ಇಸ್ಲಾಮಾಬಾದ್: ಪುಲ್ವಾಮ ದಾಳಿ ಬಳಿಕ ಜಾಗತಿಕ ವೇದಿಕೆಗಳಲ್ಲಿ ಭಾರತದ ತಪರಾಕಿಯಿಂದ ಕಂಗೆಟ್ಟಿರುವ ಪಾಕಿಸ್ತಾನ ಉಗ್ರಪೋಷಕ ಎಂಬ ಕುಖ್ಯಾತಿಯಿಂದ ಬಚಾವಾಗಲು ಈ ಬಾರಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ (ಎನ್ಎಸ್ಎ) ದಕ್ಷಿಣ ಕಾಶ್ಮೀರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಉಗ್ರರ ದಾಳಿ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
ತನ್ನಲ್ಲಿರುವ ಗುಪ್ತಚರ ಮಾಹಿತಿಯಂತೆ ಪುಲ್ವಾಮ ಮಾದಿಯಲ್ಲಿಯೇ ದಕ್ಷಿಣ ಕಾಶ್ಮೀರದ ಹೆದ್ದಾರಿಯಲ್ಲಿ ಉಗ್ರರು ದಾಳಿ ನಡೆಸುವ ಯೋಜನೆ ರೂಪಿಸುತ್ತಿದ್ದಾರೆ. ಉಗ್ರರ ಮುಖಂಡ ಜಾಕಿರ್ ಮೂಸಾ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಲು ಲಷ್ಕರ್-ಎ-ತೊಯ್ಬಾ ಮತ್ತು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳು ಸಿದ್ಧತೆ ನಡೆಸಿವೆ. ದಕ್ಷಿಣ ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸುವಂತೆ ಪಾಕಿಸ್ತಾನ ಭಾರತಕ್ಕೆ ಸಂದೇಶ ಕಳುಹಿಸಿದೆ ಎನ್ನಲಾಗಿದೆ.
ಪಾಕ್ ಗಡಿಯಲ್ಲಿ ಹೈ ಅಲರ್ಟ್: ಪಾಕಿಸ್ತಾನ ನೀಡಿರುವ ಎಚ್ಚರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತದ ಗಡಿ ಭದ್ರತಾ ಪಡೆ, ಅಂತಾರಾಷ್ಟ್ರೀಯ ಗಡಿಯಲ್ಲಿ ಹೈ ಅಲರ್ಟ್ ವಹಿಸಲು ಅಧಿಕಾರಿಗಳಿಗೆ ಮತ್ತು ಯೋಧರಿಗೆ ತಿಳಿಸಿದೆ. ಕಾಶ್ಮೀರದಲ್ಲಿ ಉಗ್ರರು ಸಕ್ರಿಯರಾಗಿರುವ ಪ್ರದೇಶಗಳಲ್ಲಿ ಗಸ್ತು ಮತ್ತು ನಿಗಾ ಹೆಚ್ಚಿಸುವಂತೆ ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ.
ಅಮರನಾಥ ಯಾತ್ರೆಗೆ ಒದಗಿಸಲಾಗಿರುವ ಭದ್ರತೆಯನ್ನು ಕೂಡ ಮರುಪರಿಶೀಲಿಸಲಾಗಿದೆ.
ಕಾಶ್ಮೀರದ ತ್ರಾಲ್ನಲ್ಲಿ ಮೋಸ್ಟ್ ವಾಂಟೆಂಡ್ ಉಗ್ರ ಜಾಕಿರ್ ಮೂಸಾನನ್ನು ಕಳೆದ ತಿಂಗಳು ಭದ್ರತಾ ಪಡೆಗಳು ಹತ್ಯೆಗೈದಿದ್ದವು. 2016ರಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಮೂಸಾ ಕಣಿವೆ ರಾಜ್ಯದಲ್ಲಿ ಉಗ್ರ ಸಂಘಟನೆಗಳ ನೇತೃತ್ವ ವಹಿಸಿದ್ದ.
ಜೈಲುಗಳಲ್ಲಿ ಉಗ್ರರ ಸ್ವಘೋಷಿತ ನಿಯಮಾವಳಿ ಪತ್ತೆ
ಕಾಶ್ಮೀರದ ಜೈಲುಗಳಲ್ಲಿ ಬಂಧಿತ ಉಗ್ರರು ರಚಿಸಿಕೊಂಡಿದ್ದ ಅಘೋಷಿತ ನಿಯಮಾವಳಿ 'ಶುಯಾರಾ-ಇ-ಜಿಂದಾನ್' ಅನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪತ್ತೆ ಮಾಡಿ , ಉಗ್ರರ ನಿಯಂತ್ರಣದಲ್ಲಿದ್ದ ಇತರ ಕೈದಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಿದ್ದಾರೆ.
ನಿಯಮಾವಳಿಗಳನ್ನು ನಿಯಂತ್ರಿಸುತ್ತಿದ್ದ ಉಗ್ರರ ತಂಡವನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಿ ಈ ಮುಂಚೆ ಜೈಲಿನಲ್ಲಿದ್ದ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿದೇಶಿ ಮೂಲಗಳಿಂದ ಹಣದ ಪಡೆದಿದ್ದು ಒಪ್ಪಿದ ಅಂದ್ರಾಬಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಂ ಮಹಿಳೆಯರಿಂದ ಪ್ರತಿಭಟನೆ ಮಾಡಿಸಲು ವಿದೇಶಿ ಮೂಲಗಳಿಂದ ಹಣ ಪಡೆದ ಬಗ್ಗೆ ವಿಚಾರಣೆ ವೇಳೆ ಆಸಿಯಾ ಅಂದ್ರಾಬಿ ಒಪ್ಪಿಕೊಂಡಿರುವುದಾಗಿ ಎನ್ಐಎ ಹೇಳಿದೆ. ತನ್ನ ಸಂಸ್ಥೆ ದುಖ್ತಾರನ್-ಎ-ಮಿಲ್ಲಾಥಾದ್ಗೆ ವಿದೇಶಿಗರಿಂದ ಹಲವು ಬಾರಿ ಹಣದ ನೆರವು ಹರಿದುಬಂದಿದೆ ಎಂದು ಆಸಿಯಾ ತಿಳಿಸಿದ್ದಾರೆ ಎನ್ನಲಾಗಿದೆ.