೆ ಸಂದೇಶ ಸಾರಿದ್ದಾರೆ.

-ರಫ್ತು ವಲಯದಲ್ಲಿ ಉದ್ಯೋಗ
ದೇಶದಲ್ಲಿ ರಫ್ತು ವಲಯದಲ್ಲಿ ಚುರುಕಿನ ಚಟುವಟಿಕೆಗಳು ನಡೆಯಬೇಕಿದ್ದು, ಇದರಿಂದ ಆದಾಯ ಮತ್ತು ಉದ್ಯೋಗಳೆರಡೂ ವೃದ್ಧಿಯಾಗಲಿವೆ.

- 2022ಕ್ಕೆ ನವ ಭಾರತ ನಿರ್ಮಾಣ
ಸ್ವಚ್ಛ ಭಾರತ, ಸರ್ವರಿಗೂ ಮನೆ, ಬದುಕಿನ ಗುಣಮಟ್ಟ ಹೆಚ್ಚಳ ಸೇರಿದಂತೆ ಸಕಲರ ಸಮೃದ್ಧಿಯ ಗುರಿ ಹೊತ್ತು ಸಂಕಲ್ಪ ಮಾಡಿರುವ ನವ ಭಾರತ ನಿರ್ಮಾಣ ಗುರಿ ಮುಟ್ಟಲು ಶ್ರಮಿಸುವಂತೆ ರಾಜ್ಯಗಳನ್ನು ಮೋದಿ ವಿನಂತಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ