ಆ್ಯಪ್ನಗರ

ಕೇರಳಕ್ಕೆ ಇನ್ನಷ್ಟು ನೆರವು; ಈಗ ಕೊಟ್ಟಿರುವುದು ಮುಂಗಡ ಅಷ್ಟೇ: ಪ್ರಧಾನಿ ಮೋದಿ

ಪ್ರವಾಹದಿಂದ ಹಾನಿಗೀಡಾಗಿರುವ ಕೇರಳಕ್ಕೆ ಕೇಂದ್ರ ಸರಕಾರ ಇನ್ನಷ್ಟು ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಪಾಲ ಪಿ. ಸದಾಶಿವಂ ಅವರಿಗೆ ವಾಗ್ದಾನ ಮಾಡಿದ್ದಾರೆ.

Vijaya Karnataka Web 26 Aug 2018, 9:52 pm
[ಮೂಲ ಸುದ್ದಿ: ಟೈಮ್ಸ್ ಆಫ್ ಇಂಡಿಯಾ, 26 ಆಗಸ್ಟ್ 2018]
Vijaya Karnataka Web PM Modi new


ತಿರುವನಂತಪುರಂ:
ಪ್ರವಾಹದಿಂದ ಹಾನಿಗೀಡಾಗಿರುವ ಕೇರಳಕ್ಕೆ ಕೇಂದ್ರ ಸರಕಾರ ಇನ್ನಷ್ಟು ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಪಾಲ ಪಿ. ಸದಾಶಿವಂ ಅವರಿಗೆ ವಾಗ್ದಾನ ಮಾಡಿದ್ದಾರೆ.

ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ನಿಧಿಯಿಂದ ನಿಯಮಾನುಸಾರ ಮತ್ತಷ್ಟು ನೆರವು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇರಳಕ್ಕೆ ಈಗ ಬಿಡುಗಡೆ ಮಾಡಿರುವ 600 ಕೋಟಿ ರೂ ಮುಂಗಡ ನೆರವು ಅಷ್ಟೇ; ಇತ್ತೀಚಿನ ಪ್ರವಾಹದಿಂದ ತೀರಾ ಹದಗೆಟ್ಟಿರುವ ರಾಜ್ಯದ ಪುನರ್ನಿಮಾಣಕ್ಕೆ ಕೇಂದ್ರ ಸರಕಾರ ಮತ್ತಷ್ಟು ನೆರವು ನೀಡಲಿದೆ ಎಂದು ಪ್ರಧಾನಿ ಮೋದಿ ಅವರು ಕೇರಳ ರಾಜ್ಯಪಾಲರಿಗೆ ತಿಳಿಸಿದ್ದಾರೆ. ರಾಜ್ಯಪಾಲ ಸದಾಶಿವಂ ಶನಿವಾರ ಹೊಸದಿಲ್ಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದ್ದರು.

ರಾಜ್ಯದಲ್ಲಿ ನಡೆಯುತ್ತಿರುವ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ರಾಜ್ಯಪಾಲರು ಪ್ರಧಾನಿಗೆ ವಿವರಿಸಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.

ಅಂತರ್‌-ಸಚಿವಾಲಯ ಕೇಂದ್ರ ತಂಡ (ಐಸಿಎಂಟಿ) ಹಾಗೂ ಉನ್ನತ ಮಟ್ಟದ ಸಮಿತಿ ರಾಜ್ಯದಲ್ಲಿ ಹಾನಿಯ ಸಮೀಕ್ಷೆ ನಡೆಸಲಿದ್ದು, ವರದಿ ಸಲ್ಲಿಸುವುದು ವಿಳಂಬವಾಗುವ ಸಾಧ್ಯತೆಯಿದೆ. ಹಾಗಾಗಿ ಮುಂಗಡ ನೆರವು 600 ಕೋಟಿ ರೂ.ಗಳನ್ನು ಪ್ರಕಟಿಸಲಾಗಿದೆ; ಈ ಪೈಕಿ 562.45 ಕೋಟಿ ರೂ ಗಳನ್ನು ಈಗಾಗಲೇ ರಾಜ್ಯ ವಿಪತ್ತು ಪ್ರತಿಸ್ಪಂದನಾ ನಿಧಿಗೆ ವರ್ಗಾಯಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಕೇರಳಕ್ಕೀಗ ತುರ್ತು ನೆರವು ಬೇಕಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಅನುಸರಿಸುವ ನಿಯಮ ಮತ್ತು ಪ್ರಕ್ರಿಯೆಗಳನ್ನು ಪಕ್ಕಕ್ಕಿಟ್ಟು ಈ ನೆರವು ಒದಗಿಸಲಾಗಿದೆ ಎಂದು ರಾಜಭವನದ ಪ್ರಕಟಣೆ ಸ್ಪಷ್ಟಪಡಿಸಿದೆ.

ಈ ಹಣಕಾಸು ನೆರವಿನ ಜತೆಗೆ, ದೊಡ್ಡ ಪ್ರಮಾಣದಲ್ಲಿ ಆಹಾರ, ನೀರು, ಔಷಧಗಳು ಮತ್ತು ಆಹಾರ ಧಾನ್ಯ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಕೇರಳಕ್ಕೆ ರವಾನಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.

ರಾಜ್ಯಪಾಲರು ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಅವರನ್ನೂ ಭೇಟಿ ಮಾಡಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹಾಗೂ ರಾಜ್ಯ ಸರಕಾರ ಕೈಗೊಳ್ಳುತ್ತಿರುವ ಪರಿಹಾರ ಕಾರ್ಯಾಚರಣೆಯ ವೇಗದ ಬಗ್ಗೆ ವಿವರಿಸಿದ್ದಾರೆ.

ಇತ್ತೀಚಿನ ಪ್ರಳಯಕಾರಿ ಪ್ರವಾಹಕ್ಕೆ ಕೇರಳದಲ್ಲಿ 302 ಮಂದಿ ಬಲಿಯಾಗಿದ್ದು, ನಾಲ್ಕು ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತ ಶಿಬಿರಗಳಲ್ಲಿ ಬದುಕುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ