ತಿರುಗುಬಾಣಕ್ಕೆ ಗುರಿಯಾದ ಪ್ರತಿಪಕ್ಷಗಳು: ಜೇಟ್ಲಿ ಟೀಕೆ
ಸೇನಾಪಡೆಗಳ ಕಾರ್ಯಾಚರಣೆ ಬಗ್ಗೆ ಸಂಶಯ ಪಡುವ ಮೂಲಕ ಮತ್ತು ದೇಶದ ಜನರ ಮನಸ್ಸಿನಲ್ಲಿ ಶಂಕೆ ಮೂಡಿಸುವ ಮೂಲಕ ಪ್ರತಿಪಕ್ಷಗಳಮಗೆ ತಾವೇ ಗೋಲ್ ಹೊಡೆದುಕೊಂಡಿವೆ ಎಂದು ಜೇಟ್ಲಿ ಕುಟುಕಿದ್ದಾರೆ.
Vijaya Karnataka 17 Mar 2019, 5:00 am
ಹೊಸದಿಲ್ಲಿ: ಬಾಲಾಕೋಟ್ ವಾಯು ದಾಳಿ ಬಗ್ಗೆ ಸಾಕ್ಷ್ಯ ಕೇಳುವ ಮೂಲಕ ಪ್ರತಿಪಕ್ಷಗಳು ತಾವು ಪ್ರಯೋಗಿಸಿದ ತಿರುಗುಬಾಣಕ್ಕೆ ತಾವೇ ಗುರಿಯಾಗಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಬಣ್ಣಿಸಿದ್ದಾರೆ. ಸೇನಾಪಡೆಗಳು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಆಗಲೀ ಅಥವಾ ವಾಯುದಾಳಿಯಾಗಲೀ ಲೋಕಸಭೆ ಚುನಾವಣೆಯ ಸರಕಾಗಬಾರದು. ಕೆಲವು ಪ್ರತಿಪಕ್ಷಗಳು ಪುಲ್ವಾಮಾ ಮತ್ತು ಬಾಲಾಕೋಟ್ ಪ್ರಕರಣಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಪ್ರಧಾನಿ ಮೋದಿ ಅವರತ್ತ ಬೊಟ್ಟು ಮಾಡುತ್ತಿವೆ. 21 ಪ್ರತಿಪಕ್ಷಗಳು ಸರಕಾರದ ವಿರುದ್ಧ ಮಾಡಿದ ಆರೋಪಗಳಿಂದ ಪಾಕಿಸ್ತಾನಕ್ಕೆ ಅನುಕೂಲವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ. 1971ರ ಯುದ್ಧದ ವೇಳೆ ಎಲ್ಲಾ ಪ್ರತಿಪಕ್ಷಗಳೂ ಒಟ್ಟಾಗಿ ಸರಕಾರದ ಬೆಂಬಲಕ್ಕೆ ನಿಂತಿದ್ದವು. ಆದರೆ ಈಗಿನ ಪ್ರತಿಪಕ್ಷಗಳು ತದ್ವಿರುದ್ಧವಾಗಿವೆ. ಸೇನಾಪಡೆಗಳ ಕಾರ್ಯಾಚರಣೆ ಬಗ್ಗೆ ಸಂಶಯ ಪಡುವ ಮೂಲಕ ಮತ್ತು ದೇಶದ ಜನರ ಮನಸ್ಸಿನಲ್ಲಿ ಶಂಕೆ ಮೂಡಿಸುವ ಮೂಲಕ ಪ್ರತಿಪಕ್ಷಗಳು ತಮಗೆ ತಾವೇ ಗೋಲ್ ಹೊಡೆದುಕೊಂಡಿವೆ ಎಂದು ಜೇಟ್ಲಿ ಕುಟುಕಿದ್ದಾರೆ