ಆ್ಯಪ್ನಗರ

ಕಾಶ್ಮೀರ: ಎರಡು ವರ್ಷದಲ್ಲಿ ಸೇನಾ ಕಾರ್ಯಾಚರಣೆಯಲ್ಲಿ 360ಕ್ಕೂ ಅಧಿಕ ಉಗ್ರರ ಸಾವು

ಜಮ್ಮು ಕಾಶ್ಮೀರದಲ್ಲಿ ಉಗ್ರವಾದ ನಿಗ್ರಹಕ್ಕೆ ಕೇಂದ್ರ ಸರಕಾರ ಕಠಿಣ ನಿಲುವು ತಳೆದಿದ್ದರಿಂದ ಎರಡು ವರ್ಷದಲ್ಲಿ 360ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈಯಲಾಗಿದೆ.

Vijaya Karnataka Web 9 Sep 2018, 8:41 pm
ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಉಗ್ರವಾದ ನಿಗ್ರಹಕ್ಕೆ ಕೇಂದ್ರ ಸರಕಾರ ಕಠಿಣ ನಿಲುವು ತಳೆದಿದ್ದರಿಂದ ಎರಡು ವರ್ಷದಲ್ಲಿ 360ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ.
Vijaya Karnataka Web JK Terror


ಸಿಆರ್‌ಪಿಎಫ್ ಡಿಜಿ ರಾಜೀವ್ ರೈ ಭಟ್ನಾಗರ್ ಈ ಬಗ್ಗೆ ಹೇಳಿಕೆ ನೀಡಿದ್ದು, ಕಣಿವೆ ರಾಜ್ಯದಲ್ಲಿ ಸಿಆರ್‌ಪಿಎಫ್, ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ಉಗ್ರರ ನಿಗ್ರಹ ಸಾಧ್ಯವಾಗಿದೆ. ಉಗ್ರರನ್ನು ತಡೆಯಲು ಸಾಧ್ಯವಿರುವ ಎಲ್ಲ ಕಾರ್ಯಾಚರಣೆಯನ್ನು ನಡೆಸುವಂತೆ ಕೇಂದ್ರ ಸರಕಾರ ನಿರ್ದೇಶನ ನೀಡಿದ್ದು, ಉಗ್ರ ಸಂಘಟನೆ ಸೇರುವ ಸ್ಥಳೀಯ ಯುವಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅದನ್ನು ತಡೆಯಲು ಎಲ್ಲ ಪ್ರಯತ್ನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಭದ್ರತಾ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು ಅಗತ್ಯ ರಕ್ಷಣಾ ವ್ಯವಸ್ಥೆಯನ್ನು ಸಿಆರ್‌ಪಿಎಫ್ ಕೈಗೊಳ್ಳುತ್ತಿದೆ. ಕಾಶ್ಮೀರದ ಉಗ್ರರಲ್ಲದೆ, ಹೊರಗಿನವರೂ ಬಂದು ಸ್ಥಳೀಯ ಯುವಕರ ಮನಸ್ಸನ್ನು ಕೆಡಿಸುತ್ತಿದ್ದಾರೆ. ಇದರಿಂದ ಉಗ್ರ ಸಂಘಟನೆ ಸೇರುವ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಉಗ್ರರಿಗೆ ಈಗ ಹೆಚ್ಚು ಸಮಯ ಇರಲಾಗುತ್ತಿಲ್ಲ. ಉಗ್ರರ ವಿರುದ್ಧದ ಕಠಿಣ ನಿಲುವಿನಿಂದಾಗಿ ಅವರ ಸಂಖ್ಯೆ ಇಳಿಮುಖವಾಗಿದೆ ಎಂದು ಭಟ್ನಾಗರ್ ತಿಳಿಸಿದ್ದಾರೆ.

ಉಗ್ರ ಸಂಘಟನೆ ಸೇರುವುದು ಒಂದು ಹೆಮ್ಮೆಯ ವಿಚಾರ ಎಂದು ಕಾಶ್ಮೀರದ ಕೆಲ ಯುವಕರು ಭಾವಿಸುತ್ತಾರೆ, ಆದರೆ ವಾಸ್ತವದಲ್ಲಿ ಅದರಿಂದ ಏನೂ ದೊರೆಯುವುದಿಲ್ಲ ಮತ್ತು ಅದಕ್ಕಾಗಿ ಅವರು ಬಂದೂಕು ಹಿಡಿಯುವುದರಿಂದ ಏನೂ ದಕ್ಕುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ.

ಉಗ್ರ ಸಂಘಟನೆ ಸೇರಿದ ಯುವಕರನ್ನು ಮನವೊಲಿಸಿ ಹಿಂದಕ್ಕೆ ಬರುವಂತೆ ಕೇಳಿಕೊಳ್ಳಲಾಗುತ್ತದೆ. ಶರಣಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಅದಕ್ಕೂ ಮುನ್ನ ಯುವಕರು ಉಗ್ರ ಸಂಘಟನೆ ಸೇರದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಸಿಆರ್‌ಪಿಎಫ್ ಡಿಜಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ