ಆ್ಯಪ್ನಗರ

ಮೋದಿ, ಯೋಗಿ, ಆರ್‌ಎಸ್‌ಎಸ್‌ನ್ನು ಹಿಗ್ಗಾಮುಗ್ಗಾ ಝಾಡಿಸಿದ್ದ ಖುಷ್ಬು ಸುಂದರ್‌ ಈಗ ಬಿಜೆಪಿ ನಾಯಕಿ!

ಖುಷ್ಬು ಸುಂದರ್‌ ಅವರ ಟ್ಟಿಟ್ಟರ್‌ ಟೈಮ್‌ಲೈನ್‌ ಮೇಲೆ ಕಣ್ಣಾಡಿಸಿದರೆ ಬಿಜೆಪಿ ಮತ್ತು ಆ ಪಕ್ಷದ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹಲವಾರು ನಿದರ್ಶನಗಳು ಸಿಗುತ್ತವೆ.

Agencies 12 Oct 2020, 6:45 pm
ಬೆಂಗಳೂರು: ಕಾಂಗ್ರೆಸ್‌ ವಕ್ತಾರೆಯಾಗಿದ್ದ ಬಹುಭಾಷಾ ತಾರೆ ಖುಷ್ಬು ಸುಂದರ್‌ ಸೋಮವಾರ ಏಕಾಏಕಿ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ನಡೆದಿರುವ ಈ ಬೆಳವಣಿಗೆ ಹಲವರನ್ನು ಅಚ್ಚರಿಗೆ ಕೆಡವಿದೆ. ಅದಕ್ಕೆ ಕಾರಣ ಖುಷ್ಬು ಹಿನ್ನೆಲೆ.
Vijaya Karnataka Web Kushbu Sundar


ಕಾಂಗ್ರೆಸ್‌ನಲ್ಲಿದ್ದಷ್ಟು ದಿನ ಅತ್ಯುಗ್ರವಾಗಿ ಬಿಜೆಪಿ, ಸಂಘ ಪರಿವಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾ ಬಂದಿದ್ದರು ಖುಷ್ಟು. ‘ಸಂಘಿಗಳು ಮಂಗನಂತೆ ವರ್ತಿಸುತ್ತಾರೆ’ ಎನ್ನುವಷ್ಟರ ಮಟ್ಟಿಗೆ ಅವರು ಬಿಜೆಪಿ ಮತ್ತು ಸಂಘ ಪರಿವಾರದ ವಿರೋಧಿಯಾಗಿದ್ದರು. ಕೆಲವೇ ದಿನಗಳ ಹಿಂದೆಯೂ ಅವರು ಮೋದಿ ವಿರುದ್ಧ ಕಿಡಿಕಾರಿದ್ದರು. ಹೀಗಿದ್ದ ಖುಷ್ಬು ಈಗ ಏಕಾಏಕಿ ಬಿಜೆಪಿ ಸೇರುತ್ತಿದ್ದಂತೆ ಅವರ ಹಳೆಯ ಟ್ಟೀಟ್‌ಗಳು, ಹೇಳಿಕೆಗಳು ಮುನ್ನೆಲೆಗೆ ಬಂದಿವೆ.

ಅವರ ಟ್ಟಿಟ್ಟರ್‌ ಟೈಮ್‌ಲೈನ್‌ ಮೇಲೆ ಕಣ್ಣಾಡಿಸಿದರೆ ಬಿಜೆಪಿ ಮತ್ತು ಆ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಹಲವಾರು ನಿದರ್ಶನಗಳು ಸಿಗುತ್ತವೆ. ಅದರಲ್ಲೇ ಒಂದಿಷ್ಟನ್ನು ಇಲ್ಲಿ ನೀಡಲಾಗಿದೆ.

1. 2018ರಲ್ಲಿ ಅಧಿವೇಶನ ನಡೆಯಲು ಕಾಂಗ್ರೆಸಿಗರು ಬಿಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಒಂದು ದಿನ ಉಪವಾಸ ಕೂತಿದ್ದರು. ಅಂದು ಟ್ಟೀಟ್‌ ಮಾಡಿದ್ದ ಖುಷ್ಬು, "ಉಪವಾಸ ದಿವಸದಂದು ಮೋದಿಜಿ ವಿಮಾನದಲ್ಲೇ ಬೆಳಗ್ಗಿನ ಉಪಹಾರ ಸೇವಿಸಿ, ವಿಮಾನದಲ್ಲೇ ಮಧ್ಯಾಹ್ನದ ಊಟ ಮಾಡಿದ್ದಾರೆ. ಎಲ್ಲವೂ ಬಕ್ವಾಸ್‌, ತಮ್ಮ ಇತರ ಜುಮ್ಲಾಗಳಂತೆ ಇದೂ ಕೂಡ ಫೇಕ್‌," ಎಂದು ಜರೆದಿದ್ದರು.

2. 2019ರಲ್ಲಿ ಟ್ಟೀಟ್‌ ಮಾಡಿದ್ದ ಅವರು, "ಸಂಘಿಗಳು ಸಿಕ್ಸ್ತ್‌ ಸೆನ್ಸ್‌ ಇಲ್ಲದ ಮಂಗನಂತೆ ವರ್ತಿಸುತ್ತಿದ್ದಾರೆ," ಎಂದು ಜರೆದಿದ್ದರು.

3. ಮೊನ್ನೆಮೊನ್ನೆಯಷ್ಟೆ ಕೃಷಿ ಮಸೂದೆ ಬಗ್ಗೆ ಮಾತನಾಡಿದ್ದ ಅವರು ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. “ನೋಡಿ ನರೇಂದ್ರ ಮೋದಿ ಈ ದೇಶ ಕಂಡ ಏಕೈಕ ಪ್ರಧಾನಿ. ಅವರಿಗಿಂತ ಮೊದಲು ಭಾರತಕ್ಕೆ ಯಾರೂ ಇರಲಿಲ್ಲ. ಆದ್ದರಿಂದ ನಾವು ಪ್ರಧಾನಿಗಾಗಿ ವಿಶೇಷವಾಗಿ ತಯಾರಿಸಿದ ವಿಮಾನವನ್ನು ನೀಡಲಿಲ್ಲ. ನೀವು ಸಂಘಿ ಎಂದು ಒಪ್ಪಿಕೊಂಡಾಕ್ಷಣ ನೀವು ಎಂದಿಗೂ ರೈತರ ಸಮಸ್ಯೆಗಳನ್ನು ನೋಡುವುದಿಲ್ಲ. ಹೀಗಾಗಿ ನಿಮಗೆ ರೈತರ ಮಸೂದೆ 2020 ಹೊರಗಿನದ್ದಾಗಿ ಕಾಣುತ್ತದೆ," ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

4. ಜುಲೈನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ಸಮರ್ಥಿಸಿಕೊಂಡಿದ್ದ ಖುಷ್ಬೂ ತಾವೆಂದೂ ಬಿಜೆಪಿ ಸೇರಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. "ಸಂಘಿಗಳು ರಿಲಾಕ್ಸ್‌ ಆಗಿರಿ, ಸಂತೋಷ ಪಡಬೇಡಿ. ನಾನು ಬಿಜೆಪಿಗೆ ಹೋಗುತ್ತಿಲ್ಲ. ನನ್ನ ಪಕ್ಷಕ್ಕಿಂತ ನನ್ನ ಅಭಿಪ್ರಾಯ ಭಿನ್ನವಾಗಿರಬಹುದು. ಆದರೆ ನಾನು ನನ್ನ ಸ್ವಂತ ಆಲೋಚನೆಯನ್ನು ಹೊಂದಿರುವ ವ್ಯಕ್ತಿ. ಹೌದು, ಎನ್‌ಇಪಿ2020 ಕೆಲವು ವಿಷಯಗಳಲ್ಲಿ ದೋಷಪೂರಿತವಾಗಿದೆ. ಆದರೆ ಬದಲಾವಣೆಯನ್ನು ಸಕಾರಾತ್ಮಕತೆಯಿಂದದ ನೋಡಬಹುದು ಎಂದು ನಾನು ಇನ್ನೂ ಭಾವಿಸುತ್ತೇನೆ,” ಎಂದು ಹೇಳಿದ್ದರು.

5. ಮಾರ್ಚ್‌ನಲ್ಲಿ ಒಂದು ಭಾನುವಾರ ತಮ್ಮ ಸಾಮಾಜಿಕ ಜಾಲತಾಣಗಳನ್ನು ಸಾಧಕರಿಗೆ ಮೀಸಲಿಡುವುದಾಗಿ ಮೋದಿ ಘೋಷಿಸಿದ್ದರು. ಈ ಸಂದರ್ಭದಲ್ಲಿ ಟ್ಟೀಟ್‌ ಮಾಡಿದ್ದ ಬಹುಭಾಷಾ ತಾರೆ, “ಚ್ ಚ್ ಚ್… ಅವರು ಆಸ್ಕರ್‌ಗಾಗಿ ಸ್ಪರ್ಧಿಸಬಹುದು. ನನ್ನನ್ನು ನಂಬಿ, ಅವರು ಗೆಲ್ಲುತ್ತಾರೆ,” ಎಂದು ಮೋದಿಯ ಕಾಲೆಳೆದಿದ್ದರು.

6. 2017 ಅಕ್ಟೋಬರ್‌ 14 ರಂದು, "ಸಂಘಿಗಳೇ ನೀವು ನಮಗೆ, ನೀವು ಯಾರನ್ನು ಅನುಸರಿಸುತ್ತೀರಿ ಎಂಬುದನ್ನು ಪದೇ ಪದೇ ನೆನಪು ಮಾಡಬೇಕಿಲ್ಲ. ಅಸಹ್ಯ, ಹೊಲಸು, ಕೊಳಕು, ಸಂಕುಚಿತ ಮನೋಭಾವದವರು, ನಿಂದಕರು ಮತ್ತು ಟ್ರೋಲ್‌ಗಾಗಿ ಮಾತ್ರ ಬದುಕುತ್ತಿರುವವರು ನೀವು. ನಿಮಗೆ ಮತ್ತು ನಿಮ್ಮ ಮೇಲಿನವರ ಹೆಸರು ಹೇಳಬೇಕಾ?," ಎಂದು ಕಿಡಿಕಾರಿದ್ದರು. ಈ ಮೂಲಕ ಬಿಜೆಪಿ ಮತ್ತು ಸಂಘವನ್ನು ಅನುಸರಿಸುವವರು ಕೇವಲ ಟ್ರೋಲ್‌ಗಾಗಿ ಬದುಕುತ್ತಿರುವವರು ಎಂದಿದ್ದರು.

7. ಉತ್ತರ ಪ್ರದೇಶದ ಹಥ್ರಾಸ್‌ ಘಟನೆಯ ಹಿನ್ನೆಲೆಯಲ್ಲಿ ಟ್ಟೀಟ್‌ ಮಾಡಿದ್ದ ಅವರು, "ಯೋಗಿ ಆದಿತ್ಯನಾಥ್‌, ನೀವು ರಾಜಕಾರಣಿ ಬಿಡಿ ನೀವು ಮನುಷ್ಯರಾಗಿರಲೂ ಅರ್ಹರಲ್ಲ. ನಿಮ್ಮನ್ನು ರಾಜಕಾರಣಿ ಎಂದು ಕರೆಯುವುದನ್ನು ಹಿಂಪಡೆಯುತ್ತೇನೆ, ಕಾರಣ ನೀವು ರಾಜಕಾರಣಿಗಳಿಗೆ ಅವಮಾನ. ನಿಮಗೆ ಮತ್ತು ಉತ್ತರ ಪ್ರದೇಶ ಪೊಲೀಸರಿಗೆ ನಾಚಿಕೆಯಾಗಬೇಕು. ರಾಹುಲ್‌ ಗಾಂಧಿಗೆ ಸೆಲ್ಯೂಟ್‌, ಹೀಗೆ ಮುಂದುವರಿಯಿರಿ," ಎಂದು ಹಥ್ರಾಸ್‌ಗೆ ಭೇಟಿ ನೀಡಿದ್ದ ಕಾಂಗ್ರೆಸ್‌ ನಾಯಕರಿಗೆ ಶುಭವನ್ನೂ ಹಾರೈಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ