ಆ್ಯಪ್ನಗರ

ರಾಜಕೀಯ ಗೇಮ್‌ ನಂತರ ಮಹಾರಾಷ್ಟ್ರದಲ್ಲಿ ಈಗ ಶುರು ನಂಬರ್‌ ಗೇಮ್‌

ಮಹಾರಾಷ್ಟ್ರ ಸರಕಾರ ರಚನೆ ಭಾರಿ ಟ್ವಿಸ್ಟ್‌ಗಳನ್ನು ಪಡೆದುಕೊಂಡಿದೆ. ಈಗ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೆ ಬಹುಮತ ಸಿಗಲಿದೆಯೇ ಎಂಬುದೇ ಪ್ರಶ್ನೆ?

Vijaya Karnataka Web 23 Nov 2019, 5:08 pm
ಮುಂಬಯಿ: ಮಹಾರಾಷ್ಟ್ರದಲ್ಲಿ ನಡೆದ ಮಹಾ ರಾಜಕೀಯ ಬೆಳವಣಿಗೆಗಳು ನಿರಂತರ ನಡೆಯುತ್ತಲೇ ಇದೆ. ಇದರ ಜತೆಗೆ ಬಿಜೆಪಿ ಮತ್ತು ಅಜಿತ್‌ ಪವಾರ್‌ ಬಣದ ಶಾಸಕರು ಈಗ ನಂಬರ್‌ ಗೇಮ್‌ನಲ್ಲಿ ತೊಡಗಿದ್ದಾರೆ.
Vijaya Karnataka Web ದೇವೇಂದ್ರ ಫಡ್ನವಿಸ್‌
ದೇವೇಂದ್ರ ಫಡ್ನವಿಸ್‌


ರಾತ್ರೋರಾತ್ರಿ ದಿಢೀರ್‌ ಎಂದು ಮೈತ್ರಿ ಮಾಡಿಕೊಂಡು ಶನಿವಾರ ಬೆಳಗಿನ ಜಾವ ದೇವೇಂದ್ರ ಫಡ್ನವಿಸ್‌, ಅಜಿತ್‌ ಪವಾರ್‌ ಕ್ರಮವಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಗ ಬಹುಮತ ಸಾಬೀತುಪಡಿಸುವ ಅಗ್ನಿಪರೀಕ್ಷೆ ದೇವಂದ್ರ ಫಡ್ನವಿಸ್‌ ಎದುರಿದೆ.

ಹಾಗಾದರೆ 288 ಸಂಖ್ಯಾಬಲದ ವಿಧಾನಸಭೆಯಲ್ಲಿ ಬಲಾಬಲ ಹೇಗಿದೆ ಎಂಬುದನ್ನು ತಾಳೆ ಹಾಕಿ ನೋಡಬೇಕಾಗಿದೆ. ಒಟ್ಟು 288 ವಿಧಾನಸಭಾ ಸ್ಥಾನಗಳ ಬಲಾಬಲ ಹೀಗಿದೆ.

ಬಿಜೆಪಿ 105
ಶಿವಸೇನೆ 56
ಎನ್‌ಸಿಪಿ 54
ಕಾಂಗ್ರೆಸ್‌ 44
ಇತರ 29
ಬಹುಮತಕ್ಕೆ: 145

ಸಂಖ್ಯಾಬಲದ ಪ್ರಕಾರ ಹೋದರೆ ಬಿಜೆಪಿಗೆ ಬಹುಮತ ಸಾಬೀತುಪಡಿಸಲು 145 ಸ್ಥಾನ ಬೇಕು. 105 ಸ್ಥಾನ ಹೊಂದಿರುವ ಬಿಜೆಪಿಗೆ ಅಜಿತ್‌ ಪವಾರ್‌ ಬಣ ಮತ್ತು ಪಕ್ಷೇತರರು ಸೇರಿ ಇನ್ನೂ 40 ಸ್ಥಾನ ಬೇಕಾಗುತ್ತದೆ.

ಪಕ್ಷಾಂತರ ಕಾಯಿದೆಯ ಚಾಟಿಯೇಟಿನಿಂದ ಅಜಿತ್‌ ಪವಾರ್‌ ಬಣ ತಪ್ಪಿಸಿಕೊಳ್ಳಬೇಕಾದರೆ 35 ಕ್ಕೂ ಹೆಚ್ಚು ಶಾಸಕರು ಕಮಲಕ್ಕೆ ಜೈ ಎನ್ನಬೇಕು. ಇಲ್ಲವೇ ಇತರ ಪಕ್ಷಗಳ ಪೈಕಿ 10ಕ್ಕೂ ಹೆಚ್ಚು ಮಂದಿ ಬಿಜೆಪಿ ಸರಕಾರಕ್ಕೆ ಬೆಂಬಲ ಸೂಚಿಸಬೇಕಾಗುತ್ತದೆ.

ಚುನಾವಣೆ ಫಲಿತಾಂಶ


ಸದ್ಯ ಅಜಿತ್ ಪವಾರ್‌ ಬಣದಲ್ಲಿ ಎಷ್ಟು ಶಾಸಕರು ಇದ್ದಾರೆ ಎಂಬುದು ಇನ್ನೂ ಸಸ್ಪೆನ್ಸ್‌ನಲ್ಲಿದೆ. ಶರದ್‌ ಪವಾರ್ ಹೇಳುವ 8 ರಿಂದ 10 ಶಾಸಕರು ಮಾತ್ರ ಅಜಿತ್ ಜತೆಯಲ್ಲಿದ್ದಾರೆ.

ಕೆಲವು ಮೂಲಗಳ ಪ್ರಕಾರ ಶಿವಸೇನೆಯ ಕೆಲವು ಶಾಸಕರಿಗೆ ಬಿಜೆಪಿ ಈಗಾಗಲೇ ಗಾಳ ಹಾಕಿದೆ ಎನ್ನಲಾಗಿದೆ. ಬಹುಮತ ಪರೀಕ್ಷೆಯಲ್ಲಿ ಎಲ್ಲವೂ ಬಹಿರಂಗವಾಗಲಿದೆ.

ಒಂದು ವೇಳೆ ಬಿಜೆಪಿ, ಅಜಿತ್‌ ಪವಾರ್ ಬಣದ ಸರಕಾರ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದರೆ, ಕಾಂಗ್ರೆಸ್‌, ಶಿವಸೇನೆ ಮತ್ತು ಶರದ್‌ ಪವಾರ್‌ ಬಣದ ಎನ್‌ಸಿಪಿ ಸರಕಾರ ರಚನೆಗೆ ಮುಂದಾಗಲು ಪ್ರಯತ್ನಿಸುವ ಸಾಧ್ಯತೆ ಇದೆ.

ಈಗಿರುವ ಸಂಖ್ಯಾಬಲದ ಪ್ರಕಾರ ಶಿವಸೇನೆ, ಎನ್‌ಸಿಪಿ (ಅಜಿತ್‌ ಪವಾರ್‌ ಬಣ ಹೊರತುಪಡಿಸಿ), ಕಾಂಗ್ರೆಸ್‌ ಸೇರಿದರೆ ಸರಕಾರ ರಚನೆ ಸಾಧ್ಯವಾಗಬಹುದು. ಆಗಲೂ ಪಕ್ಷೇತರರ ಬೆಂಬಲ ಬೇಕಾಗುತ್ತದೆ.

ಸದ್ಯಕ್ಕೆ ಬಿಜೆಪಿಯ ದೇವೇಂದ್ರ ಫಡ್ನವಿಸ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಹುಮತ ಸಾಬೀತುಪಡಿಸುವ ಅಗ್ನಿಪರೀಕ್ಷೆಗೆ ರಾಜ್ಯಪಾಲರು ಯಾವಾಗ ಮುಹೂರ್ತ ಇಡುತ್ತಾರೋ ಕಾದು ನೋಡಬೇಕು. ನಂತರ ನಂಬರ್‌ ಗೇಮ್‌ ಇನ್ನಷ್ಟು ರೋಚಕತೆ ಪಡೆದುಕೊಳ್ಳುವ ನಿರೀಕ್ಷೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ