ರುಂಡವಿಲ್ಲದ ಹುತಾತ್ಮನ ಶವ ಕಂಡು ಕೆಂಡವಾದ ಊರು
ಹುತಾತ್ಮ ಯೋಧರ ಕುಟುಂಬದಲ್ಲಿ ಮಡುಗಟ್ಟಿದ ಆಕ್ರೋಶ | ಪಾಕ್ ನಡೆಗೆ ಸರ್ವತ್ರ ಖಂಡನೆ | ಸೇನೆಗೆ ಪೂರ್ಣ ಅಧಿಕಾರ ನೀಡಲು ಆಗ್ರಹ
ಹೊಸದಿಲ್ಲಿ: ಹುತಾತ್ಮ ಯೋಧ ಪರಂಜಿತ್ ಸಿಂಗ್ ಅವರ ಮೃತದೇಹ ಹೊತ್ತಿದ್ದ ಶವಪೆಟ್ಟಿಗೆ ಮೇಲೆ ರಾಷ್ಟ್ರಧ್ವಜ ಹೊದಿಸಿ ಗೌರವಿಸಲಾಗಿತ್ತು. ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ನಡೆದಿದ್ದವು. ಆದರೆ ಕುಟುಂಬಸ್ಥರು, ಇದು ಯಾರ ಮೃತದೇಹ? ಬಾಕ್ಸ್ನಲ್ಲಿ ಇಟ್ಟರೆ ಹೇಗೆ ನಂಬುವುದು? ಮೃತದೇಹ ನೋಡಲು ಅವಕಾಶ ಕೊಡಿ. ಇಲ್ಲದಿದ್ದರೆ ಅಂತಿಮ ವಿಧಿವಿಧಾನಗಳಿಗೆ ಅವಕಾಶ ನೀಡೆವು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಅಧಿಕಾರಿಗಳು ಅವಕಾಶ ಕೊಟ್ಟರು. ಪತ್ನಿ ಪರಂಜಿತ್ ಕೌರ್, ಶವಪೆಟ್ಟಿಗೆ ತೆರೆದಾಗ ರುಂಡವಿಲ್ಲದ ಪತಿಯ ದೇಹ ನೋಡಿ ಬಿಕ್ಕಿ ಬಿಕ್ಕಿ ಅತ್ತರು. ಅದಕ್ಕೆ ಕಾರಣರಾದವರ ವಿರುದ್ಧ ಕೆಂಡಕಾರುತ್ತಲೇ ಕುಸಿದುಬಿದ್ದರು....
''ನನ್ನ ಅಪ್ಪನನ್ನು ಹೀಗೆ ನಿರ್ದಯವಾಗಿ ಕೊಂದುಹಾಕಿದ ಪಾಕಿಸ್ತಾನದ ಆ ಪರಮ ಪಾಪಿಗಳನ್ನು ಸುಮ್ಮನೇ ಬಿಡಬೇಡಿ. ಯೋಧರಿಬ್ಬರ ಶಿರಚ್ಛೇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಗಡಿ ದಾಟಿ 50 ಪಾಕಿಗಳ ತಲೆ ಕಡಿದು ತರುವ ಮೂಲಕ ಅಪ್ಪನ ತ್ಯಾಗಕ್ಕೆ ಗೌರವ ಸಲ್ಲಿಸಬೇಕು. ಆಗಲೇ ನಮ್ಮ ನೋವಿಗೆ ಸಮಾಧಾನ...,'' ಹೀಗೆ ಭಾವೋದ್ವೇಗದಿಂದ ನುಡಿದಾಕೆ ಸರೋಜಾ. ಪಾಕ್ ಸೇನೆ ನಡೆಸಿದ ಪೈಶಾಚಿಕ ಕೃತ್ಯದಲ್ಲಿ ಹುತಾತ್ಮರಾದ ಬಿಎಸ್ಎಫ್ ಯೋಧ ಪ್ರೇಮ್ ಸಾಗರ್ ಅವರ ಪುತ್ರಿ ಆಕೆ.
ಸೋಮವಾರ ಜಮ್ಮು-ಕಾಶ್ಮೀರದ ಪೂಂಛ್ ಗಡಿಯಲ್ಲಿ ಭಾರತದ ಭೂ ಪ್ರದೇಶದೊಳಗೆ 250 ಮೀಟರ್ ನುಗ್ಗಿ ಇಬ್ಬರು ಯೋಧರ ಶಿರಚ್ಛೇದ ನಡೆಸಿ, ದೇಹವನ್ನು ಛಿದ್ರಛಿದ್ರವಾಗಿಸಿ ಕುಕೃತ್ಯ ಎಸಗಿದ ಪಾಕಿಸ್ತಾನ ಸೇನೆ ವಿರುದ್ಧ ಈಗ ಎಲ್ಲೆಡೆ ಭುಗಿಲೆದ್ದಿರುವ ಆಕ್ರೋಶಕ್ಕೆ ರೂಪಕದಂತಿವೆ ಈ ಎರಡೂ ಘಟನೆಗಳು. ಹುತಾತ್ಮ ಯೋಧರಾದ 22ನೇ ಸಿಖ್ ಇನ್ಫೆಂಟ್ರಿಯ ಪರಂಜೀತ್ ಸಿಂಗ್ (42) ಅವರ ಪಂಜಾಬ್ನ ತರನ್ ತಾರನ್ ಜಿಲ್ಲೆಯ ವೈನ್ಪೋಯಿನ್ ಗ್ರಾಮ ಹಾಗೂ ಬಿಎಸ್ಎಫ್ ಹೆಡ್ ಕಾನ್ಸ್ಟೇಬಲ್ ಪ್ರೇಮ್ಸಾಗರ್ (45) ಅವರ ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯ ಠೇಕಣ್ಪುರದಲ್ಲಿ ಇಂತಹ ಚಿತ್ರಣಗಳು ಕಂಡುಬಂದವು.
ಹುತಾತ್ಮ ಯೋಧರಿಬ್ಬರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಇಡೀ ದೇಶವೇ ಕಂಬನಿ ಮಿಡಿದಿದ್ದು, ಅಲ್ಲಲ್ಲಿ ಪಾಕ್ ಧ್ವಜ ಸುಟ್ಟು ಹಾಕಿ ಪ್ರತಿಭಟನೆ ನಡೆಸಲಾಗಿದೆ. ಸರಕಾರ ಕೈಕೊಟ್ಟಿ ಕುಳಿತುಕೊಳ್ಳದೇ ಉಗ್ರ ನಿಲುವು ಪ್ರದರ್ಶಿಸಬೇಕು. ಇನ್ನಷ್ಟು ಸರ್ಜಿಕಲ್ ದಾಳಿ ಮೂಲಕ ಪಾಕ್ ಕುತಂತ್ರವನ್ನು ಬಗ್ಗು ಬಡಿಯಬೇಕೆಂಬ ಆಗ್ರಹ ಸರ್ವತ್ರ ವ್ಯಕ್ತವಾಗಿದೆ. ಯೋಧರಿಬ್ಬರ ಊರುಗಳಂತೂ ಕೆಂಡವಾಗಿವೆ.
ಅಂತ್ಯ ಕ್ರಿಯೆಗೂ ಮುನ್ನ ಭಾರತೀಯ ಸೇನೆಯು ಮೃತದೇಹಗಳಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿ, ಹುಟ್ಟೂರಿಗೆ ಕಳುಹಿಸಿಕೊಟ್ಟಿತ್ತು.
ನಾವೇಕೆ ಹೇಡಿಯಾಗಬೇಕು:
''ಭಾರತೀಯ ಸೇನೆ ಮನಸು ಮಾಡಿದರೆ, ಪಾಕಿಸ್ತಾನದ ಆರ್ಭಟವನ್ನು ವಾರದಲ್ಲಿ ತಣ್ಣಗಾಗಿಸಬಹುದು. ಅಷ್ಟರ ಮಟ್ಟಿಗೆ ಸೇನೆ ಬಲಿಷ್ಠವಾಗಿದೆ. ಇಷ್ಟಿದ್ದೂ ಪ್ರಧಾನಿ ಮೋದಿ ಅವರ ಸರಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಲು ಏಕೆ ಹಿಂದೇಟು ಹಾಕುತ್ತಿದೆ. ನಾವೇಕೆ ಹೇಡಿಯಾಗಬೇಕು. ನಮ್ಮ ಯೋಧರು ಏಕೆ ಹೀಗೆ ನಿರ್ದಯವಾಗಿ ಸಾಯಬೇಕು,'' ಎಂದು ಪ್ರಶ್ನಿಸುತ್ತಾರೆ ಯೋಧ ಪರಂಜೀತ್ ಸಹೋದರ ರಂಜಿತ್ಸಿಂಗ್.
''ನನ್ನ 12 ವರ್ಷದ ಸಹೋದರನ ಮಗ, ಅಪ್ಪ ಎಲ್ಲಿ ಎಂದು ಕೇಳುತ್ತಿದ್ದಾನೆ. ಅವನಿಗೆ ನಾನು ಏನೆಂದು ಉತ್ತರ ಕೊಟ್ಟು ಸಂತೈಸಲಿ. ಸಹೋದರ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಕ್ಕೆ ಹೆಮ್ಮೆ ಇದೆ. ಆದರೆ ಕೇಂದ್ರ ಸರಕಾರ ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆಗೆ ಪೂರ್ಣ ಅಧಿಕಾರ ಕೊಡಬೇಕು. ಪಾಕ್ ಅಟ್ಟಹಾಸ ಮಟ್ಟಹಾಕಲು ನಮ್ಮ ಸಿಖ್ ರೆಜಿಮೆಂಟ್ ಯೋಧರ ಬಲವೇ ಸಾಕಾಗುತ್ತದೆ,'' ಎಂದು ಎದೆತಟ್ಟಿಕೊಂಡರು ರಂಜಿತ್.
ದುಃಖ ಉಮ್ಮಳಿಸಿ ಬಂತು...:
ಉತ್ತರ ಪ್ರದೇಶದ ಪೇಮ್ಸಾಗರ್ (45) ಅವರ ಮೃತದೇಹ ನೋಡಿದ ಪುತ್ರಿ ಸರೋಜಾಗೆ ದುಃಖ ತಡೆಯಲಾಗಲಿಲ್ಲ, ''ಅಪ್ಪನ ತ್ಯಾಗ ವ್ಯರ್ಥವಾಗಲು ಭಾರತೀಯ ಸೇನೆ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಈ ಹತ್ಯೆಗೆ ಪ್ರತಿಯಾಗಿ, ಗಡಿ ದಾಟಿ ನುಗ್ಗಿ 50 ಪಾಕಿಗಳ ತಲೆ ಕಡಿದು ಬರಬೇಕು. ಆಗಲೇ ನಮ್ಮ ನೋವು ಶಮನವಾಗುತ್ತದೆ,'' ಎಂದರು ಆಕೆ. ಈ ದುಃಖದಲ್ಲಿಯೇ ಪತಿಯ ಸಾವಿನ ಆಘಾತದಿಂದ ಹೊರಬರದ ತಾಯಿಯನ್ನು ಸಂತೈಸಿದರು. ಇವರಿಬ್ಬರನ್ನು ಸಮಾಧಾನಪಡಿಸುತ್ತಿದ್ದ ಪ್ರೇಮ್ಸಾಗರ್ ಸಹೋದರ ದಯಾಶಂಕರ್ ''ನನ್ನ ಸಹೋದರ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಕ್ಕೆ ಹೆಮ್ಮೆ ಪಡುವೆ. ಆದರೆ ಪಾಕ್ ಸೇನೆಯ ಕುತಂತ್ರಕ್ಕೆ ಭಾರತ ದಿಟ್ಟ ಉತ್ತರ ನೀಡಲೇಬೇಕು,'' ಎನ್ನುತ್ತಲೇ ಕಣ್ಣೀರಾದರು.
ಎಲ್ಲಿ ಹೋಯಿತು ಧೈರ್ಯ ಮತ್ತು ಭರವಸೆ?
''2013ರಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕರ್ತವ್ಯ ನಿರತವಾಗಿದ್ದ ಯೋಧ ಲ್ಯಾನ್ಸ್ನಾಯಕ್ ಹೇಮರಾಜ್ ಮೇಲೆ ಪಾಕ್ ಸೈನಿಕರು ದಾಳಿ ನಡೆಸಿ, ಶಿರಚ್ಛೇದ ಮಾಡಿದ್ದ ವೇಳೆ, ಕೇಂದ್ರ ಸರಕಾರ, 'ನಮ್ಮ ಒಬ್ಬ ಯೋಧರ ತಲೆ ಕಡಿದರೆ, ಪ್ರತಿಯಾಗಿ 10 ತಲೆ ಉರುಳುತ್ತವೆ,' ಎಂದು ಪಾಕ್ಗೆ ಎಚ್ಚರಿಕೆ ಕೊಟ್ಟು, ನಮಗೆ ಭರವಸೆ ನೀಡಿದ್ದರು. ಅಂದಿನಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಿದ್ದರೂ ಸರಕಾರ ಯಾವ ದಿಟ್ಟ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಎಲ್ಲಿ ಹೋಯಿತು ನಿಮ್ಮ ಧೈರ್ಯ ಹಾಗೂ ಭರವಸೆ,'' ಎಂದು ಸರಕಾರದ ವಿರುದ್ಧ ಕೆಂಡಕಾರಿದ್ದಾರೆ ಯೋಧ ಪರಂಜೀತ್ ಅವರ ಪತ್ನಿ ಪರಂಜಿತ್ ಕೌರ್. ಹೇಮರಾಜ್ ಕುಟುಂಬವೂ ಇದನ್ನೇ ಪ್ರಶ್ನೆ ಮಾಡಿದೆ.
ಪರಂಜಿತ್ ಅವರಿಗೆ ಪತ್ನಿ ಹಾಗೂ ತಂದೆ ಉದ್ಧಮ್ ಸಿಂಗ್ ಹಾಗೂ ಗೌರಿಂದರ್ ಕೌರ್ ಇದ್ದಾರೆ. ಪುತ್ರಿಯರಾದ ಸಿಮ್ರನ್ದೀಪ್ ಕೌರ್, ಖುಷ್ದೀಪ್ ಕೌರ್ ಮತ್ತು ಪುತ್ರ ಸಾಹಿಲ್ದೀಪ್ ಸಿಂಗ್ ಇದ್ದು, ಮಕ್ಕಳ ವಯಸ್ಸು 11ರಿಂದ 14ರ ಅಸುಪಾಸು. ಇಂತಹ ಕುಟುಂಬಕ್ಕೆ ಆಸರೆಯಾಗಿದ್ದ ದುಡಿಯುವ ಕೈ ಈಗ ಇಲ್ಲದಂತಾಗಿದ್ದು ಕಂಗಾಲಾಗಿದೆ.
ಹುಟ್ಟೂರಲ್ಲಿ ಅಂತ್ಯಕ್ರಿಯೆ, ಪಾಕ್ ಧ್ವಜಕ್ಕೆ ಬೆಂಕಿ
ಯೋಧ ಪರಂಜಿತ್ ಸಿಂಗ್ ಹಾಗೂ ಪ್ರೇಮಸಾಗರ್ ಅವರ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಿತು. ಪರಂಜೀತ್ ಅವರದ್ದು ಪಂಜಾಬ್ನ ತರ್ನ್ ತರಣ್ ಜಿಲ್ಲೆಯ ವೈನ್ಪೋಯಿನ್ ಗ್ರಾಮ. ಪ್ರೇಮಸಾಗರ್ ಅವರದ್ದು ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯ ಠೇಕಣ್ಪುರ. ಅಂತ್ಯಕ್ರಿಯೆಯಲ್ಲಿ ಸೇನೆ ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಪಂಜಾಬ್ ಹಾಗೂ ಉತ್ತರ ಪ್ರದೇಶದ ಹಲವು ಕಡೆಗಳಲ್ಲಿ ಪಾಕಿಸ್ತಾನದ ಧ್ವಜಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಗಿದೆ. ಕಾಂಗ್ರೆಸ್ ಸದಸ್ಯರು ಕಾಶ್ಮೀರ ವಿಷಯದಲ್ಲಿ ಕೇಂದ್ರ ಸರಕಾರ ಮೌನ ಅನುಸರಿಸಿದೆ ಎಂದು ಆಪಾದಿಸಿ ಪ್ರತಿಭಟನೆ ನಡೆಸಿದ್ದೂ ವರದಿಯಾಗಿದೆ. ಅಂತ್ಯಕ್ರಿಯೆ ವೇಳೆ 'ಪರಂಜಿತ್ ಅಮರ್ ರಹೇ', 'ಪ್ರೇಮಸಾಗರ್ ಅಮರ್ ರಹೇ' 'ಪಾಕಿಸ್ತಾನ್ ಮುರ್ದಾಬಾದ್' ಘೋಷಣೆಗಳು ಕೇಳಿಬಂದವು.
ಸೇನಾ ವರಿಷ್ಠ ರಾವತ್ ಭೇಟಿ
ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಜಮ್ಮು-ಕಾಶ್ಮೀರದ ಗಡಿಭಾಗದ ಠಾಣೆಗಳಿಗೆ ತೆರಳಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಭೇಟಿ ವೇಳೆ ಅವರು ಹಿರಿಯ ಅಧಿಕಾರಿಗಳ ಜತೆ ಸಂವಾದ ನಡೆಸಿ, ಕಟ್ಟೆಚ್ಚರ ವಹಿಸುವಂತೆ ಸೂಚನೆಗಳನ್ನು ನೀಡಿದರು. ಭಾರತದ ಭದ್ರತಾ ಪಡೆಗಳು ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಗಡಿ ಗ್ರಾಮಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮೋದಿಜೀ, ಬಳೆ ಕಳಚಿಟ್ಟು ಮಾತಾಡಿ...
ಪ್ರಧಾನಿ ಮೋದಿಯವರೇ ನಿಮ್ಮ ಬಳೆಗಳನ್ನು ಕಳಚಿಟ್ಟು, ನೀವು ಏನು ಮಾಡುತ್ತೀರಿ ಎಂಬುದನ್ನು ಪ್ರದರ್ಶಿಸಿ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಲೇವಡಿ ಮಾಡಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಗಡಿಯಲ್ಲಿ ಪಾಕ್ ಸೈನಿಕರಿಂದ ನಮ್ಮ ಯೋಧರ ಶಿರಚ್ಛೇದ ನಡೆದಿದ್ದ ವೇಳೆ ಸಂಸದೆಯಾಗಿದ್ದ ಸುಷ್ಮಾ ಸ್ವರಾಜ್ ಅವರು, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಉದ್ದೇಶಿಸಿ ''ನಿಮಗೆ ಬಳೆ ಕಳುಹಿಸಿ ಕೊಡಲೇ,'' ಎಂದು ಟಾಂಗ್ ಕೊಟ್ಟಿದ್ದರು. ಈಗ ಮೋದಿ ಸಂಪುಟದಲ್ಲಿ ಸುಷ್ಮಾ ವಿದೇಶಾಂಗ ಸಚಿವೆ. ಹಾಗಾಗಿ ಇದನ್ನೇ ಮುಂದಿಟ್ಟುಕೊಂಡು ಕಪಿಲ್ ಸಿಬಲ್ ಅವರು ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.
ಇಡೀ ದೇಶ ಹುತಾತ್ಮ ಯೋಧರ ಪರ ನಿಲ್ಲುತ್ತದೆ. ಈ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಸೇನೆ ಸೇಡು ತೀರಿಸಿಕೊಂಡೇ ತೀರುತ್ತದೆ. ಪಾಕ್ಗೆ ತಕ್ಕ ಪಾಠ ಕಲಿಸಲಾಗುವುದು.
- ಕಿರಣ್ ರಿಜಿಜು, ಗೃಹ ಖಾತೆ ಸಹಾಯಕ ಸಚಿವ
ಇಬ್ಬರು ಯೋಧರ ಶಿರಚ್ಛೇದ ಘಟನೆ ನಮ್ಮ ಸೇನೆಯ ಘನತೆ, ಗೌರವ ಮತ್ತು ನೈತಿಕತೆಗೆ ಧಕ್ಕೆ ತಂದಿದೆ. ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಸೇನೆಗೆ ಮುಕ್ತ ಸ್ವಾತಂತ್ರ ನೀಡಬೇಕು. ಕಳೆದ ಮೂರು ವರ್ಷಗಳಲ್ಲಿ 3 ಇಂತಹ ಬರ್ಬರ ಘಟನೆಗಳು ನಡೆದಿವೆ.
-ಎ.ಕೆ.ಆ್ಯಂಟನಿ, ಮಾಜಿ ರಕ್ಷಣಾ ಸಚಿವ
ಪಾಕಿಸ್ತಾನವೊಂದು ಠಕ್ಕ ರಾಷ್ಟ್ರ. ನಮ್ಮ ಯೋಧರನ್ನು ಹತ್ಯೆ ಮಾಡಿ ವಿಕೃತಿ ಮೆರೆದ ಪಾಕಿಸ್ತಾನದ ವಿರುದ್ಧ ಸರಕಾರ ನಿಶ್ಚಿತವಾಗಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಆ ಬಗ್ಗೆ ಚಿಂತನೆ ನಡೆದಿದೆ. ಶೀಘ್ರ ನಿಮಗದು ತಿಳಿಯಲಿದೆ.
-ವೆಂಕಯ್ಯ ನಾಯ್ಡು, ಕೇಂದ್ರ ಸಚಿವ