ಆ್ಯಪ್ನಗರ

ಕರ್ನಾಟಕದ ಕರಾವಳಿಯನ್ನೂ ನಡುಗಿಸಿದ ಓಖೀ ಅಬ್ಬರ ಇನ್ನೂ ಮುಗಿದಿಲ್ಲ

ಚಂಡಮಾರುತ ಮತ್ತು ಸೂಪರ್‌ ಮೂನ್‌ ಪರಿಣಾಮಗಳು ಜತೆಯಾಗಿ ಪ್ರಕ್ಷುಬ್ಧಗೊಂಡ ಕಡಲು ತೀರ ಪ್ರದೇಶದತ್ತ ನುಗ್ಗಿದ್ದು, ಐದು ಮನೆಗಳು ಉರುಳಿವೆ, ಹಲವಾರು ಮನೆಗಳಿಗೆ ಹಾನಿಯಾಗಿದೆ. 40ರಷ್ಟು ಮನೆಗಳು ಅಪಾಯಕ್ಕೆ ಸಿಲುಕಿವೆ.

Vijaya Karnataka Web 4 Dec 2017, 7:59 am

ಮಂಗಳೂರು/ಉಡುಪಿ: ಲಕ್ಷದ್ವೀಪದಿಂದ ಉತ್ತರ ಭಾಗಕ್ಕೆ ಸಾಗುತ್ತಿರುವ ಓಖೀ ಚಂಡಮಾರುತ ಕರ್ನಾಟಕ ಕರಾವಳಿಯಲ್ಲಿ ಭಾರಿ ಅನಾಹುತಗಳನ್ನು ಸೃಷ್ಟಿಸಿದೆ. ಚಂಡಮಾರುತ ಮತ್ತು ಸೂಪರ್‌ ಮೂನ್‌ ಪರಿಣಾಮಗಳು ಜತೆಯಾಗಿ ಪ್ರಕ್ಷುಬ್ಧಗೊಂಡ ಕಡಲು ತೀರ ಪ್ರದೇಶದತ್ತ ನುಗ್ಗಿದ್ದು, ಐದು ಮನೆಗಳು ಉರುಳಿವೆ, ಹಲವಾರು ಮನೆಗಳಿಗೆ ಹಾನಿಯಾಗಿದೆ. 40ರಷ್ಟು ಮನೆಗಳು ಅಪಾಯಕ್ಕೆ ಸಿಲುಕಿವೆ. ನೂರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮೀನುಗಾರಿಕೆ ಸ್ತಬ್ಧಗೊಂಡಿದ್ದು, ದೋಣಿಗಳು ದಡ ಸೇರಿವೆ.

Vijaya Karnataka Web okhi damage to karnataka kostal
ಕರ್ನಾಟಕದ ಕರಾವಳಿಯನ್ನೂ ನಡುಗಿಸಿದ ಓಖೀ ಅಬ್ಬರ ಇನ್ನೂ ಮುಗಿದಿಲ್ಲ


ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪದಲ್ಲಿ ಭಾರಿ ಅವಾಂತರ ಸೃಷ್ಟಿಸಿದ ಓಖೀ ಚಂಡಮಾರುತ ಭಾನುವಾರ ಮಹಾರಾಷ್ಟ್ರ ಹಾಗೂ ಗುಜರಾತ್‌ ತೀರದತ್ತ ಧಾವಿಸುತ್ತಿದ್ದು, ಮುಂದಿನ ಒಂದೆರಡು ದಿನಗಳಲ್ಲಿ 'ಅತ್ಯಂತ ತೀವ್ರ' ಮಟ್ಟದಿಂದ 'ತೀವ್ರ' ಮಟ್ಟಕ್ಕೆ ತಲುಪಲಿದೆ.

ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ದಡಕ್ಕೆ ಬಡಿಯುತ್ತಿವೆ. ಉಳ್ಳಾಲ, ಉದ್ಯಾವರ ಕೊಪ್ಲ, ಬೈಂದೂರು, ಕಿರಿಮಂಜೇಶ್ವರಗಳಲ್ಲಿ ತೀರದಲ್ಲಿ ಭಾರಿ ಆತಂಕ ನೆಲೆಗೊಂಡಿದೆ. ಮಂಗಳೂರಿನ ಉಳ್ಳಾಲದಲ್ಲಿ ಶನಿವಾರ ರಾತ್ರಿ 9 ಗಂಟೆ ಹೊತ್ತಿಗೆ ಒಮ್ಮೆಗೇ ಕಡಲು ಉಕ್ಕೇರಿದ್ದು ಐದಾರು ಅಡಿ ಎತ್ತರದ ಅಲೆಗಳು ಎದ್ದಿದ್ದವು. ಸಮುದ್ರ 5-6 ಮೀಟರ್‌ನಷ್ಟು ಮುಂದೆ ಬಂದಿತ್ತು. ಭಾನುವಾರ ಬೆಳಗ್ಗೆ 11 ಗಂಟೆಯ ಬಳಿಕ ಕಡಲಿನ ಅಬ್ಬರ ಸ್ವಲ್ಪ ಕಡಿಮೆಯಾಗಿದ್ದರೂ ಮತ್ತೆ ರಾತ್ರಿ ಪ್ರಕ್ಷುಬ್ಧಗೊಳ್ಳುವ ಅಪಾಯವಿದೆ, ಹಾಗಾಗಿ ಮೂರ್ನಾಲ್ಕು ದಿನ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತ ಸೂಚಿಸಿದೆ.

ಬೀಚ್‌ಗೆ ಹೋಗಲು ನಿರ್ಬಂಧ: ಯಾವ ಕಾರಣಕ್ಕೂ ಯಾವುದೇ ಮೀನುಗಾರರು ಇನ್ನೆರಡು ದಿನ ಸಮುದ್ರಕ್ಕಿಧಿಯಧಿಬಾಧಿರದು. ಜನರು ಕುಟುಂಬ ಸಹಿತ ಬೀಚ್‌ ತಿರುಗಾಟಕ್ಕೂ ತೆರಳಬಾರದು. ಕಡಲ ಕಿನಾರೆಯ ನಿವಾಸಿಗಳು ಮನೆ ಬಿಟ್ಟು ತಮ್ಮ ಸಂಬಂಧಿಕರು ಅಥವಾ ಜಿಲ್ಲಾಡಳಿತ ಸೂಚಿಸಿರುವ ಮನೆ, ಶಾಲೆ, ಗಂಜಿ ಕೇಂದ್ರ ಅಥವಾ ಉಳ್ಳಾಲ ದರ್ಗಾದ ಪುನರ್ವಸತಿ ಕೇಂದ್ರದಲ್ಲಿ ಇರಬೇಕು ಎಂದು ಸಚಿವ ಯು.ಟಿ. ಖಾದರ್‌ ಸೂಚಿಸಿದ್ದಾರೆ.

ಬೈಂದೂರಿನಲ್ಲಿ ಅಲೆಗಳು ಒಮ್ಮೆಲೆ ರೌದ್ರಾವತಾರ ತಾಳಿರುವುದರಿಂದ ಸುಮಾರು 25 ದೋಣಿಗಳು ನೀರಿನಲ್ಲಿ ತೇಲಲಾರಂಭಿಸಿದವು. ಸ್ಥಳೀಯರು ದೋಣಿಗಳು ಕಡಲ ಪಾಲಾಗದಂತೆ ತಡೆಯುವಲ್ಲಿ ಯಶಸ್ವಿಯಾದರು.

ತಡೆಗೋಡೆ ಸಮುದ್ರಪಾಲು: ಹೊಸಹಿತ್ಲು ಭಾಗದಲ್ಲಿ ಕಡಲ್ಕೊರೆತ ತಡೆಯಲು ಅಳವಡಿಸಿದ ಶಾಶ್ವತ ತಡೆಗೋಡೆ ಭಾರಿ ಅಲೆಯ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ ಸಮುದ್ರ ಪಾಲಾಗಿದೆ.

4 ಹೆಲಿಕಾಪ್ಟರ್‌ ನಿಯೋಜನೆ: ತೀವ್ರ ಕಡಲ್ಕೊರೆತ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ಹೆಲಿಕಾಪ್ಟರ್‌ಗಳನ್ನು ಕೋಸ್ಟ್‌ ಗಾರ್ಡ್‌ ಮಂಗಳೂರಿನಲ್ಲಿ ನಿಯೋಜಿಸಲಿದೆ.

ಸೈಂಟ್‌ ಮೇರಿಸ್‌ ದ್ವೀಪ, ಬೀಚ್‌ಗೆ ನಿಷೇಧ

ಮಲ್ಪೆ ಸೈಂಟ್‌ ಮೇರಿಸ್‌ದ್ವೀಪಕ್ಕೆ ಪ್ರವೇಶ ನಿಷೇಧಿಸಿದ್ದು, ಚಂಡಮಾರುತದ ಸಲುವಾಗಿ ಪ್ರವೇಶ ನಿಷೇಧ ಎನ್ನುವ ನಾಮಫಲಕ ಹಾಕಲಾಗಿದೆ. ಪ್ರವಾಸಿಗರು ಬೀಚ್‌ಗೆ ಇಳಿದು ಚೆಲ್ಲಾಟ ಆಡದಂತೆ ಸಮುದ್ರದ ದಡದಲ್ಲೇ ಹಗ್ಗ ಕಟ್ಟಿ ಕೆಂಪು ಬಣ್ಣದ ಬಾವುಟ ಹಾಕಲಾಗಿದೆ.

ಸಮಾರಂಭದಿಂದ ಓಡಿದ ಜನ

ಕಡಲ ಅಬ್ಬರಕ್ಕೆ ಉಳ್ಳಾಲದ ಪ್ರತಿಷ್ಠಿತ ರೆಸಾರ್ಟ್‌ನಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ವಿವಾಹ ವಾರ್ಷಿಕೋತ್ಸವವನ್ನು ಬೇಗನೆ ಮುಗಿಸಲಾಯಿತು. ತಟದಲ್ಲೇ ಇರುವ ರೆಸಾರ್ಟ್‌ಗೆ ಕಡೆಗೆ ನೀರು ನುಗ್ಗಿದ್ದರಿಂದ ಜನರು ದಿಕ್ಕಾಪಾಲಾಗಿ ಓಡಿದರು. ರೆಸಾರ್ಟ್‌ನ ಆವರಣ ಗೋಡೆ ದಾಟಿ ಬಂದ ಭಾರೀ ಗಾತ್ರದ ಅಲೆಗಳಿಂದಾಗಿ ಆವರಣ ಗೋಡೆ ಕುಸಿದಿದೆ.

ತೀವ್ರಮಟ್ಟ ತಲುಪಲಿದೆ ಓಖೀ

ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪದಲ್ಲಿ ಭಾರಿ ಅವಾಂತರ ಸೃಷ್ಟಿಸಿದ ಓಖೀ ಚಂಡಮಾರುತ ಭಾನುವಾರ ಮಹಾರಾಷ್ಟ್ರ ಹಾಗೂ ಗುಜರಾತ್‌ ತೀರದತ್ತ ಧಾವಿಸುತ್ತಿದ್ದು, ಮುಂದಿನ ಒಂದೆರಡು ದಿನಗಳಲ್ಲಿ 'ಅತ್ಯಂತ ತೀವ್ರ' ಮಟ್ಟದಿಂದ 'ತೀವ್ರ' ಮಟ್ಟಕ್ಕೆ ತಲುಪಲಿದೆ.

ಗಂಟೆಗೆ 17 ಕಿ.ಮೀ. ವೇಗದಲ್ಲಿ ಚಂಡಮಾರುತ ಉತ್ತರ ಕರಾವಳಿಯತ್ತ ಸಾಗಿದ್ದು, 48 ಗಂಟೆಗಳಲ್ಲಿ ತೀರಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿರುವ ಹಿನ್ನೆಲೆಯಲ್ಲಿ ಗೋವಾ ಸೇರಿದಂತೆ ಕಡಲಂಚಿನ ನಗರಗಳಲ್ಲಿ ಬೀಚ್‌ಗಳಿಗೆ ತೆರಳದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ.

ಈ ಮಧ್ಯೆ, 71 ತಮಿಳುನಾಡಿನ ಮೀನುಗಾರರು ಸೇರಿದಂತೆ ಒಟ್ಟು 357 ಬೆಸ್ತರನ್ನು ಭಾನುವಾರ ರಕ್ಷಿಸಿ, ದಡಕ್ಕೆ ಸೇರಿಸಲಾಗಿದೆ. ಲಕ್ಷದ್ವೀಪದಲ್ಲಿ 25 ಮಂದಿಯನ್ನು ರಕ್ಷಿಸಲಾಗಿದೆ. ತಮಿಳುನಾಡಿನಲ್ಲಿ ಕಳೆದ ಮೂರು ದಿನಗಳಲ್ಲಿ ಒಟ್ಟು 690 ಮೀನುಗಾರರನ್ನು ರಕ್ಷಿಸಲಾಗಿದ್ದು, ಇನ್ನೂ 96 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಸಚಿವೆ ಭೇಟಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಚಂಡಮಾರುತದಿಂದ ಹಾನಿಗೆ ಒಳಗಾದ ಕನ್ಯಾಕುಮಾರಿ ಮತ್ತು ತಿರುವನಂತಪುರಂಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದೇಶಿಯರ ರಕ್ಷಣೆ: ಕಾಣಕೋಣ ಪಾಲೊಲೆಂ ಬೀಚ್‌ನಲ್ಲಿ ಈಜುತ್ತಿದ್ದ ಇಬ್ಬರು ವಿದೇಶಿ ಯುವತಿಯರು ಹಾಗೂ ಅವರ ರಕ್ಷ ಣೆಗೆ ತೆರಳಿದ್ದ ನೌಕಾಪಡೆ ಸಿಬ್ಬಂದಿ ಸೇರಿ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮತ್ತೆ ವಾಯುಭಾರ ಕುಸಿತ?

ದಕ್ಷಿಣ ಅಂಡಮಾನ್‌ ಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮುಂದಿನ 48 ಗಂಟೆಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ. ಇದರಿಂದ ತಮಿಳುನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ವಾಯುಭಾರ ಕುಸಿತವು ಮುಂದಿನ 3-4 ದಿನಗಳಲ್ಲಿ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರದತ್ತ ಸಾಗಲಿದೆ. ಡಿ.7ರಿಂದ ಒಡಿಶಾದಲ್ಲೂ ಸತತ ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ