ಆ್ಯಪ್ನಗರ

ನಿರ್ಭಯಾ ಅತ್ಯಾಚಾರಿಗಳಿಗೆ ಇಂದೇ ಗಲ್ಲು?

ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಶಿಕ್ಷೆ ನೀಡಬೇಕು ಎಂಬ ಒತ್ತಾಯ ರಾಷ್ಟ್ರದ್ಯಂತ ಬಲವಾಗಿ ಕೇಳಿಬರುತ್ತಿದ್ದು, ಬೆನ್ನಲ್ಲೇ ನಿರ್ಭಯಾ ಅತ್ಯಾಚಾರಿಗಳನ್ನು ಇಂದು ಗಲ್ಲಿಗೇರಿಸುವ ಸಾಧ್ಯತೆ ಇದೆ.

Vijaya Karnataka Web 16 Dec 2019, 6:56 am
ಹೊಸದಿಲ್ಲಿ: ದೇಶವನ್ನೇ ನಡುಗಿಸಿದ 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳನ್ನು ಸೋಮವಾರ (ಡಿ.16) ಗಲ್ಲಿಗೆ ಏರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Vijaya Karnataka Web Nirbhaya Case


2012ರ ಡಿಸೆಂಬರ್‌ 16ರಂದೇ ಆರು ಮಂದಿ ಪಾತಕಿಗಳು ಚಲಿಸುವ ಬಸ್ಸಿನಲ್ಲಿ ನಿರ್ಭಯಾರನ್ನು ಅತ್ಯಾಚಾರಗೈದು ಹತ್ಯೆ ಮಾಡಿದ್ದರು. ಅವರ ಪೈಕಿ ಒಬ್ಬ ತಿಹಾರ್‌ ಜೈಲಿನಲ್ಲಿಯೇ ಕಾಯಿಲೆಯಿಂದ ಮೃತಪಟ್ಟಿದ್ದು, ಅಪ್ತಾಪ್ತನಾಗಿದ್ದ ಇನ್ನೊಬ್ಬ ಶಿಕ್ಷೆ ಪೂರೈಸಿ ಬಿಡುಗಡೆ ಹೊಂದಿದ್ದಾನೆ. ಉಳಿದ ನಾಲ್ವರನ್ನು ಗಲ್ಲಿಗೆ ಏರಿಸಲು ತಿಹಾರ್‌ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಡೋಲಿ ಜೈಲಿನಲ್ಲಿದ್ದ ನಿರ್ಭಯಾ ಪ್ರಕರಣದ ಅಪರಾಧಿ ಪವನ್‌ ಕುಮಾರ್‌ ಗುಪ್ತಾನನ್ನು ತಿಹಾರ್‌ ಜೈಲಿಗೆ ಸ್ಥಳಾಂತರಿಸಲಾಗಿದೆ. ಉತ್ತರ ಪ್ರದೇಶದಿಂದ ಹ್ಯಾಂಗಮ್ಯಾನ್‌ ಸಹ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿನಯ್‌ ಶರ್ಮಾ, ಮುಕೇಶ್‌ ಸಿಂಗ್‌, ಪವನ್‌ ಕುಮಾರ್‌ ಗುಪ್ತಾ ಮತ್ತು ಅಕ್ಷಯ್‌ ಸಿಂಗ್‌ ಠಾಕೂರ್‌ ಗಲ್ಲುಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು. ಈ ಪೈಕಿ ವಿನಯ್‌ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ವಿಲೇವಾರಿ ವಿಳಂಬಗೊಂಡಿದ್ದರಿಂದ ಗಲ್ಲುಜಾರಿ ಮುಂದೂಡಿಕೆಯಾಗುತ್ತಲೇ ಬಂದಿದೆ. ಈಗ ಶರ್ಮಾ ಅರ್ಜಿ ಹಿಂಪಡೆದಿದ್ದಾನೆ. ಆದರೆ ಅಕ್ಷಯ್‌ ಸಿಂಗ್‌ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಅದರ ವಿಚಾರಣೆಯನ್ನು ಮಂಗಳವಾರ (ಡಿ.18) ನಡೆಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ. ಈ ಹಿಂದೆಯೂ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಇನ್ನೂ ವಿಚಾರಣೆ ಆರಂಭವಾಗದೇ ಇರುವುದರಿಂದ ಸೋಮವಾರವೇ ಗಲ್ಲಿಗೆ ಏರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಾಯುಮಾಲಿನ್ಯವೇ ಜನರನ್ನು ಕೊಲ್ಲುತ್ತಿರುವಾಗ ನಮಗೇಕೆ ಗಲ್ಲು? ನಿರ್ಭಯಾ ರೆಪಿಸ್ಟ್‌ಗಳ ಪ್ರಶ್ನೆ!

ಮೇಲ್ಮನವಿ ಇತ್ಯರ್ಥಕ್ಕೆ ಕಾಲಮಿತಿಗೆ ಆಗ್ರಹ: ಮರಣದಂಡನೆಗೆ ಗುರಿಯಾದವರು ಮೇಲ್ಮನವಿ ಮತ್ತು ಕ್ಷಮಾದಾನ ಅರ್ಜಿ ಸಲ್ಲಿಸಲು, ಅವುಗಳ ವಿಚಾರಣೆ ಪೂರ್ಣಗೊಳಿಸಲು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಬೇಕು ಎಂದು ನಿರ್ಭಯಾ ಪೋಷಕರು ಆಗ್ರಹಿಸಿದ್ದಾರೆ. ''ಅರ್ಜಿ ಹಾಕಿಕೊಂಡು ಅಪರಾಧಿಗಳು ತಮ್ಮ ಶಿಕ್ಷೆ ಜಾರಿಯನ್ನು ಮುಂದೂಡುತ್ತಾ ಇರುತ್ತಾರೆ. ತಮ್ಮ ಮಗಳ ಪ್ರಕರಣದಲ್ಲಿನಾಲ್ವರು ಅತ್ಯಾಚಾರಿಗಳನ್ನು ನೇಣಿಗೇರಿಸಿದಾಗಲೇ ನಿರ್ಭಯಾ ಆತ್ಮಕ್ಕೆ ಶಾಂತಿ ಸಿಗಲಿದೆ,'' ಎಂದು 2012ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಅತ್ಯಾಚಾರಕ್ಕೆ ಗುರಿಯಾಗಿ ಮೃತಪಟ್ಟ ನಿರ್ಭಯಾ ಅವರ ತಂದೆ ಹೇಳಿದ್ದಾರೆ. ಅಧೀನ ನ್ಯಾಯಾಲಯಗಳ ವಿಚಾರಣೆಯಲ್ಲಿ ವಿಳಂಬವಾಗುವುದು ಸರಿ. ಆದರೆ ಸುಪ್ರೀಂಕೋರ್ಟ್‌ ಮಾತ್ರ ಅತ್ಯಾಚಾರ ಪ್ರಕರಣ ಸಂಬಂಧಿತ ಮೇಲ್ಮನವಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ''ಹೈದರಾಬಾದ್‌ ಎನ್‌ಕೌಂಟರ್‌ ನಡೆದಾಗ ಸಾರ್ವಜನಿಕರು ಸಂಭ್ರಮಿಸಿದ್ದು ಯಾಕೆಂದರೆ ವಿಳಂಬವಾಗುತ್ತಿದ್ದ ನ್ಯಾಯ ಶೀಘ್ರ ಸಿಕ್ಕಿತು ಎಂಬ ಖುಷಿಗೆ. ನಾವು ಅನುಭವಿಸುತ್ತಿರುವ ನೋವನ್ನು ಸದ್ಯ ಪಶುವೈದ್ಯೆಯ ಪೋಷಕರು ಅನುಭವಿಸುವ ಪ್ರಮೇಯ ಬಂದಿಲ್ಲ,'' ಎಂದು ಹೇಳಿದರು.

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಲು ಸಿದ್ಧತೆ: ನೇಣು ಕುಣಿಕೆ ತಯಾರಿಸಲು ಆರ್ಡರ್‌, ತಿಹಾರ್‌ ಜೈಲಿಗೆ ಶಿಫ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ