ಆ್ಯಪ್ನಗರ

ಕಾಶ್ಮೀರಕ್ಕಾಗಿ ಯುದ್ಧಕ್ಕೂ ರೆಡಿ ಎಂದ ಇಮ್ರಾನ್‌ ಖಾನ್‌

ಮೋದಿ ಸರಕಾರವು 370ನೇ ವಿಧಿ ರದ್ದುಪಡಿಸಿದ ಬಳಿಕ ಇಮ್ರಾನ್‌ ಸಂಪುಟದ ಸದಸ್ಯರು ಸರದಿಯಂತೆ ಯುದ್ಧದ ಮಾತನಾಡುತ್ತಿದ್ದು, ಈಗ ಖುದ್ದು ಪ್ರಧಾನಿಯೇ ಯುದ್ಧಕ್ಕೆ ಸಿದ್ಧವೆಂದು ಸಾರಿದ್ದಾರೆ.

PTI 15 Aug 2019, 5:00 am
ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಭಾರತದ ದಿಟ್ಟ ನಿರ್ಧಾರದಿಂದ ಹತಾಶಗೊಂಡಿರುವ ಪಾಕಿಸ್ತಾನ, 'ಕಾಶ್ಮೀರಿಗಳ ಸ್ವಾತಂತ್ರ್ಯಕ್ಕಾಗಿ ಯುದ್ಧಕ್ಕೂ ರೆಡಿ' ಎಂದು ಘೋಷಿಸಿದೆ.
Vijaya Karnataka Web imran


ಮೋದಿ ಸರಕಾರವು 370ನೇ ವಿಧಿ ರದ್ದುಪಡಿಸಿದ ಬಳಿಕ ಇಮ್ರಾನ್‌ ಸಂಪುಟದ ಸದಸ್ಯರು ಸರದಿಯಂತೆ ಯುದ್ಧದ ಮಾತನಾಡುತ್ತಿದ್ದು, ಈಗ ಖುದ್ದು ಪ್ರಧಾನಿಯೇ ಯುದ್ಧಕ್ಕೆ ಸಿದ್ಧವೆಂದು ಸಾರಿದ್ದಾರೆ. ಮುಜಫ್ಫರಾಬಾದ್‌ನಲ್ಲಿ ಬುಧವಾರ ಪಾಕ್‌ ಆಕ್ರಮಿತ ಕಾಶ್ಮೀರದ ವಿಧಾನಸಭೆ ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು, ಕಾಶ್ಮೀರಿಗಳ ಹಕ್ಕುಗಳಿಗೆ ಭಾರತದ ವಿರುದ್ಧ ಯುದ್ಧ ಸಾರಲೂ ನಮ್ಮ ದೇಶ ಸಿದ್ಧವಿದೆ ಎಂದು ಹೇಳಿದ್ದಾರೆ.

''ಕಾಶ್ಮೀರದಲ್ಲಿ ಆರೆಸ್ಸೆಸ್‌ ತನ್ನ ಪ್ರಾಬಲ್ಯ ಮೆರೆಯಲು ಯತ್ನಿಸುತ್ತಿದೆ. ಸಾಮೂಹಿಕ ಥಳಿತದಿಂದ ಮುಸ್ಲಿಮರು ಭಯದಲ್ಲಿ ಬದುಕುವಂತಾಗಿದೆ. ಕಾಶ್ಮೀರದಲ್ಲಿನ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ, ಅಲ್ಲಿನ ಜನರ ಬದುಕಿಗಾಗಿ, ಪಾಕ್‌ ಸೇನೆ ಮತ್ತು ಜನತೆ ಎಲ್ಲದಕ್ಕೂ ಸಿದ್ಧ. ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಡೆಯ ಆಟ ಆಡಿದ್ದಾರೆ. ಅದಕ್ಕೆ ಅವರು ದುಬಾರಿಯಾದ ಬೆಲೆ ತೆರಲಿದ್ದಾರೆ,'' ಎಂದು ಇಮ್ರಾನ್‌ ಎಚ್ಚರಿಸಿದ್ದಾರೆ.

''ಕಾಶ್ಮೀರ ವಿವಾದ ಸೌಹಾರ್ದಯುತವಾಗಿ ಪರಿಹಾರವಾಗಬೇಕೆಂದು ನಾನು ಬಯಸಿದ್ದೆ. ಆದರೆ ಭಾರತಕ್ಕೆ ಅಂತಹ ಬಯಕೆ ಇದ್ದಂತೆ ಕಾಣುತ್ತಿಲ್ಲ. ಕಾಶ್ಮೀರಿಗಳ ಪರ ನಾನು ಇರುತ್ತೇನೆ. ಅವರ ರಾಯಭಾರಿಯಾಗಿ ಜಗತ್ತಿನ ಎಲ್ಲ ವೇದಿಕೆಗಳಲ್ಲಿ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸುತ್ತೇನೆ,'' ಎಂದು ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ನಾಯಕರು ಈ ವಿಚಾರದಲ್ಲಿ ಮೌನ ವಹಿಸಿರುವುದಕ್ಕೂ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರಿಗಳು, ಪಾಕಿಗಳು ಒಂದೇ: ಪಾಕ್‌ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿರುವ ಪಾಕಿಸ್ತಾನ ಅಧ್ಯಕ್ಷ ಆರಿಫ್‌ ಅಲ್ವಿ, ''ಕಾಶ್ಮೀರಿಗಳು ಮತ್ತು ಪಾಕಿಸ್ತಾನಿಗಳು ಯಾವತ್ತಿದ್ದರೂ ಒಂದೇ. ಕಾಶ್ಮೀರಿಗಳ ಹಕ್ಕುಗಳು ದಮನಗೊಳ್ಳಲು ಪಾಕ್‌ ಬಿಡುವುದಿಲ್ಲ, ಅವರ ಪರ ನಿಲ್ಲುತ್ತದೆ. 370ನೇ ವಿಧಿ ರದ್ದತಿ ವಿಚಾರವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪಿಸಲಿದೆ,'' ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆ ವಿಶೇಷ ಅಧಿವೇಶನಕ್ಕೆ ಆಗ್ರಹ : ಕಾಶ್ಮೀರ ವಿಚಾರದಲ್ಲಿ ಇಡೀ ವಿಶ್ವವೇ ಭಾರತದ ನಡೆಯನ್ನು ಸ್ವಾಗತಿಸುತ್ತಿದ್ದರೂ ಹತಾಶಗೊಂಡಿರುವ ಪಾಕಿಸ್ತಾನ ಮಾತ್ರ ತನ್ನ ಹಠ ಕೈಬಿಟ್ಟಿಲ್ಲ. 370ನೇ ವಿಧಿ ರದ್ದತಿ ಹಾಗೂ ನಂತರದಲ್ಲಿನ ಕಾಶ್ಮೀರ ಬೆಳವಣಿಗೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಷಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನವು ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಗಳಿಗೆ ಒಯ್ಯುವ ಪ್ರಯತ್ನ ಮಾಡುತ್ತಿದೆ. ಆದರೆ ಪಾಶ್ಚಿಮಾತ್ಯ ಹಾಗೂ ಮಧ್ಯಪ್ರಾಚ್ಯದ ರಾಷ್ಟ್ರಗಳು ಭಾರತ-ಪಾಕ್‌ ದ್ವಿಪಕ್ಷೀಯ ಮಾತುಕತೆ ಮೂಲಕ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿವೆ. ಇದು ಪಾಕಿಸ್ತಾನವನ್ನು ಹತಾಶೆಗೆ ದೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ