ಆ್ಯಪ್ನಗರ

ಎಂಎ ಪ್ರಶ್ನೆ ಪತ್ರಿಕೆಯಲ್ಲಿ ತಲಾಕ್‌, ಪದ್ಮಾವತಿ ಪ್ರಶ್ನೆಗಳು

ಇತ್ತೀಚೆಗೆ ಎಂಎ ಚರಿತ್ರೆಯ ಮೊದಲ ಸೆಮಿಸ್ಟರ್‌ ಪರೀಕ್ಷೆಯಲ್ಲಿ ತ್ರಿವಳಿ ತಲಾಕ್‌, ಹಲಾಲಾ, ಅಲ್ಲಾವುದ್ದೀನ್‌ ಖುಲ್ಜಿ ಮುಂತಾದ ವಿಷಯಗಳ ಕುರಿತು ಪ್ರಶ್ನೆ ಕೇಳುವ ಮೂಲಕ ಬನಾರಸ್‌ ...

Vijaya Karnataka Web 10 Dec 2017, 11:24 pm

ಹೊಸದಿಲ್ಲಿ: ಇತ್ತೀಚೆಗೆ ಎಂಎ ಚರಿತ್ರೆಯ ಮೊದಲ ಸೆಮಿಸ್ಟರ್‌ ಪರೀಕ್ಷೆಯಲ್ಲಿ ತ್ರಿವಳಿ ತಲಾಕ್‌, ಹಲಾಲಾ, ಅಲ್ಲಾವುದ್ದೀನ್‌ ಖುಲ್ಜಿ ಮುಂತಾದ ವಿಷಯಗಳ ಕುರಿತು ಪ್ರಶ್ನೆ ಕೇಳುವ ಮೂಲಕ ಬನಾರಸ್‌ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಇಸ್ಲಾಂ ಧರ್ಮದ ಸಾಮಾಜಿಕ ಪಿಡುಗುಗಳೆಂಬ ಅರ್ಥದಲ್ಲಿ ತ್ರಿವಳಿ ತಲಾಕ್‌ ಮತ್ತು ಹಲಾಲಾ ಬಗ್ಗೆ ವಿವರಿಸುವಂತೆ ಎಂಎ ವಿದ್ಯಾರ್ಥಿಗಳಿಗೆ ಹಿಸ್ಟರಿ ಪೇಪರ್‌ನಲ್ಲಿ ಪ್ರಶ್ನೆ ಕೇಳಲಾಗಿತ್ತು.

Vijaya Karnataka Web padmavati question in ma question paper
ಎಂಎ ಪ್ರಶ್ನೆ ಪತ್ರಿಕೆಯಲ್ಲಿ ತಲಾಕ್‌, ಪದ್ಮಾವತಿ ಪ್ರಶ್ನೆಗಳು


ಅಂತೆಯೇ ರಾಣಿ ಪದ್ಮಾವತಿ ಬಗ್ಗೆ ಅಭಿಪ್ರಾಯ ತಿಳಿಸುವಂತೆಯೂ ವಿದ್ಯಾರ್ಥಿಗಳಿಗೆ ಕೇಳಿಕೊಳ್ಳಲಾಗಿತ್ತು. 10 ಅಂಕಗಳ ಆ ಪ್ರಶ್ನೆ ಹೀಗಿತ್ತು: ''ಜೌಹರ್‌ ಸಂಪ್ರದಾಯವೆಂದರೇನು? ಅಲ್ಲಾವುದ್ದೀನ್‌ ಖಿಲ್ಜಿ ಅವಧಿಯಲ್ಲಿ ರಾಣಿ ಪದ್ಮಾವತಿಯ ಜೌಹರ್‌ ಬಗ್ಗೆ ವಿವರಿಸಿ,''. ಪರ್ಯಾಯ ಆಯ್ಕೆಯ ಪ್ರಶ್ನೆ ಹೀಗಿತ್ತು: ಸುಲ್ತಾನರ ಆಡಳಿತಾವಧಿಯಲ್ಲಿ ಮುಸ್ಲಿಂ ಮಹಿಳೆಯರ ಸ್ಥಿತಿಗತಿ ಬಗ್ಗೆ ವಿವರಿಸಿ.

ವಿದ್ಯಾರ್ಥಿಗಳಲ್ಲಿ ಒಂದು ಗುಂಪು 'ಇಂತಹ ಪ್ರಶ್ನೆಗಳನ್ನು ಕೇಳುವ ಮೂಲಕ ಆಡಳಿತ ಮಂಡಳಿ ತಮ್ಮ ಮೇಲೆ ಬಲಪಂಥೀಯ ಸಿದ್ಧಾಂತಗಳನ್ನು ಹೇರಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿ ಪ್ರತಿಭಟನೆ ನಡೆಸಿತಾದರೂ, 'ಅದರಲ್ಲೇನೂ ತಪ್ಪಿಲ್ಲ' ಎಂದು ಕೆಲವು ಶಿಕ್ಷಕರು ಸಮಜಾಯಿಷಿ ನೀಡಿದ್ದಾರೆ. ''ಇಂತಹ ಪ್ರಶ್ನೆಗಳನ್ನು ಕೇಳಿದ್ದರಲ್ಲಿ ತಪ್ಪೇನಿಲ್ಲ ಎಂದು ವಿವಿ ಕೂಡ ಸಮರ್ಥಿಸಿಕೊಂಡಿದೆ.

ಏತನ್ಮಧ್ಯೆ, ''ನನ್ನ ಪ್ರಕಾರ ಇದು ಅಪರಾಧ,'' ಎಂದು ವಿಕಾಸ್‌ ಎಂಬ ವಿದ್ಯಾರ್ಥಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾನೆ. ಏನೇ ಆದರೂ, ವಿವಿಯ ಸಹಾಯಕ ಪ್ರಾಧ್ಯಾಪಕ ರಾಜೀವ್‌ ಶ್ರೀವಾಸ್ತವ ಅವರು ವಿಕಾಸ್‌ ಅಭಿಪ್ರಾಯವನ್ನು ಒಪ್ಪಿಕೊಂಡಿಲ್ಲ. ಈ ಸಂಗತಿಗಳು ಮಧ್ಯಯುಗದ ಚರಿತ್ರೆಯ ಭಾಗವಾಗಿರುವ ಕಾರಣ ಸಹಜವಾಗಿಯೇ ಪಠ್ಯಕ್ರಮದ ಭಾಗವಾಗುತ್ತವೆ ಎಂದು ಸಮರ್ಥಿಸಿಕೊಂಡಿದ್ದಾರೆ.

''ಅಲಿಗಢ ಮುಸ್ಲಿಂ ವಿವಿ ಹಾಗೂ ಜವಾಹರಲಾಲ್‌ ನೆಹರೂ ವಿವಿಗಳು ಯಾಕೆ ಬಾಲ್ಯ ವಿವಾಹ ಮತ್ತು ಸತಿ ಪದ್ಧತಿ ಬಗ್ಗೆ ಪ್ರಶ್ನೆ ಕೇಳುತ್ತವೆ? ಇಸ್ಲಾಮ್‌ನಲ್ಲೂ ಕೆಲವು ನ್ಯೂನತೆಗಳಿವೆ. ಅವುಗಳ ಬಗ್ಗೆ ಬೆಳಕು ಚೆಲ್ಲಲೇ ಬೇಕು. ಇಸ್ಲಾಂ ಚರಿತ್ರೆಯನ್ನು ಕಲಿಸುವಾಗ ಅಂತಹ ಸಂಗತಿಗಳನ್ನು ಕಲಿಸಲೇಬೇಕಾಗುತ್ತದೆ. ಸಂಜಯ್‌ ಲೀಲಾ ಭನ್ಸಾಲಿಯಂಥವರು ವಿದ್ಯಾರ್ಥಿಗಳಿಗೆ ಚರಿತ್ರೆ ಕಲಿಸುವುದಿಲ್ಲ ಎಂದು ಶ್ರೀವಾಸ್ತವ ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ