ಆ್ಯಪ್ನಗರ

ಹೊಸ ಶಿಕ್ಷಣ ನೀತಿ 2000 ವರ್ಷಗಳ ಹಿಂದಿನ ಶೈಕ್ಷಣಿಕ ಪದ್ಧತಿಯ ಸವಕಲು ನೋಟದಂತಿದೆ - ಖರ್ಗೆ ಕಿಡಿ

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ನಮ್ಮ ಮಕ್ಕಳ ಭವಿಷ್ಯವನ್ನು ಸಿದ್ಧಪಡಿಸುವ ಬದಲು 2000 ವರ್ಷಗಳ ಹಿಂದಿನ ಶೈಕ್ಷಣಿಕ ಪದ್ಧತಿಯ ಸವಕಲು ನೋಟದಂತಿದೆ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

Agencies 16 Sep 2020, 9:03 pm
ಹೊಸದಿಲ್ಲಿ: ಕೇಂದ್ರ ಸರಕಾರದ ಬಹು ನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿ - 2020 (ಎನ್‌ಇಪಿ) ಕುರಿತು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮೊದಲ ಬಾರಿಗೆ ಅಪಸ್ವರ ಎತ್ತಿದ್ದಾರೆ. ರಾಜ್ಯಸಭೆ ಶೂನ್ಯವೇಳೆಯಲ್ಲಿ ಬುಧವಾರ ಎನ್‌ಇಪಿ ಕುರಿತು ಮಾತನಾಡಿದ ಅವರು ಈ ಹೊಸ ಶಿಕ್ಷಣ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು.
Vijaya Karnataka Web Mallikarjun kharge
ಹಿರಿಯ ಕಾಂಗ್ರೆಸ್‌ ನಾಯಕ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ


ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಮಕ್ಕಳ ಭವಿಷ್ಯವನ್ನು ಸಿದ್ಧಪಡಿಸುವ ಬದಲು 2000 ವರ್ಷಗಳ ಹಿಂದಿನ ಶೈಕ್ಷಣಿಕ ಪದ್ಧತಿಯ ಸವಕಲು ನೋಟದಂತಿದೆ ಎಂದು ಆರೋಪಿಸಿದ್ದಾರೆ. ಶಾಲೆಗಳಲ್ಲಿ ನೈತಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣವು ಸಂವಿಧಾನದ ತತ್ವಗಳನ್ನು ಆಧರಿಸಿರಬೇಕೆ ವಿನಾ ಪ್ರಾಚೀನ ಸಾಂಸ್ಕೃತಿಕ ಮೌಲ್ಯಗಳನ್ನಲ್ಲಎಂದರು.

ಸಂವಿಧಾನದಲ್ಲಿನ ನಿಬಂಧನೆಯ ಅನುಸಾರ ರಾಜ್ಯ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ನಿರ್ದೇಶನಗಳನ್ನು ಸೂಚಿಸುವಂತಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಕಟ್ಟುಪಾಡುಗಳನ್ನು ರಾಜ್ಯ ನಿಧಿಯಿಂದ ನಿರ್ವಹಿಸಲಾಗುವುದಿಲ್ಲಎಂದು ಸಂವಿಧಾನದ ಪರಿಚ್ಛೇದ 28 (1) ಅನ್ನು ಉಲ್ಲೇಖಿಸಿದರು.

ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತು ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ನಗರಗಳಲ್ಲಿ, ಗುಣಮಟ್ಟದ ನರ್ಸರಿ ಶಿಕ್ಷಣಕ್ಕೆ ಪ್ರವೇಶ ಹೊಂದಿರುವ ಮಕ್ಕಳು 1ನೇ ತರಗತಿಗೆ ಸೇರುವ ಮೊದಲೇ ಓದಲು ಮತ್ತು ಬರೆಯಲು ಕಲಿತಿರುತ್ತಾರೆ. ಆದರೆ, ಈ ವ್ಯವಸ್ಥೆ ಗ್ರಾಮೀಣ ಭಾಗದಲ್ಲಿ ಕಂಡು ಬರುವುದಿಲ್ಲ. ಹಳ್ಳಿಗಳಲ್ಲಿನ ಬಡ ಮಕ್ಕಳ ಶಿಕ್ಷಣ ಪದ್ಧತಿ ಅನಾನುಕೂಲತೆಯಿಂದ ಕೂಡಿದೆ. ಏಕೆಂದರೆ, ಅಂಗನವಾಡಿ ಶಿಕ್ಷಕರಿಗೆ ಸಮರ್ಪಕ ರೀತಿಯಲ್ಲಿ ಕಲಿಸಲು ಸರಿಯಾದ ನೀತಿಯನ್ನು ರೂಪಿಸಿಲ್ಲ. ಆದ್ದರಿಂದ ಬಡ ಮಕ್ಕಳು 1ನೇ ತರಗತಿಗೆ ಸೇರುವ ಮೊದಲು ಕಲಿಯುವ ಶಿಕ್ಷಣವು ಅನಾನುಕೂಲತೆಯಿಂದ ಆರಂಭವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹತ್ತನೇ ತರಗತಿಯ ನಂತರ ಶೇ. 50 ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯುತ್ತಾರೆ. ಈ ಪ್ರಮಾಣವನ್ನು ಕಡಿಮೆ ಮಾಡಲು ಯಾವುದೇ ಯೋಜನೆ ಇಲ್ಲ. ಈ ವಿದ್ಯಾರ್ಥಿಗಳಲ್ಲಿ ಶೇ. 32.4 ರಷ್ಟು ದಲಿತರು, ಶೇ. 25.7 ಅಲ್ಪಸಂಖ್ಯಾತರು ಮತ್ತು ಶೇ. 16.4 ಬುಡಕಟ್ಟು ಜನಾಂಗದವರು ಎಂದು ಅಂದಾಜಿಸಲಾಗಿದೆ. ಶಿಕ್ಷಕರು ಈಗಾಗಲೇ ಚುನಾವಣೆ, ಜನಗಣತಿ, ವ್ಯಾಕ್ಸಿನೇಷನ್‌ ಮುಂತಾದ ಹಲವಾರು ಕರ್ತವ್ಯಗಳಿಗೆ ನಿಯೋಜನೆಗೊಂಡಿದ್ದಾರೆ. ಬೋಧನೆಯತ್ತ ಗಮನ ಹರಿಸುವುದು ಶಿಕ್ಷಕರಿಗೆ ಕಷ್ಟವಾಗಿದೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಅಸಾಧ್ಯ ಎಂದು ಹೇಳಿದರು.

ಇದೇ ರೀತಿ ಮುಂದುವರಿದರೆ 2035ರ ವೇಳೆಗೆ ಭಾರತವು ತನ್ನ ಯುವ ಜನತೆಯಿಂದ ಪಡೆಯಬೇಕಾದ ಲಾಭವನ್ನು ಕಳೆದುಕೊಳ್ಳುತ್ತದೆ. ಮುಂಬರುವ 15 ವರ್ಷಗಳ ಅವಧಿಯಲ್ಲಿ ಭಾರತದ ಭವಿಷ್ಯದ ಗುರಿ ನಿಗದಿಪಡಿಸಬೇಕಿದೆ. ದುರ್ಬಲ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸೇರಿದ ಮಕ್ಕಳು ಈಗಾಗಲೇ ನೀಟ್‌ ಮತ್ತು ಜೆಇಇ ಪರೀಕ್ಷೆಗಳಲ್ಲಿ ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಮತ್ತು ಹಿಂದುಳಿದ ಮಕ್ಕಳಿಗೆ ನಾವು ಅಭಿವೃದ್ಧಿಯ ಅವಕಾಶಗಳನ್ನು ಒದಗಿಸಬೇಕಾದರೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ಗೆ ಆದ್ಯತೆ ನೀಡಬೇಕು. ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ತಮ್ಮ ಭಾಷೆ ಮತ್ತು ಸಾಹಿತ್ಯ ತರಗತಿಗಳ ಮೂಲಕ ಕಲಿಯುತ್ತಾರೆ. ಸಂಸ್ಕೃತ ಅಥವಾ ಹಿಂದಿಯ ಮೂಲಕ ಒಂದೇ ಸಂಸ್ಕೃತಿಯನ್ನು ಉತ್ತೇಜಿಸುವ ಇಂತಹ ಕ್ರಿಯಾಶೀಲತೆಯಿಂದ ಹಿಂದುಳಿದ ಮಕ್ಕಳನ್ನು ಆಧುನಿಕ ಶಿಕ್ಷಣದಿಂದ ದೂರವಿರಿಸಿದಂತಾಗುತ್ತದೆ ಎಂದು ಆರೋಪಿಸಿದ್ದಾರೆ.

ಆರ್‌ಟಿಇ ಕಾಯಿದೆಯ ಆದೇಶದಂತೆ 1 ಅಥವಾ 2 ಕಿ.ಮೀ ವ್ಯಾಪ್ತಿಯಲ್ಲಿ ಹೊಸ ಪ್ರಾಥಮಿಕ ಶಾಲೆಗಳನ್ನು ಸರಕಾರ ಸ್ಥಾಪಿಸುವುದು ಕಡ್ಡಾಯಗೊಳಿಸುವ ಬಗ್ಗೆ ಎನ್‌ಇಪಿಯಲ್ಲಿ ಯಾವುದೇ ಉಲ್ಲೇಖವಿಲ್ಲ. ಇಂತಹ ಹಲವು ಕಾರಣಗಳಿಂದ ಹೊಸ ಶಿಕ್ಷಣ ನೀತಿ -2020 ಮಕ್ಕಳ ಭವಿಷ್ಯಕ್ಕೆ ಮಾರಕ. ಆದ್ದರಿಂದ ಈ ನೀತಿಯನ್ನು ಕೇಂದ್ರ ಸರಕಾರ ಹಿಂತೆಗೆದುಕೊಳ್ಳಬೇಕು ಎಂದು ಖರ್ಗೆ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ