ಆ್ಯಪ್ನಗರ

ಲಂಚ ಕೊಟ್ಟರೂ ಜೈಲು: ಇಂದಿನಿಂದ ಹೊಸ ಕಾಯಿದೆ ಜಾರಿ

ದೇಶಾದ್ಯಂತ ಇನ್ನು ಮುಂದೆ ಲಂಚ ಸ್ವೀಕಾರ ಮಾತ್ರವಲ್ಲ ಲಂಚ ಕೊಡುವುದೂ, ಲಂಚದ ಆಮಿಷ ಒಡ್ಡುವುದು ಸಹ ಶಿಕ್ಷಾರ್ಹ ಅಪರಾಧವಾಗಲಿದೆ. ಲಂಚ ನೀಡಿದವರಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ಜತೆಗೆ ದಂಡ ಬೀಳಲಿದೆ.

Vijaya Karnataka 1 Aug 2018, 7:40 am
ಹೊಸದಿಲ್ಲಿ: ದೇಶಾದ್ಯಂತ ಇನ್ನು ಮುಂದೆ ಲಂಚ ಸ್ವೀಕಾರ ಮಾತ್ರವಲ್ಲ ಲಂಚ ಕೊಡುವುದೂ, ಲಂಚದ ಆಮಿಷ ಒಡ್ಡುವುದು ಸಹ ಶಿಕ್ಷಾರ್ಹ ಅಪರಾಧವಾಗಲಿದೆ. ಲಂಚ ನೀಡಿದವರಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ಜತೆಗೆ ದಂಡ ಬೀಳಲಿದೆ.
Vijaya Karnataka Web bribe


ದೇಶಾದ್ಯಂತ ಸರಕಾರಿ ಕಚೇರಿಗಳಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕಾರ ಮಂಡಿಸಿದ 'ಭ್ರಷ್ಟಾಚಾರ ತಡೆ (ತಿದ್ದುಪಡಿ) ವಿಧೇಯಕ -1988'ಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಂಕಿತ ಹಾಕಿದ್ದು, ಜು.26ರಿಂದಲೇ ಅನ್ವಯವಾಗುವಂತೆ ಕಠಿಣ ಕಾನೂನು ದೇಶಾದ್ಯಂತ ಜಾರಿಗೆ ಬಂದಿದೆ.

ಶಿಕ್ಷೆ ಪ್ರಮಾಣ ಏರಿಕೆ: ಪರಿಷ್ಕೃತ ಕಾಯಿದೆಯಲ್ಲಿ ಲಂಚ ಪಡೆದ ಆರೋಪಿಯ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಕನಿಷ್ಠ 3 ವರ್ಷ ಜೈಲು ಶಿಕ್ಷೆ ಬೀಳಲಿದೆ. ಸೆರೆವಾಸವನ್ನು 7 ವರ್ಷಕ್ಕೆ ವಿಸ್ತರಿಸಲೂ ಅವಕಾಶವಿದೆ.

ವಾಣಿಜ್ಯ ಸಂಘಟನೆಗಳಿಗೂ ಬಿಸಿ: ಹೊಸ ಕಾಯಿದೆಯು ವಾಣಿಜ್ಯ ಸಂಘಟನೆಗಳಿಗೂ ಅನ್ವಯಿಸಲಿದೆ. ಅಂದರೆ ಯಾವುದೇ ವಾಣಿಜ್ಯ ಸಂಘಟನೆಗೆ ಸಂಬಂಧಿಸಿದ ವ್ಯಕ್ತಿ, ಸರಕಾರಿ ಉದ್ಯೋಗಿಗೆ ಲಂಚ ಕೊಟ್ಟರೆ ಅಥವಾ ಲಂಚ ನೀಡುವ ಆಮಿಷವನ್ನು ಒಡ್ಡಿದರೆ, ಅಂತಹ ಸಂಘಟನೆಯನ್ನೇ ತಪ್ಪಿತಸ್ಥ ಎಂದು ಗುರುತಿಸಿ ಕ್ರಮ ಜರುಗಿಸಲು ಅವಕಾಶವಿದೆ.

ಸುಮಾರು 30 ವರ್ಷಗಳ ಹಳೆಯ ಕಾಯಿದೆಯಲ್ಲಿ ಲಂಚ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಉತ್ತೇಜಿಸುವವರ ವಿರುದ್ಧ ಕ್ರಮಕ್ಕೆ ಯಾವುದೇ ನಿಯಮಗಳಿರಲಿಲ್ಲ.

2 ವರ್ಷ ಡೆಡ್‌ಲೈನ್‌

ಯಾವುದೇ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು 2 ವರ್ಷದ ಕಾಲಮಿತಿಯಲ್ಲಿ ಮುಗಿಸಲು ಹೊಸ ಕಾಯಿದೆಯಲ್ಲಿ ಗಡುವು ವಿಧಿಸಲಾಗಿದೆ.

ಅಮಾಯಕರಿಗೆ ರಕ್ಷಣೆ

ಹೊಸ ಕಾಯಿದೆ ಪ್ರಕಾರ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ಪೊಲೀಸರು, ಸಿಬಿಐ ಅಥವಾ ತನಿಖಾ ಸಂಸ್ಥೆಗಳು ಶಂಕೆಯ ಮೇರೆಗೆ ಏಕಾಏಕಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ತನಿಖೆ ನಡೆಸುವ ಮುನ್ನ ಸಂಬಂಧಪಟ್ಟ ಮೇಲಾಧಿಕಾರಿಗಳು ಅಥವಾ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗುಮಾನಿ ಮೇರೆಗೆ ಅಮಾಯಕರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿ ಶೋಷಿಸುವುದನ್ನು ತಡೆಯಲು ಈ ನಿಯಮ ಸೇರಿಸಲಾಗಿದೆ. ನಿವೃತ್ತ ಅಧಿಕಾರಿಗಳಿಗೂ ಹೊಸ ನಿಯಮ ಅನ್ವಯವಾಗಲಿದೆ. ಆದರೆ, ರೆಡ್‌ ಹ್ಯಾಂಡೆಡ್‌ ಆಗಿ ಸಿಕ್ಕಿಬಿದ್ದ ಪ್ರಕರಣಗಳಲ್ಲಿ ಪೂರ್ವಾನುಮತಿ ನಿಯಮ ಅನ್ವಯಿಸುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ