ಆ್ಯಪ್ನಗರ

ಸುಳ್ಳು ಹೇಳುವುದೇ ರಾಹುಲ್‌ ಕೆಲಸ: ರಫೇಲ್‌ ಆರೋಪಕ್ಕೆ ಬಿಜೆಪಿ ಪ್ರತಿಕ್ರಿಯೆ

ರಾಹುಲ್‌ ಅವರ 10 ಆರೋಪಗಳನ್ನು ಪಟ್ಟಿ ಮಾಡಿರುವ ಪಕ್ಷವು, ಅವುಗಳನ್ನು ನಿರಾಕರಿಸುವ ನಿಟ್ಟಿನಲ್ಲಿ ಕೆಲವು ದಾಖಲೆಗಳು, ಫೋಟೊಗಳು, ವಿಡಿಯೊಗಳನ್ನೂ ಬಿಜೆಪಿ ಪ್ರಕಟಿಸಿದೆ.

Vijaya Karnataka 10 Feb 2019, 5:00 am
ಹೊಸದಿಲ್ಲಿ: ರಫೇಲ್‌ ವಿಚಾರದಲ್ಲಿ ಸರಕಾರದ ವಿರುದ್ಧ ಸಾಲುಸಾಲು ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ''ಸುಳ್ಳುಗಳ ಸರದಾರ,'' ಎಂದು ಬಿಜೆಪಿ ಟೀಕಿಸಿದೆ.
Vijaya Karnataka Web raaga


ಶನಿವಾರ 'ಲಯರ್‌ ರಾಹುಲ್‌' ಹ್ಯಾಶ್‌ಟ್ಯಾಗ್‌ನಲ್ಲಿ ಸರಣಿ ಟ್ವೀಟ್‌ ಮಾಡಿದ ಬಿಜೆಪಿಯು, ''ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದ ಚಿಂತನೆಯಿಂದ ನೀವು ದಿನವನ್ನು ಆರಂಭಿಸಿದರೆ, ರಾಹುಲ್‌ ಗಾಂಧಿ ಅವರು ಹೊಸ ಸುಳ್ಳುಗಳನ್ನು ಹೆಣೆಯುವ ಯೋಚನೆಯೊಂದಿಗೆ ದಿನ ಆರಂಭಿಸುತ್ತಾರೆ. ಅವರ ಎಲ್ಲಾ ಸುಳ್ಳುಗಳಿಗೂ ಉತ್ತರ ನೀಡುವುದು ಕಷ್ಟ. ಆದರೂ ರಫೇಲ್‌ ಕುರಿತು ಅವರು ಮಾಡಿರುವ ಸುಳ್ಳು ಆರೋಪಗಳ ಪೈಕಿ ಪ್ರಮುಖ ಆಪಾದನೆಗಳಿಗೆ ಉತ್ತರಿಸುತ್ತೇವೆ,'' ಎಂದು ಆರಂಭದ ಟ್ವೀಟ್‌ನಲ್ಲಿಯೇ ಹೇಳಿದೆ.

ರಾಹುಲ್‌ ಅವರ 10 ಆರೋಪಗಳನ್ನು ಪಟ್ಟಿ ಮಾಡಿರುವ ಪಕ್ಷವು, ಅವುಗಳನ್ನು ನಿರಾಕರಿಸುವ ನಿಟ್ಟಿನಲ್ಲಿ ಕೆಲವು ದಾಖಲೆಗಳು, ಫೋಟೊಗಳು, ವಿಡಿಯೊಗಳನ್ನೂ ಪ್ರಕಟಿಸಿದೆ. 36 ಯುದ್ಧವಿಮಾನಗಳ ಖರೀದಿಗಾಗಿ 2016ರಲ್ಲಿ ಫ್ರಾನ್ಸ್‌ ಕಂಪನಿ ಜತೆ ನಡೆದ 59,000 ಕೋಟಿ ರೂ. ಮೊತ್ತದ ಒಪ್ಪಂದದಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ರಾಹುಲ್‌ ಗಾಂಧಿ ಕೆಲ ತಿಂಗಳುಗಳಿಂದ ಆರೋಪ ಮಾಡುತ್ತಲೇ ಇದ್ದಾರೆ.

''ರಫೇಲ್‌ ಒಪ್ಪಂದದ ಕುರಿತು ಪ್ರಧಾನಿ ಕಾರ್ಯಾಲಯವೂ ಸಮಾನಾಂತರ ಮಾತುಕತೆ ನಡೆಸುತ್ತಿತ್ತು,'' ಎಂದು ಪತ್ರಿಕೆಯೊಂದರಲ್ಲಿ 2015ರಲ್ಲಿ ಪ್ರಕಟವಾಗಿದ್ದ ವರದಿ ಆಧರಿಸಿ, ''ಹಗರಣದಲ್ಲಿ ಪ್ರಧಾನಿಯೇ ನೇರವಾಗಿ ಭಾಗಿಯಾಗಿದ್ದಾರೆ,'' ಎಂದು ರಾಹುಲ್‌ ಶುಕ್ರವಾರ ಆರೋಪಿಸಿದ್ದರು. ''ಪ್ರಧಾನಿ ಕಾರ್ಯಾಲಯವು ಮಾತುಕತೆಯ ವಿವರಗಳನ್ನು ಗಮನಿಸುತ್ತಿದೆ,'' ಎಂದು ಅಂದಿನ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಕೈಬರಹದಲ್ಲಿದ್ದ ಟಿಪ್ಪಣಿಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬುದಾಗಿ ರಫೇಲ್‌ ಮಾತುಕತೆ ತಂಡದ ನೇತೃತ್ವ ವಹಿಸಿದ್ದ ರಕ್ಷಣಾ ಸಚಿವಾಯದ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಸುಳ್ಳು ವರದಿ ಪ್ರಕಟಿಸಿರುವ ಪತ್ರಿಕೆ ವಿರುದ್ಧವೂ ಕಿಡಿಕಾರಿರುವ ಬಿಜೆಪಿ, ''ಹೊಸ ಅನ್ವೇಷಣೆ ಮಾಡಿರುವುದಾಗಿ ಬೀಗುತ್ತಿರುವ ರಾಹುಲ್‌ ಗಾಂಧಿ ಮತ್ತು ಪತ್ರಿಕೆಗಳು ಆ ಅನ್ವೇಷಣೆಯನ್ನು ಸುಪ್ರೀಂ ಕೋರ್ಟ್‌ ಮುಂ ದೆ ಇಡಬಹುದಾಗಿತ್ತು. ಹಾಗೇಕೆ ಮಾಡಲಿಲ್ಲ?'' ಎಂದು ಪ್ರಶ್ನಿಸಿದೆ.

ಯಾರಿಗೆ ಲಾಭವಾಗಿದೆ?: ರಫೇಲ್‌ ಒಪ್ಪಂದದಿಂದ ಭಾರತೀಯ ವಾಯುಪಡೆ ಬಲಿಷ್ಠವಾಗಿದೆಯೇ ಅಥವಾ ತೊಂದರೆಯಲ್ಲಿ ಸಿಲುಕಿದ್ದ ಉದ್ಯಮಿ ಬಲಿಷ್ಠರಾದರೇ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ. ಪಕ್ಷದ ಮುಖವಾಣಿ 'ಸಾಮ್ನಾ'ದ ಶನಿವಾರದ ಸಂಚಿಕೆಯ ಸಂಪಾದಕೀಯದಲ್ಲಿ ಈ ಆಗ್ರಹ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ