ಆ್ಯಪ್ನಗರ

ಆಂತರಿಕ ಭದ್ರತೆಗೆ ಒತ್ತು: ರಾಜ್ಯಗಳಿಗೆ ಪ್ರಧಾನಿ ಸೂಚನೆ

ನೆರೆಹೊರೆ ದೇಶಗಳಲ್ಲಿ ಹೆಚ್ಚುತ್ತಿರುವ ಉಗ್ರರ ಪ್ರಾಬಲ್ಯದ ಹಿನ್ನೆಲೆಯಲ್ಲಿ ಆಂತರಿಕ ಭದ್ರತೆಗೆ ಹೆಚ್ಚು ಒತ್ತು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚಿಸಿದ್ದಾರೆ.

ಏಜೆನ್ಸೀಸ್ 17 Jul 2016, 4:34 am
10 ವರ್ಷಗಳ ಬಳಿಕ ಅಂತರ-ರಾಜ್ಯ ಮಂಡಳಿ ಸಭೆ | ಗುಪ್ತಚರ ಸಹಕಾರಕ್ಕೆ ಮೋದಿ ಮನವಿ
Vijaya Karnataka Web pm instructed to accord priority for internal security
ಆಂತರಿಕ ಭದ್ರತೆಗೆ ಒತ್ತು: ರಾಜ್ಯಗಳಿಗೆ ಪ್ರಧಾನಿ ಸೂಚನೆ


ಹೊಸದಿಲ್ಲಿ: ನೆರೆಹೊರೆ ದೇಶಗಳಲ್ಲಿ ಹೆಚ್ಚುತ್ತಿರುವ ಉಗ್ರರ ಪ್ರಾಬಲ್ಯದ ಹಿನ್ನೆಲೆಯಲ್ಲಿ ಆಂತರಿಕ ಭದ್ರತೆಗೆ ಹೆಚ್ಚು ಒತ್ತು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚಿಸಿದ್ದಾರೆ.

ಸದಾ ಕಟ್ಟೆಚ್ಚರದಿಂದ ಇರುವ ಮೂಲಕ ಭದ್ರತೆಗೆ ಎದುರಾಗುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಕೇಂದ್ರ ಗುಪ್ತಚರ ಇಲಾಖೆ ಜತೆ ರಾಜ್ಯಗಳು ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ಬರೋಬ್ಬರಿ 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ದಿಲ್ಲಿಯಲ್ಲಿ ಶನಿವಾರ ನಡೆದ ‘ಅಂತರ-ರಾಜ್ಯ ಮಂಡಳಿ’ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ಗಳು ಹಾಗೂ ಕೇಂದ್ರದ 17 ಸಚಿವರು ಸಭೆಯಲ್ಲಿ ಭಾಗವಹಿಸಿದರು.

ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ, ಒಂದೇ ವೇದಿಕೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಂವಾದದಲ್ಲಿ ಪಾಲ್ಗೊಂಡಿದ್ದು ಸಹ ಇದೇ ಮೊದಲು.

‘ಆಂತರಿಕ ಭದ್ರತೆ ಎದುರಿಸಲು ದೇಶವನ್ನು ಸಜ್ಜುಗೊಳಿಸುವುದು ಹೇಗೆಂಬ ಬಗ್ಗೆ ದೃಷ್ಟಿ ಕೇಂದ್ರೀಕರಿಸಬೇಕು. ಸದಾ ಕಟ್ಟೆಚ್ಚರದಿಂದ ಇರುವುದಷ್ಟೇ ಅಲ್ಲದೆ, ಸುತ್ತಲಿನ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದಿರಬೇಕು. ಕೇಂದ್ರೀಯ ಗುಪ್ತಚರ ಇಲಾಖೆ ಜತೆ ಸಹಕಾರದಿಂದ, ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಗಟ್ಟಿಗೊಳ್ಳುವುದರ ಜತೆಗೆ ಜನರ ಉತ್ತಮ ಭವಿಷ್ಯಕ್ಕೂ ಇದರಿಂದ ನೆರವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜತೆ ಜತೆಯಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ,’ ಎಂದು ಮೋದಿ ಹೇಳಿದರು.

ಸಿದ್ದು ಬದಲಿಗೆ ಪರಮೇಶ್ವರ್‌ ಹಾಜರು

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಗೆ ಹಾಜರಾಗಲಿಲ್ಲ. ಅವರ ಬದಲಿಗೆ ಸಚಿವ ಜಿ ಪರಮೇಶ್ವರ್‌ ರಾಜ್ಯವನ್ನು ಪ್ರತಿನಿಧಿಸಿದರು. ಇನ್ನು, ಉತ್ತರ ಪ್ರದೇಶ ಸಿಎಂ ಅಖಿಲೇಶ್‌ ಯಾದವ್‌ ಹಾಗೂ ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಕೂಡಾ ಸಭೆಗೆ ಗೈರಾಗಿದ್ದರು.

ಅಂತರ-ರಾಜ್ಯ ಮಂಡಳಿ ಸಭೆ ಮಹತ್ವ

ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸಹಕಾರ ಮತ್ತು ಸಮನ್ವಯ ಹೆಚ್ಚಿಸುವ ದೃಷ್ಟಿಯಿಂದ ಅಂತರ-ರಾಜ್ಯ ಮಂಡಳಿ ಸಭೆ ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಪ್ರಮುಖ ಸಚಿವರು ಒಂದು ವೇದಿಕೆಯಲ್ಲಿ ಸೇರಿ ಭದ್ರತೆ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸುತ್ತಾರೆ. 2006ರ ಬಳಿಕ ಇದೇ ಮೊದಲ ಬಾರಿಗೆ ಇಂತಹ ಸಭೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ