ಆ್ಯಪ್ನಗರ

ಗಾಯಕ ಸಿಧು ಮೂಸೆ ವಾಲಾ ದೇಹದಲ್ಲಿ ಹೊಕ್ಕಿದ್ದವು ಎರಡು ಡಜನ್‌ಗೂ ಅಧಿಕ ಬುಲೆಟ್‌ಗಳು

Sidhu Moose Wala Murder: ಪಂಜಾಬ್‌ನ ಗಾಯಕ ಸಿಧು ಮೂಸೆ ವಾಲಾ ಅವರ ಮೃತದೇಹದಲ್ಲಿ ಎರಡು ಡಜನ್‌ಗೂ ಅಧಿಕ ಗುಂಡುಗಳು ಪತ್ತೆಯಾಗಿವೆ ಎನ್ನಲಾಗಿದೆ. ಆದರೆ ಅಧಿಕೃತ ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಹಿರಂಗವಾಗಿಲ್ಲ. ಭಾನುವಾರ ಸಿಧು ಅವರ ಕಾರಿನ ಮೇಲೆ ಮನಬಂದಂತೆ ಗುಂಡುಗಳನ್ನು ಹಾರಿಸಲಾಗಿತ್ತು.

Edited byಅಮಿತ್ ಎಂ.ಎಸ್ | Vijaya Karnataka Web 31 May 2022, 10:17 am

ಹೈಲೈಟ್ಸ್‌:

  • ಭಾನುವಾರ ಮಾನ್ಸಾದಲ್ಲಿ ನಡೆದಿದ್ದ ಗಾಯಕ ಸಿಧು ಮೂಸೆ ವಾಲಾ ಹತ್ಯೆ
  • ಸಿಧು ಮೃತದೇಹದಲ್ಲಿ ಎರಡು ಡಜನ್‌ಗಳಿಗೂ ಹೆಚ್ಚಿನ ಗುಂಡುಗಳು ಪತ್ತೆ
  • ಉತ್ತರಾಖಂಡದಲ್ಲಿ ಯಾತ್ರೆ ಮಾಡುತ್ತಿದ್ದ ಮುಖ್ಯ ಶಂಕಿತನ ಬಂಧನ
  • ಎನ್‌ಕೌಂಟರ್‌ನಿಂದ ರಕ್ಷಣೆ ಕೋರಿದ ಗ್ಯಾಂಗ್ ಲೀಡರ್ ಬಿಶ್ನೋಯಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web over 2 dozen bullets pumped in punjab singer sidhu moose wala body
ಗಾಯಕ ಸಿಧು ಮೂಸೆ ವಾಲಾ ದೇಹದಲ್ಲಿ ಹೊಕ್ಕಿದ್ದವು ಎರಡು ಡಜನ್‌ಗೂ ಅಧಿಕ ಬುಲೆಟ್‌ಗಳು
ಚಂಡೀಗಡ: ಹಂತಕರ ಭೀಕರ ದಾಳಿಗೆ ಬಲಿಯಾದ ಪಂಜಾಬ್‌ನ ಖ್ಯಾತ ಗಾಯಕ ಸಿಧು ಮೂಸೆ ವಾಲಾ ಅವರ ದೇಹದಲ್ಲಿ ಎರಡು ಡಜನ್‌ಗೂ ಅಧಿಕ ಬುಲೆಟ್‌ಗಳು ಹೊಕ್ಕಿವೆ ಎಂದು ಮರಣೋತ್ತರ ಪರೀಕ್ಷೆ ವರದಿಯನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ. ಸಿಧು ಅವರ ತಲೆ ಬುರುಡೆ ಸೇರಿದಂತೆ ದೇಹದ ಬಹುತೇಕ ಕಡೆ ಬುಲೆಟ್‌ಗಳು ಹೊಕ್ಕಿದ್ದವು ಎಂದು ಐವರು ವೈದ್ಯರ ಸಮಿತಿ ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ತಿಳಿದುಬಂದಿದೆ.
ಈ ವರ್ಷ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಧು ಮೂಸೆವಾಲಾ ಅವರು, ಎಎಪಿಯ ವಿಜಯ್ ಸಿಂಗ್ಲಾ ಅವರ ಎದುರು ಸೋಲು ಕಂಡಿದ್ದರು. ಭಗವಂತ್ ಮನ್ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ವಿಜಯ್ ಸಿಂಗ್ಲಾ, ಇತ್ತೀಚೆಗಷ್ಟೇ ಭ್ರಷ್ಟಾಚಾರದ ಆರೋಪದಲ್ಲಿ ವಜಾಗೊಂಡು ಬಂಧಿತರಾಗಿದ್ದರು.


ಪಂಜಾಬ್‌ನ ಮಾನ್ಸಾದಲ್ಲಿ ಭಾನುವಾರ ಎಸ್‌ಯುವಿಯನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ ಸಿಧು ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಗಲೇ ಅವರು ಮೃತಪಟ್ಟಿದ್ದರು. ಅವರ ಅಂಗಗಳ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಂಜಾಬ್‌ನ ಮಾನ್ಸಾ ಪೊಲೀಸ್ ಠಾಣೆಯಲ್ಲಿ ಮೂಸೆ ವಾಲಾ ಅವರ ಕಾರನ್ನು ಪೊಲೀಸರು ಪರೀಕ್ಷೆಗೆ ಒಳಪಡಿಸಿದ್ದಾರೆ. ಕಾರಿನ ಮುಂಭಾಗ ಮತ್ತು ಎಡ ಬಲ ಭಾಗಗಳಲ್ಲಿ ಗುಂಡಿನಿಂದ ತೂತುಗಳಾಗಿವೆ. ಸುಮಾರು 30 ಗುಂಡುಗಳನ್ನು ಕಾರಿನ ಮೇಲೆ ಹಾರಿಸಲಾಗಿದೆ. ಹೀಗಾಗಿ ಮೂರು ದಿಕ್ಕುಗಳಿಂದ ಗುಂಡಿನ ದಾಳಿ ನಡೆಸಲಾಗಿದೆ ಎನ್ನುವುದು ಗೊತ್ತಾಗಿದೆ.
ಪಂಜಾಬ್‌ ಎಎಪಿ ಸರ್ಕಾರ ವಿಐಪಿ ಭದ್ರತೆ ಹಿಂಪಡೆದ ಮರುದಿನವೇ ಕಾಂಗ್ರೆಸ್ ನಾಯಕನ ಹತ್ಯೆ!

ಸರ್ಕಾರ ನೀಡಿದ್ದ ಗನ್‌ಮ್ಯಾನ್‌ಗಳ ಜತೆ ಬೇರೊಂದು ಕಾರಿನಲ್ಲಿ ಸಿಧು ಅವರನ್ನು ಹಿಂಬಾಲಿಸುತ್ತಿದ್ದು, ಮತ್ತೊಂದು ಕಾರು ಮಗನ ಕಾರನ್ನು ಅಡ್ಡಗಟ್ಟಿದ್ದಾಗಿ ಬಲ್ಕೌರ್ ಸಿಂಗ್ ಹೇಳಿದ್ದಾರೆ. "ಭಾನುವಾರ, ನನ್ನ ಮಗ ತನ್ನ ಸ್ನೇಹಿತರಾದ ಗುರ್ವಿಂದರ್ ಸಿಂಗ್ ಮತ್ತು ಗುರುಪ್ರೀತ್ ಸಿಂಗ್ ಜತೆ ಥಾರ್ ಕಾರ್‌ನಲ್ಲಿ ತೆರಳಿದ್ದ. ಆತ ಬುಲೆಟ್ ಪ್ರೂಫ್ ಫಾರ್ಚುನರ್ ತೆಗೆದುಕೊಂಡು ಹೋಗಿರಲಿಲ್ಲ. ಮತ್ತು ಇಬ್ಬರು ಭದ್ರತಾ ಸಿಬ್ಬಂದಿಯನ್ನು ಕೂಡ ಕರೆದೊಯ್ದಿರಲಿಲ್ಲ. ನಾನು ಬೇರೊಂದು ಕಾರಿನಲ್ಲಿ ಇಬ್ಬರು ಗನ್‌ಮ್ಯಾನ್‌ಗಳ ಜತೆ ತೆರಳಿದ್ದೆ" ಎಂದು ತಿಳಿಸಿದ್ದಾರೆ.

ಉತ್ತರಾಖಂಡದ ಡೆಹರಾಡೂನ್‌ನಲ್ಲಿ ಪ್ರಮುಖ ಶಂಕಿತನನ್ನು ಸೋಮವಾರ ಬಂಧಿಸಲಾಗಿದೆ. ಹೇಮಕುಂಡ ಸಾಹಿಬ್ ಯಾತ್ರೆಯಲ್ಲಿ ಯಾತ್ರಾರ್ಥಿಗಳ ಜತೆಗೆ ಶಂಕಿತ ಆರೋಪಿ ತೆರಳುತ್ತಿದ್ದ. ಡೆಹರಾಡೂನ್‌ನಿಂದ ಇನ್ನೂ ಐವರು ಶಂಕಿತರನ್ನು ಬಂಧಿಸಲಾಗಿದ್ದು, ಅವರು ಪಂಜಾಬ್ ಪೊಲೀಸರ ವಶದಲ್ಲಿದ್ದಾರೆ.
1% ಕಮಿಷನ್‌ ಭ್ರಷ್ಟಾಚಾರ: ಎರಡೇ ತಿಂಗಳಲ್ಲಿ ಪಂಜಾಬ್ ಆರೋಗ್ಯ ಸಚಿವರ ವಜಾ, ಬಂಧನ

ಎನ್‌ಕೌಂಟರ್‌ನಿಂದ ರಕ್ಷಣೆ ಕೋರಿದ ಗ್ಯಾಂಗ್‌ಸ್ಟರ್
28 ವರ್ಷದ ಗಾಯಕ ಸಿಧು ಮೂಸೆ ವಾಲಾ ಅವರ ಕೊಲೆಯ ಹೊಣೆಗಾರಿಕೆ ಹೊತ್ತುಕೊಂಡಿರುವ ಕ್ರಿಮಿನಲ್ ಗ್ಯಾಂಗ್‌ನ ನಾಯಕ, ಪಂಜಾಬ್ ಪೊಲೀಸರು ತನ್ನನ್ನು ಅವರೊಂದಿಗೆ ಕರೆದೊಯ್ಯುವುದನ್ನು ನಿರ್ಬಂಧಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.

ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿ ದಿಲ್ಲಿಯ ತಿಹಾರ್ ಜೈಲಿನಲ್ಲಿರುವ ಗ್ಯಾಂಗ್ ಲೀಡರ್ ಲಾರೆನ್ಸ್ ಬಿಶ್ನೋಯಿ, ದಿಲ್ಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಎನ್‌ಕೌಂಟರ್ ಮಾಡಿ ಸಾಯಿಸುವ ಭೀತಿ ಇರುವುದರಿಂದ, ತನ್ನನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸಬಾರದು ಎಂದು ಮನವಿ ಮಾಡಿದ್ದಾನೆ.

ಲಾರೆನ್ಸ್ ಬಿಶ್ನೋಯಿ ಗ್ಯಾಂಗ್ ಸದಸ್ಯ ಗೋಲ್ಡಿ ಬ್ರಾರ್, ಸಿಧು ಮೂಸೆ ವಾಲಾ ಅವರ ಹತ್ಯೆಗೆ ತಾನು ಕಾರಣ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಸೋಮವಾರ ಹೇಳಿಕೊಂಡಿದ್ದಾನೆ. ಆತ ಕೆನಡಾದಲ್ಲಿ ವಾಸಿಸುತ್ತಿರುವುದರಿಂದ ಗ್ಯಾಂಗ್ ನಾಯಕ ಲಾರೆನ್ಸ್‌ನನ್ನು ತಮ್ಮ ವಶಕ್ಕೆ ನೀಡುವಂತೆ ಪಂಜಾಬ್ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ