ಆ್ಯಪ್ನಗರ

ನೀರವ್‌ ಗಡಿಪಾರು ಸನ್ನಿಹಿತ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್‌ಬಿ) ಹಗರಣದ ಪ್ರಮುಖ ಆರೋಪಿ ನೀರವ್‌ ...

PTI 31 May 2019, 5:30 am
ಲಂಡನ್‌: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಹಗರಣದ ಪ್ರಮುಖ ಆರೋಪಿ ನೀರವ್‌ ಮೋದಿಯನ್ನು ಒಂದು ವೇಳೆ ನಾವು ಬ್ರಿಟನ್‌ನಿಂದ ಗಡಿಪಾರು ಮಾಡಿದರೆ, ಭಾರತದ ಯಾವ ಜೈಲಿನಲ್ಲಿ ಇಡಲು ವ್ಯವಸ್ಥೆ ಮಾಡಿರುವಿರಿ ಎಂದು ಭಾರತ ಸರಕಾರವನ್ನು ಬ್ರಿಟನ್‌ ಕೋರ್ಟ್‌ ಪ್ರಶ್ನಿಸಿದೆ. ಈ ವಿವರಗಳನ್ನು 14 ದಿನಗಳೊಳಗೆ ಖಚಿತಪಡಿಸಿ ಎಂದು ಭಾರತೀಯ ಅಧಿಕಾರಿಗಳನ್ನು ಕೋರ್ಟ್‌ ಕೇಳಿದೆ.
Vijaya Karnataka Web nirav modi


ಕೋರ್ಟ್‌ಗೆ ಹಾಜರಾದ 48 ವರ್ಷದ ನೀರವ್‌ ನೀಲಿ ಶರ್ಟ್‌ ಮತ್ತು ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದರು. ನೀರವ್‌ ಗಡಿಪಾರು ಪ್ರಕರಣವನ್ನು ಗುರುವಾರ ವಿಚಾರಣೆ ನಡೆಸಿದ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ನ ಚೀಫ್‌ ಮ್ಯಾಜಿಸ್ಪ್ರೇಟ್‌ ಎಮಾ ಅರ್ಬೋಟ್‌ನಾಟ್‌ ಅವರು, ನೀರವ್‌ ಕಸ್ಟಡಿ ಅವಧಿಯನ್ನು ಜೂ.27ರ ತನಕ ವಿಸ್ತರಿಸಿದರು. ''ನೀರವ್‌ಗೆ ಯಾವ ಜೈಲನ್ನು ನಿಗದಿ ಮಾಡಲಾಗಿದೆ ಎಂದು ಭಾರತೀಯ ಅಧಿಕಾರಿಗಳು 14 ದಿನದೊಳಗೆ ತಿಳಿಸಬೇಕು. ತಿಳಿಸದೇ ಇರಲು ಯಾವುದೇ ಕಾರಣಗಳೂ ಇಲ್ಲ,'' ಎಂದು ಮ್ಯಾಜಿಸ್ಪ್ರೇಟ್‌ ಹೇಳಿದರು. ಇದೇ ವೇಳೆ, ''ಮುಂಬಯಿನ ಆರ್ಥರ್‌ ರೋಡ್‌ ಜೈಲು, 'ಈ ವ್ಯಕ್ತಿಗೆ' ಹೇಳಿ ಮಾಡಿಸಿದಂತಿದೆ'' ಎಂದೂ ಹೇಳಿದರು.

ಎಮಾ ಅರ್ಬೋಟ್‌ನಾಟ್‌ ಅವರೇ 2018ರ ಡಿಸೆಂಬರ್‌ನಲ್ಲಿ ವಿಜಯ ಮಲ್ಯ ಗಡಿಪಾರಿಗೆ ಆದೇಶ ಹೊರಡಿಸಿದ್ದರು. ಅಲ್ಲದೇ, ಮಲ್ಯ ಅವರಿಗೆ ಸಿದ್ಧಪಡಿಸಲಾಗಿದ್ದ ಜೈಲಿನ ಕೋಣೆಯ ವಿಡಿಯೊವನ್ನೂ ಬಯಸಿದ್ದರು. ಒಂದು ವೇಳೆ, ಇದೇ ಜೈಲಿನಲ್ಲಿಯೇ ನೀರವ್‌ಗೂ ಕೋಣೆ ನಿಗದಿ ಪಡಿಸಿದರೆ ಕೋರ್ಟ್‌ನ ಅಭ್ಯಂತರವೇನೂ ಬಹುಶಃ ಇರುವುದಿಲ್ಲ ಎಂದರು. ಈ ವೇಳೆ ಪ್ರತಿಕ್ರಿಯಿಸಿದ ನೀರವ್‌ ಪರ ವಕೀಲ ಕ್ಲೇರ್‌ ಮೋಂಟ್‌ಗೋಮೆರಿ, ''ಕೋರ್ಟ್‌ ನೇಮಕ ಮಾಡಿದ ಸ್ವತಂತ್ರ ವ್ಯಕ್ತಿಯು ಭಾರತಕ್ಕೆ ಭೇಟಿ ನೀಡಿ, ಮಾನವ ಹಕ್ಕುಗಳ ಮಾರ್ಗಸೂಚಿಗೆ ಅನುಗುಣವಾಗಿ ಜೈಲಿನ ಕೋಣೆ ಇದೆಯೇ ಎನ್ನುವುದನ್ನು ಖಚಿತಪಡಿಸಬೇಕು,'' ಎಂದು ಕೋರಿದರು. ವಿಚಾರಣೆ ವೇಳೆ ಇ.ಡಿ ಮತ್ತು ಸಿಬಿಐ ಅಧಿಕಾರಿಗಳು ಕೋರ್ಟ್‌ನಲ್ಲಿ ಹಾಜರಿದ್ದರು.

ನೀರವ್‌ರನ್ನು ಮಾ.19ರಂದು ಬಂಧಿಸಲಾಗಿತ್ತು. ಪ್ರಸ್ತುತ ಲಂಡನ್‌ನ ವ್ಯಾಂಡ್ಸ್‌ವರ್ತ್‌ ಜೈಲಿನಲ್ಲಿದ್ದು, ಅವರ ಮೂರನೇ ಜಾಮೀನು ಅರ್ಜಿಯನ್ನೂ ಈ ತಿಂಗಳ ಆರಂಭದಲ್ಲಷ್ಟೇ ಕೋರ್ಟ್‌ ವಜಾ ಮಾಡಿತ್ತು. ನೀರವ್‌ ಮೋದಿ ಕಳೆದ ಒಂದು ವರ್ಷದಿಂದ ಲಂಡನ್‌ನಲ್ಲಿ ವಾಸವಾಗಿದ್ದು, ವಾಚ್‌ ಮತ್ತು ಜುವೆಲ್ಲರಿಗಳ ಉದ್ಯಮ ನಡೆಸುತ್ತಿದ್ದಾರೆ.

ನೀರವ್‌ ಗಡಿಪಾರಿಗಾಗಿ ಭಾರತ ಬೇಡಿಕೆ ಸಲ್ಲಿಸಿದ್ದು, ಅಲ್ಲಿನ ಕೋರ್ಟ್‌ ವಾರಂಟ್‌ ಹೊರಡಿಸಿ ಬಂಧಿಸಿತ್ತು. ಜಾಮೀನು ನೀಡಿದರೆ ಮತ್ತೆ ಶರಣಾಗಲಾರರು ಎಂಬ ಕಾರಣಕ್ಕೆ ಕಸ್ಟಡಿ ಅವಧಿಯನ್ನು ಮುಂದೂಡಲಾಗುತ್ತಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ 13,500 ಕೋಟಿ ರೂ. ವಂಚಿಸಿ 2018ರ ಜನವರಿಯಲ್ಲಿ ಭಾರತ ಬಿಟ್ಟು ನೀರವ್‌ ಪರಾರಿಯಾಗಿದ್ದರು.

ಜೂ.29ರಂದು ಗಡಿಪಾರು ವಿಚಾರಣೆ

ನೀರವ್‌ ಗಡಿಪಾರಿನ ನಿರ್ದಿಷ್ಟ ದಿನಾಂಕದ ಬಗ್ಗೆ ವಿವರಗಳು ಸ್ಪಷ್ಟವಾಗಿಲ್ಲ. ಆದರೆ, ಬ್ರಿಟನ್‌ ಕೋರ್ಟ್‌ ಕೇಳಿರುವ ಮಾಹಿತಿಗಳು ಗಡಿಪಾರು ಸನ್ನಿಹಿತ ಎನ್ನುವ ಸುಳಿವನ್ನು ನೀಡಿವೆ. ಪ್ರಕರಣ ಕುರಿತು ಗುಣಮಟ್ಟದ ದಾಖಲೆ ಪತ್ರಗಳನ್ನು ನೀಡಬೇಕು ಎಂದು ಕೋರ್ಟ್‌, ಭಾರತ ಸರಕಾರಕ್ಕೆ ಹೇಳಿದೆ. ಗಡಿಪಾರು ಪ್ರಕರಣದ ಮುಂದಿನ ವಿಚಾರಣೆಯನ್ನು ಜೂ.29ಕ್ಕೆ ನಿಗದಿಪಡಿಸಲಾಗಿದೆ. ವಿಜಯ ಮಲ್ಯರ ಗಡಿಪಾರು ಪ್ರಕರಣದಲ್ಲಿ ಸಾವಿರಾರು ಪುಟಗಳ ಕಡತಗಳಿದ್ದವು. ಬಾಕ್ಸ್‌ಗಳಲ್ಲಿ ಅವುಗಳನ್ನು ಕೋರ್ಟ್‌ಗೆ ತರಲಾಗಿತ್ತು. ಹಿಂದಿನ ವಿಚಾರಣೆ ಸಂದರ್ಭದಲ್ಲಿ ಭಾರತ ಸಲ್ಲಿಸಿದ್ದ ದಾಖಲೆಗಳ ಗುಣಮಟ್ಟದ ಬಗ್ಗೆ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ಗುರುವಾರ ಪೇಪರ್‌ವರ್ಕ್‌ ಬಗ್ಗೆ ಪ್ರಸ್ತಾಪಿಸಿದ ಚೀಫ್‌ ಮ್ಯಾಜಿಸ್ಪ್ರೇಟ್‌, ''ಪೇಪರ್‌ ವರ್ಕ್‌ ಸ್ಪಷ್ಟವಾಗಿರಬೇಕು. ಪೇಜಿನೇಷನ್‌, ಇಂಡೆಕ್ಸ್‌ಗಳು ಇರಬೇಕು'' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ