ಆ್ಯಪ್ನಗರ

ಜಾಧವ್‌ ಸುರಕ್ಷಿತ ಬಿಡುಗಡೆಗೆ ಕ್ರಮ

ತ್ವರಿತವಾಗಿ ಜಾಧವ್‌ ಅವರನ್ನು ಬಿಡುಗೊಡೆಗೊಳಿಸಿ ಭಾರತಕ್ಕೆ ಕಳುಹಿಸುವಂತೆ ನೆರೆರಾಷ್ಟ್ರವನ್ನು ಆಗ್ರಹಿಸಲಾಗುವುದು. ಐಸಿಜೆಯ 16 ಮಂದಿ ನ್ಯಾಯಮೂರ್ತಿಗಳ ಪೈಕಿ ಭಿನ್ನ ನಿಲುವು ವ್ಯಕ್ತಪಡಿಸಿರುವ ಏಕೈಕ ನ್ಯಾಯಮೂರ್ತಿ ಪಾಕಿಸ್ತಾನದವರು ಎಂಬುದು ಗಮನಾರ್ಹ ಎಂದು ಜೈಶಂಕರ್‌ ಹೇಳಿದರು.

PTI 19 Jul 2019, 5:00 am
ಹೊಸದಿಲ್ಲಿ: ಪಾಕಿಸ್ತಾನದಿಂದ ಕುಲಭೂಷಣ್‌ ಜಾಧವ್‌ ಅವರ ಸುರಕ್ಷಿತ ಬಿಡುಗಡೆಗೆ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಸಂಸತ್ತಿಗೆ ಭರವಸೆ ನೀಡಿದ್ದಾರೆ.
Vijaya Karnataka Web jadhav


ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆ ತೀರ್ಪು ಪುನರ್‌ಪರಿಶೀಲಿಸಲು ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಪಾಕಿಸ್ತಾನಕ್ಕೆ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರ ಹೇಳಿಕೆ ನೀಡಿದ ಸಚಿವರು, ಈಗಲೂ ನಾವು ಜಾಧವ್‌ ಅವರನ್ನು ಭಾರತಕ್ಕೆ ಕರೆತರುವ ಯತ್ನದಲ್ಲಿ ನಿರತರಾಗಿದ್ದೇವೆ. ಆದಷ್ಟು ಬೇಗ ಅವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ವಿಶ್ವಾಸವಿದೆ ಎಂದು ಹೇಳಿದರು.

ತ್ವರಿತವಾಗಿ ಜಾಧವ್‌ ಅವರನ್ನು ಬಿಡುಗೊಡೆಗೊಳಿಸಿ ಭಾರತಕ್ಕೆ ಕಳುಹಿಸುವಂತೆ ನೆರೆರಾಷ್ಟ್ರವನ್ನು ಆಗ್ರಹಿಸಲಾಗುವುದು. ಐಸಿಜೆಯ 16 ಮಂದಿ ನ್ಯಾಯಮೂರ್ತಿಗಳ ಪೈಕಿ ಭಿನ್ನ ನಿಲುವು ವ್ಯಕ್ತಪಡಿಸಿರುವ ಏಕೈಕ ನ್ಯಾಯಮೂರ್ತಿ ಪಾಕಿಸ್ತಾನದವರು ಎಂಬುದು ಗಮನಾರ್ಹ ಎಂದು ಜೈಶಂಕರ್‌ ಹೇಳಿದರು.

''ಜಾಧವ್‌ ಅವರೊಂದಿಗೆ ಸಂಪರ್ಕ ಸಾಧಿಸುವುದು, ಅವರಿಗೆ ಕಾನೂನು ನೆರವು ಒದಗಿಸುವುದು ಭಾರತದ ಹಕ್ಕು. ಅದಕ್ಕೆ ಅವಕಾಶ ನೀಡದೆ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ. ಜಾಧವ್‌ ವಿರುದ್ಧ ದಾಖಲಿಸಲಾಗಿರುವ ಗೂಢಚರ್ಯೆ ಆರೋಪಗಳು ಸುಳ್ಳು. ಅವರ ಮೇಲೆ ಒತ್ತಡ ಹೇರುವ ಮೂಲಕ ಪಾಕಿಸ್ತಾನ ಅವರಿಂದ ತಪ್ಪೊಪ್ಪಿಗೆ ಪಡೆದಿದೆ. ಇಂಥ ಕೃತ್ಯಗಳಿಂದ ಸತ್ಯವನ್ನು ಮರೆಮಾಚಲು ಯತ್ನಿಸಿದೆ. ಇದನ್ನು ಕೈಬಿಟ್ಟು ಜಾಧವ್‌ ಅವರನ್ನು ಕೂಡಲೇ ಬಂಧಮುಕ್ತಗೊಳಿಸುವಂತೆ ಆಗ್ರಹಿಸುತ್ತೇನೆ,'' ಎಂದು ತಿಳಿಸಿದರು.

ಗಲ್ಲುಶಿಕ್ಷೆ ಆಗಲು ಬಿಡಲ್ಲ: ಮೊದಲು ರಾಜ್ಯಸಭೆ ಉದ್ದೇಶಿಸಿ ಮಾತನಾಡಿ ಬಳಿಕ ಲೋಕಸಭೆಯಲ್ಲಿ ಐಸಿಜೆ ತೀರ್ಪು ಕುರಿತು ವಿವರಣೆ ನೀಡಿದ ಸಚಿವ ಜೈಶಂಕರ್‌,'' ಜಾಧವ್‌ ವಿರುದ್ಧ ಪಾಕ್‌ ತನಗೆ ಬೇಕಾದ ರೀತಿಯಲ್ಲಿ ಆರೋಪಗಳನ್ನು ಹೆಣೆದು ಮಿಲಿಟರಿ ಕೋರ್ಟ್‌ನಲ್ಲಿ ಶಿಕ್ಷೆ ನೀಡಿದೆ. ಅಂತಾರಾಷ್ಟ್ರೀಯ ಕಾನೂನು ಹಾಗೂ ಒಪ್ಪಂದಗಳನ್ನು ಕಡೆಗಣಿಸಿದೆ. ಮುಂಚಿನಿಂದಲೂ ನಾವು ನಮ್ಮ ನಿಲುವು ಸ್ಪಷ್ಟಪಡಿಸಿದ್ದೇವೆ. ಸೂಕ್ತ ಕಾನೂನು ಪ್ರಕ್ರಿಯೆ ನಡೆಸದೆಯೇ ಒಬ್ಬ ಅಮಾಯಕ ಭಾರತೀಯ ಪ್ರಜೆಗೆ ಗಲ್ಲು ಶಿಕ್ಷೆ ವಿಧಿಸಲು ಪಾಕ್‌ಗೆ ಅವಕಾಶ ಕೊಡಲ್ಲ,'' ಎಂದು ಪ್ರತಿಜ್ಞೆ ಮಾಡಿದರು.

ಜಾಧವ್‌ ಪ್ರಕರಣದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರ ಬಗ್ಗೆ ಸಚಿವ ಜೈಶಂಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು. ''ಸಾಳ್ವೆ ಅವರ ಶ್ರಮದಿಂದ ಭಾರತದ ಪರ ತೀರ್ಪು ಬಂದಿದೆ. ಜತೆಗೆ ಇಂಥ ಸಂಕಷ್ಟದ ಸಂದರ್ಭದಲ್ಲಿ ಜಾಧವ್‌ ಅವರ ಕುಟುಂಬಸ್ಥರು ತೋರಿರುವ ಆತ್ಮಸ್ಥೈರ್ಯ ಕೂಡ ದೊಡ್ಡದು. ಅಂತಾರಾಷ್ಟ್ರೀಯ ಒಪ್ಪಂದಗಳು ಹಾಗೂ ಕಾನೂನಿನ ಬಗ್ಗೆ ವಿಶ್ವಾಸ ಹೊಂದಿರುವವರಿಗೆ ಐಸಿಜೆಯಲ್ಲಿ ಜಯ ಸಿಕ್ಕಿದೆ,'' ಎಂದರು.

ಇಂಗ್ಲಿಷ್‌ನಲ್ಲಿರುವ ತೀರ್ಪು ಪಾಕ್‌ಗೆ ಅರ್ಥವಾಗಿಲ್ಲ!
ಐಸಿಜೆಯಲ್ಲಿ ಭಾರತದ ಪರವಾಗಿ ತೀರ್ಪು ಹೊರಬಿದ್ದಿದ್ದರೂ ಪಾಕ್‌ ಸರಕಾರ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ,'ಪಾಕ್‌ಗೆ ದೊಡ್ಡ ಜಯ' ಎಂದು ಹಾಕಿಕೊಂಡಿದೆ. ಇದಕ್ಕೆ ಟಾಂಗ್‌ ಕೊಟ್ಟಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌,' ಇದು ನಿಮ್ಮ ತಪ್ಪಲ್ಲ ಬಿಡಿ. ಐಸಿಜೆ ತೀರ್ಪು ಇಂಗ್ಲಿಷ್‌ನಲ್ಲಿದೆ' ಎಂದು ಟ್ವೀಟ್‌ ಮಾಡಿದ್ದಾರೆ. ಐಸಿಜೆ ನ್ಯಾಯಮೂರ್ತಿಗಳ ಅಭಿಪ್ರಾಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಜಾಗತಿಕ ಮುಖಭಂಗಕ್ಕೆ ಪಾಕ್‌ ಗುರಿಯಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.

ಪಾಕ್‌ ಖರ್ಚು ಮಾಡಿದ್ದು 20 ಕೋಟಿ ರೂ.
ಸಾಳ್ವೆ ಪಡೆದಿದ್ದು ಕೇವಲ ಒಂದು 1 ರೂ.!
ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್‌ ಜಾಧವ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ಸಾಂಕೇತಿಕವಾಗಿ ಕೇವಲ 1 ರೂ. ಶುಲ್ಕ ಪಡೆದಿದ್ದಾರೆ. ಇದೇ ಪ್ರಕರಣದಲ್ಲಿ ವಾದ ಮಂಡನೆಗೆ ಪಾಕಿಸ್ತಾನ ಮಾಡಿರುವ ಖರ್ಚು 20 ಕೋಟಿ ರೂ.ಗಿಂತಲೂ ಹೆಚ್ಚು! ಕಳೆದ ವರ್ಷ ಸಂಸತ್ತಿನಲ್ಲಿ ಬಜೆಟ್‌ ಮಂಡನೆ ವೇಳೆ ಪಾಕ್‌ ಸರಕಾರವು ಬ್ರಿಟನ್‌ ಮೂಲದ ಬ್ಯಾರಿಸ್ಟರ್‌ ಖಾವರ್‌ ಖರೇಶಿ ಐಸಿಜೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಲು 20 ಕೋಟಿ ರೂ. ಶುಲ್ಕ ಪಡೆದಿದ್ದಾರೆ ಎಂದು ಸರಕಾರ ತಿಳಿಸಿತ್ತು. ಐಸಿಜೆಯಲ್ಲಿ ಜಾಧವ್‌ ಪ್ರಕರಣದಲ್ಲಿ ಭಾರತವನ್ನು ಪ್ರತಿನಿಧಿಸಲು ಹರೀಶ್‌ ಸಾಳ್ವೆ ಕೇವಲ 1 ರೂ. ಶುಲ್ಕ ಪಡೆದಿದ್ದಾರೆ ಎಂದು 2017ರ ಮೇ 15ರಂದು ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿ ತಿಳಿಸಿದ್ದರು. ಅಂದಹಾಗೆ ಹರೀಶ್‌ ಸಾಳ್ವೆ ತಾವು ವಾದಿಸುವ ಪ್ರಕರಣಗಳಲ್ಲಿ ಪ್ರತಿ ಹಾಜರಿಗೆ 30 ಲಕ್ಷ ರೂಪಾಯಿ ಶುಲ್ಕ ಪಡೆಯುತ್ತಾರೆ!
.........
ತನ್ನ ನ್ಯಾಯಾಂಗ ಪ್ರಕ್ರಿಯೆಗಳನ್ನು ತಿದ್ದಿಕೊಳ್ಳಲು ಹಾಗೂ ಅಂತಾರಾಷ್ಟ್ರೀಯ ಕಾನೂನು, ಒಪ್ಪಂದಗಳಿಗೆ ತಕ್ಕಂತೆ ನಡೆದುಕೊಳ್ಳಲು ಪಾಕಿಸ್ತಾನಕ್ಕೆ ಐಸಿಜೆ ಒಂದು ಅವಕಾಶ ನೀಡಿದೆ. ಇದನ್ನು ಪಾಕ್‌ ಬಳಸಿಕೊಳ್ಳಲಿದೆಯೇ ಅಥವಾ ಕೈಚೆಲ್ಲಲಿದೆಯೇ? ಪಾಕ್‌ ನಡೆಯ ಮೇಲೆ ಇಡೀ ಜಗತ್ತೇ ಕಣ್ಣಿಟ್ಟಿದೆ.
- ಅರುಣ್‌ ಜೇಟ್ಲಿ, ಬಿಜೆಪಿ ನಾಯಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ