ಆ್ಯಪ್ನಗರ

ಬಲಿಯಾಗುವ ಮುನ್ನ ಆಹಾರಕ್ಕಾಗಿ ಅಂಗಲಾಚಿದ ಪಾಕ್ ಭಯೋತ್ಪಾದಕರು!

ಭದ್ರತಾ ಪಡೆಗಳಿಂದ ಗುರುವಾರ ಹತರಾದ ಮೂವರು ಪಾಕಿಸ್ತಾನಿ ಉಗ್ರರು, ಸಮೀಪದ ಮನೆಗಳಿಗೆ ನುಗ್ಗಿ ಆಹಾರಕ್ಕಾಗಿ ಗೋಗರೆದಿದ್ದರು!

Vijaya Karnataka 15 Sep 2018, 10:31 am
ಶ್ರೀನಗರ: ಭದ್ರತಾ ಪಡೆಗಳಿಂದ ಗುರುವಾರ ಹತರಾದ ಮೂವರು ಪಾಕಿಸ್ತಾನಿ ಉಗ್ರರು, ಸಮೀಪದ ಮನೆಗಳಿಗೆ ನುಗ್ಗಿ ಆಹಾರಕ್ಕಾಗಿ ಗೋಗರೆದಿದ್ದರು!
Vijaya Karnataka Web terror


ವಿಧ್ವಂಸಕ ಕೃತ್ಯ ಎಸಗಲು ಬುಧವಾರ ರಾತ್ರಿ ಗಡಿ ದಾಟಿ ಬಂದ ಪಾಕಿಸ್ತಾನದ ಜೈಷೆ ಮೊಹಮದ್‌ ಸಂಘಟನೆಯ ಮೂವರು ಶಸ್ತ್ರಸಜ್ಜಿತ ಉಗ್ರರು, ಜಮ್ಮುವಿನ ರೇಸಿ ಜಿಲ್ಲೆಯ ಜಜ್ಜರ್‌ ಕೋಟ್ಲಿ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸಿದ್ದಾರೆ. ನಂತರ ಅಲ್ಲಿಂದ ರಾತ್ರಿ 8 ಗಂಟೆ ಸುಮಾರಿಗೆ ಸಮೀಪದ ಮನೆಯೊಂದಕ್ಕೆ ನುಗ್ಗಿದ್ದಾರೆ.

''ಕಳೆದ ಐದು ದಿನಗಳಿಂದ ಆಹಾರ ಸೇವಿಸಿಲ್ಲ. ತಿನ್ನಲು ಮನೆಯಲ್ಲಿ ಏನಿದೆ ಎಂದು ಎ.ಕೆ.47 ರೈಫಲ್‌ಗಳನ್ನು ಹೊಂದಿದ್ದ ಉಗ್ರರು ನಮ್ಮನ್ನು ಕೇಳಿದರು. ಭಯಭೀತರಾದ ನಾವು, ಮನೆಯಲ್ಲಿ ಸದ್ಯ ಊಟ ಇಲ್ಲ. ಕೆಲ ಸಮಯದ ಕಾಲಾವಕಾಶ ನೀಡಿದರೆ ಆಹಾರ ಸಿದ್ಧಪಡಿಸಿಕೊಡುತ್ತೇವೆ ಎಂದು ಹೇಳಿದೆವು. ಅದಕ್ಕೆ ಅವರು ಒಪ್ಪಲಿಲ್ಲ. ಕೊನೆಗೆ ಮನೆಯಲ್ಲಿದ್ದ ಬಿಸ್ಕತ್ತು ಮತ್ತು ಸೇಬುಗಳನ್ನು ಅವರಿಗೆ ನೀಡಿದೆವು. ತುಂಬಾ ಹಸಿದವರಂತೆ ತಿಂದು, ನೀರು ಕುಡಿದು ಭದ್ರತಾ ಪಡೆಗಳಿಗೆ ವಿಷಯ ತಿಳಿಸದಂತೆ ಬೆದರಿಕೆಯೊಡ್ಡಿ ಪರಾರಿಯಾದರು,'' ಎಂದು ಮನೆ ಮಾಲೀಕ ಈಶ್ವರ್‌ ದಾಸ್‌ ಖಜುರಿಯಾ ತಿಳಿಸಿದ್ದಾರೆ.

''20ರಿಂದ 25 ವರ್ಷ ವಯಸ್ಸಿನ ಈ ಉಗ್ರರು ಸುಲಲಿತವಾಗಿ ಹಿಂದಿ ಮತ್ತು ಪಂಜಾಬಿ ಮಾತನಾಡುತ್ತಿದ್ದರು. ನಮಗೆ ಕೆಲವು ಬಟ್ಟೆಗಳನ್ನು ನೀಡುವಂತೆ ಕೇಳಿದರು. ಜತೆಗೆ ಶ್ರೀನಗರದವರೆಗೆ ತೆರಳಲು ವಾಹನವೊಂದನ್ನು ಸಿದ್ಧಪಡಿಸಿಸುವಂತೆ ಕೇಳಿದರು. ಆದರೆ ರಾತ್ರಿಯಾಗಿರುವುದರಿಂದ ಯಾವುದೇ ವಾಹನ ಸಿಗುವುದಿಲ್ಲ ಎಂದು ತಿಳಿಸಿದೆವು. ಕೊನೆಗೆ ನಮ್ಮಿಂದ ಎರಡು ಮೊಬೈಲ್‌ಗಳನ್ನು ಕಿತ್ತುಕೊಂಡು, ಸ್ಮಾರ್ಟ್‌ ಫೋನ್‌ಗಾಗಿ ಒತ್ತಾಯಿಸಿದರು. ಹತ್ತಿರದಲ್ಲೇ ಯಾವುದಾದರು ಮಸೀದಿ ಅಥವಾ ಮುಸ್ಲಿಂ ಕುಟುಂಬ ವಾಸಿಸುತ್ತಿದೆಯೇ ಎಂಬುದನ್ನು ವಿಚಾರಿಸಿದರು,'' ಎಂದು ಈಶ್ವರ್‌ ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ 10 ಗಂಟೆಗೆ ಧಿರ್ಥಿ ಗ್ರಾಮದ ರಾಜಕುಮಾರ್‌ ಎಂಬುವರ ಮನೆಗೆ ನುಗ್ಗಿದ ಉಗ್ರರು, ಅಲ್ಲಿಯೂ ಆಹಾರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಪತ್ನಿ ಮತ್ತು ಮೂವರು ಮಕ್ಕಳನ್ನು ಉಪಾಯದಿಂದ ಹೊರಕ್ಕೆ ಕಳುಹಿಸಿದ ರಾಜಕುಮಾರ್‌, ''ಆಹಾರ ತರುತ್ತೇನೆ,'' ಎಂದು ಹೇಳಿ ತೆರಳಿದ್ದು ಭದ್ರತಾ ಪಡೆ ಬಳಿಗೆ. ಸ್ಥಳಕ್ಕೆ ಬಂದ ಯೋಧರು ಮೂವರು ಉಗ್ರರನ್ನೂ ಹೊಡೆದುರುಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ