ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ಪರಿಣಾಮ ದಿಲ್ಲಿ ನಗರ ಪಾಲಿಕೆ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಬೇಕಾಯಿತು ಎಂದು ಆಮ್ ಆದ್ಮಿ ಪಾರ್ಟಿ ಒಪ್ಪಿಕೊಂಡಿದೆ.
ಪ್ರತಿ ಬಾರಿ ಸೋತಾಗಲೂ ಎಲೆಕ್ಟ್ರಾನಿಕ್ ಮತ ಯಂತ್ರ (ಇವಿಎಂ)ಗಳತ್ತ ಬೊಟ್ಟು ಮಾಡಿ ಬೊಬ್ಬೆ ಹಾಕುತ್ತಿದ್ದ ಆಪ್, ಇದೇ ಮೊದಲ ಬಾರಿ ತನ್ನ ಸೋಲಿನ ಕಾರಣವನ್ನು ಮೋದಿ ವರ್ಚಸ್ಸಿನಲ್ಲಿ ಕಂಡುಕೊಂಡಿದೆ. ಗುರುವಾರ ನಡೆದ ಆಪ್ ಶಾಸಕಾಂಗ ಸಭೆ, ಕಳೆಗುಂದುತ್ತಿರುವ ಕೇಜ್ರಿವಾಲ್ ನಾಯಕತ್ವ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿತು.
ತಿಂಗಳ ಹಿಂದೆ ಬಿಜೆಪಿಗೆ ಭರ್ಜರಿ ಗೆಲುವು ತಂದುಕೊಟ್ಟ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ಪ್ರಭಾವ, ಅದೇ ವೇಳೆ ಪಂಜಾಬ್ ಮತ್ತು ಗೋವಾ ರಾಜ್ಯಗಳಲ್ಲಿ ಆಪ್ ಅನುಭವಿಸಿದ ಹಿನ್ನಡೆ ಮತ್ತು ಹೆಚ್ಚುತ್ತಲೇ ಇರುವ ಪ್ರಧಾನಿ ಮೋದಿಯವರ ವರ್ಚಸ್ಸು ಸೇರಿ ದಿಲ್ಲಿ ನಗರ ಪಾಲಿಕೆ ಚುನಾವಣೆಯನ್ನು ಪ್ರಭಾವಿಸಿದವು. ಪರಿಣಾಮ ಆಪ್ ಕೆಟ್ಟ ಸೋಲು ಕಾಣುವಂತಾಯಿತು ಎಂದು ಆಪ್ನ ಶಾಸಕರು ವಿಶ್ಲೇಷಿಸಿದ್ದಾರೆ.
ರಾಜೀನಾಮೆ: ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಕಾರ್ಯವೈಖರಿ ವಿರುದ್ಧ ಗುರುವಾರ ಮತ್ತೊಂದು ಸುತ್ತಿನ ರಾಜೀನಾಮೆ ಪ್ರಹಾರ ನಡೆಯಿತು. ಪಕ್ಷದ ಪಂಜಾಬ್ ಘಟಕದ ಸಂಯೋಜಕರಾಗಿದ್ದ ಸಂಜಯ್ ಸಿಂಗ್ ಹಾಗೂ ಸಹ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದುರ್ಗೇಶ್ ಪಾಠಕ್ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ತಮ್ಮ ಸ್ಥಾನಕ್ಕೆ ಇಬ್ಬರು ನಾಯಕರು ರಾಜೀನಾಮೆ ನೀಡಿದ್ದು ಮುಂದಿನ ತಮ್ಮ ನಡೆಯ ಬಗ್ಗೆ ಒಂದೆರಡು ದಿನದಲ್ಲಿ ನಿರ್ಧರಿಸುವುದಾಗಿ ಹೇಳಿದ್ದಾರೆ. ದಿನದ ಹಿಂದೆಯಷ್ಟೇ ದಿಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದೀಪಕ್ ಪಾಂಡ್ಯ ರಾಜೀನಾಮೆ ನೀಡಿದ್ದರು.