ಹೊಸದಿಲ್ಲಿ: ಜೈಲಿನಿಂದ ಹೊರಗಿರಲು ಬಯಸುವುದಾದರೆ ಮುಂದಿನ ವರ್ಷದ ಫೆಬ್ರುವರಿ ಆರರೊಳಗೆ 600 ಕೋಟಿ ರೂ. ಪಾವತಿ ಮಾಡುವಂತೆ ಸಹರಾ ಸಂಸ್ಥೆಯ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದೆ.
ತಮ್ಮ ತಾಯಿಯ ನಿಧನದ ಹಿನ್ನೆಲೆಯಲ್ಲಿ ಈ ವರ್ಷದ ಮೇ ತಿಂಗಳಿನಿಂದ ಪೆರೋಲ್ ಮೇಲಿರುವ ಸುಬ್ರತಾ ರಾಯ್ ಅವರ ಪೆರೋಲ್ ಅವಧಿಯನ್ನು ವಿಸ್ತರಿಸಲಾಗಿದೆ. ಫೆ.6ರೊಳಗೆ ನಿಗದಿ ಹಣವನ್ನು ಪಾವತಿ ಮಾಡಲು ಸಾಧ್ಯವಾಗದೇ ಇದ್ದರೆ ಕೋರ್ಟ್ಗೆ ಶರಣಾಗುವಂತೆ ಅವರಿಗೆ ಸೂಚನೆ ನೀಡಲಾಗಿದೆ.
ಸಣ್ಣ ಹೂಡಿಕೆದಾರರು ಹೂಡಿದ 24000 ಕೋಟಿ ರೂ. ಮರುಪಾವತಿ ಮಾಡುವ ವಿಚಾರದಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿ ಜತೆ ಸಹಾರಾ ಗ್ರೂಪ್ ಕಂಪೆನಿ ಸುದೀರ್ಘ ಕಾನೂನು ಸಮರದಲ್ಲಿ ತೊಡಗಿದೆ. ಸಹಾರಾ ಈಗಾಗಲೇ 11000 ಕೋಟಿ ರೂ. ಮರುಪಾವತಿ ಮಾಡಿದೆ. ಉಳಿದ ಹಣವನ್ನು ಮುಂದಿನ ಎರಡೂವರೆ ವರ್ಷಗಳಲ್ಲಿ ಪಾವತಿ ಮಾಡುವುದಾಗಿ ಕೋರ್ಟ್ಗೆ ತಿಳಿಸಿದೆ.
ಸಹಾರಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಮಾರುಕಟ್ಟೆ ಪರಿಸ್ಥಿತಿ ಈಗ ಚೆನ್ನಾಗಿಲ್ಲ ಎಂದರು. ಇದನ್ನು ಒಪ್ಪದ ಕೋರ್ಟ್, ''ಮಾರುಕಟ್ಟೆ ವ್ಯವಹಾರ ಒಮ್ಮೆ ಚೆನ್ನಾಗಿರುತ್ತದೆ, ಇನ್ನೊಮ್ಮೆ ಕೆಟ್ಟದಿರುತ್ತದೆ. ಅದನ್ನು ನಂಬಿಕೊಂಡಿರಲು ಸಾಧ್ಯವಿಲ್ಲ,'' ಎಂದು ತಿಳಿಸಿತು.