ಆ್ಯಪ್ನಗರ

ಆಂಧ್ರದ 5 ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಇಲ್ಲ

ಕರ್ನಾಟಕದಲ್ಲಿ ತೆರವಾಗಿರುವ ಮೂರು ಸಂಸತ್‌ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿರುವ ಆಯೋಗ ಆಂಧ್ರ ಪ್ರದೇಶದ ಐದು ಸ್ಥಾನಗಳಿಗೆ ಘೋಷಿಸದಿರುವುದನ್ನು ಮುಂದಿಟ್ಟುಕೊಂಡು ಕೆಲವು ಪಕ್ಷಗಳು ತಕರಾರು ತೆಗೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳ ಹಿನ್ನೆಲೆಯಲ್ಲಿ ಆಯೋಗ ಈ ಸ್ಪಷ್ಟನೆ ನೀಡಿದೆ.

Vijaya Karnataka 10 Oct 2018, 10:06 am
ಹೊಸದಿಲ್ಲಿ: ಆಂಧ್ರ ಪ್ರದೇಶದಲ್ಲಿ ತೆರವಾಗಿರುವ ಐದು ಲೋಕಸಭೆ ಸ್ಥಾನಗಳಿಗೆ ಯಾವುದೇ ಕಾರಣಕ್ಕೂ ಉಪ ಚುನಾವಣೆ ನಡೆಸುವ ಅಗತ್ಯವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. 1951ರ ಜನಪ್ರತಿನಿಧಿಗಳ ಕಾಯಿದೆ ಅನುಸಾರ ಆಯೋಗ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
Vijaya Karnataka Web election commission


ಕರ್ನಾಟಕದಲ್ಲಿ ತೆರವಾಗಿರುವ ಮೂರು ಸಂಸತ್‌ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿರುವ ಆಯೋಗ ಆಂಧ್ರ ಪ್ರದೇಶದ ಐದು ಸ್ಥಾನಗಳಿಗೆ ಘೋಷಿಸದಿರುವುದನ್ನು ಮುಂದಿಟ್ಟುಕೊಂಡು ಕೆಲವು ಪಕ್ಷಗಳು ತಕರಾರು ತೆಗೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳ ಹಿನ್ನೆಲೆಯಲ್ಲಿ ಆಯೋಗ ಈ ಸ್ಪಷ್ಟನೆ ನೀಡಿದೆ.

ಜನಪ್ರತಿನಿಧಿಗಳ ಕಾಯಿದೆಯ 151ಎ ಸೆಕ್ಷನ್‌ ಅನುಸಾರ ಲೋಕಸಭೆ ಅಥವಾ ವಿಧಾನಸಭೆ ಕ್ಷೇತ್ರ ತೆರವಾದ ಆರು ತಿಂಗಳೊಳಗೆ ಉಪ ಚುನಾವಣೆ ನಡೆಸುವುದು ಕಡ್ಡಾಯವಾಗಿದೆ. ಆದರೆ ಇಲ್ಲಿ ಸದಸ್ಯರ ಉಳಿಕೆ ಅವಧಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ರಾಜ್ಯದ ಬಳ್ಳಾರಿ (ಪರಿಶಿಷ್ಟ ಪಂಗಡ), ಶಿವಮೊಗ್ಗ ಮತ್ತು ಮಂಡ್ಯ ಲೋಕಸಭೆ ಕ್ಷೇತ್ರಗಳು ಕ್ರಮವಾಗಿ ಈ ವರ್ಷದ ಮೇ 18 ಮತ್ತು 21ರಂದು ತೆರವಾಗಿವೆ. ಹಾಲಿ ಲೋಕಸಭೆಯ ಅವಧಿ 2019ರ ಜೂನ್‌ 3ಕ್ಕೆ ಅಂತ್ಯಗೊಳ್ಳುವುದರಿಂದ ಇಲ್ಲಿ ಸದಸ್ಯರ ಉಳಿಕೆ ಅವಧಿ ಒಂದು ವರ್ಷಕ್ಕಿಂತಲೂ ಹೆಚ್ಚಿದೆ. ಹಾಗಾಗಿ ಉಪ ಚುನಾವಣೆ ಘೋಷಿಸಲಾಗಿದೆ. ಆದರೆ ಆಂಧ್ರದ ಐದು ಲೋಕಸಭೆ ಕ್ಷೇತ್ರಗಳು 2018ರ ಜೂನ್‌ 20ರಂದು ತೆರವಾಗಿದ್ದು, ಇಲ್ಲಿ ಸದಸ್ಯರ ಉಳಿಕೆ ಅವಧಿ ಒಂದು ವರ್ಷಕ್ಕಿಂತಲೂ ಕಡಿಮೆ ಇರುವುದರಿಂದ ಉಪ ಚುನಾವಣೆ ಅಗತ್ಯವಾಗಿರುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಕಳೆದ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ ಬಿ.ಎಸ್‌.ಯಡಿಯೂರಪ್ಪ (ಶಿವಮೊಗ್ಗ), ಬಿ.ಶ್ರೀರಾಮುಲು (ಬಳ್ಳಾರಿ-ಪರಿಶಿಷ್ಟ ಪಂಗಡ) ಮತ್ತು ಸಿ.ಎಸ್‌.ಪುಟ್ಟರಾಜು (ಮಂಡ್ಯ) ಅವರು ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ