ಆ್ಯಪ್ನಗರ

ಬೊಹ್ರಾ ಮುಸ್ಲಿಮರ ದೇಶಪ್ರೇಮ ಕೊಂಡಾಡಿದ ಪ್ರಧಾನಿ ಮೋದಿ

ಬೊಹ್ರಾ ಮುಸ್ಲಿಂ ಸಮುದಾಯವು ಇಡೀ ವಿಶ್ವಕ್ಕೆ ಸಹಜೀವನ ಸಂದೇಶವನ್ನು ಸಾರುತ್ತಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

Vijaya Karnataka 15 Sep 2018, 11:52 am
ಇಂದೋರ್‌: ಬೊಹ್ರಾ ಮುಸ್ಲಿಂ ಸಮುದಾಯವು ಇಡೀ ವಿಶ್ವಕ್ಕೆ ಸಹಜೀವನ ಸಂದೇಶವನ್ನು ಸಾರುತ್ತಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
Vijaya Karnataka Web muslim


ಮಧ್ಯಪ್ರದೇಶದ ಇಂದೋರ್‌ನ ಸೈಫಿ ಮಸೀದಿಯಲ್ಲಿ ಬೊಹ್ರಾ ಸಮುದಾಯದ ಸಭೆಯಲ್ಲಿ ಶುಕ್ರವಾರ ಪಾಲ್ಗೊಂಡ ಮೋದಿ ಅವರು, ಸಮುದಾಯದ ಆಧ್ಯಾತ್ಮಿಕ ಮುಖ್ಯಸ್ಥ ಸೈಯದ್‌ನಾ ಮುಫ್ತಾದಾಲ್‌ ಸೈಫುದ್ದೀನ್‌ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಸಭೆಯಲ್ಲಿ ಮಾತನಾಡಿದ ಮೋದಿಯವರು ವ್ಯವಹಾರದಲ್ಲೂ ಈ ಸಮುದಾಯದ ಪ್ರಾಮಾಣಿಕತೆ ಬಗ್ಗೆ ಶ್ಲಾಘಿಸಿದರು. ಬೊಹ್ರಾ ಸಮುದಾಯವು ಶಿಯಾ ಇಸ್ಲಾಂನಲ್ಲೇ ಒಂದ ಉಪ ಪಂಗಡವಾಗಿದ್ದು, ವಹಿವಾಟು ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಅತ್ಯಂತ ಕುಶಾಗ್ರಮತಿಯುಳ್ಳವರಾಗಿ ಗುರುತಿಸಿಕೊಂಡಿದ್ದಾರೆ.

''ಇಡೀ ಜಗತ್ತನ್ನೇ ತನ್ನ ಕುಟುಂಬ ಎಂದು ಭಾವಿಸುವ 'ವಸುದೈವ ಕುಟುಂಬಕಂ' ಪರಿಕಲ್ಪನೆಯು ಭಾರತದ ದೊಡ್ಡ ಶಕ್ತಿ. ಇದರಿಂದಲೇ ಭಾರತ ಅನನ್ಯವೆನಿಸಿದೆ. ಬೊಹ್ರಾ ಸಮುದಾಯವು ತನ್ನ ಕೆಲಸದ ಮೂಲಕ ಈ ಪ್ರಾಚೀನ ಹಿಂದೂ ಧರ್ಮದ ಪರಿಕಲ್ಪನೆಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸುತ್ತಿದೆ. ಈ ಸಮುದಾಯದ ದೇಶಪ್ರೇಮ ಪ್ರಶ್ನಾತೀತವಾದದ್ದು,'' ಎಂದು ಮೋದಿ ಹೇಳಿದರು.

ಇದೇ ವೇಳೆ ಆಯುಷ್ಮಾನ್‌ ಭಾರತ್‌ ಸೇರಿದಂತೆ ಕೇಂದ್ರ ಸರಕಾರದ ಹಲವು ಯೋಜನೆಗಳು ಹಾಗೂ ಸಾಧನೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು. ''ನಮ್ಮ ಸರಕಾರ ಬಡವರು ಹಾಗೂ ಮಧ್ಯಮವರ್ಗದ ಪರವಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯಿಂದ ಕೋಟ್ಯಂತರ ಜನರಿಗೆ ಅಗ್ಗದ ದರದಲ್ಲಿ ಆರೋಗ್ಯ ಸೇವೆ ದೊರೆಯಲಿದೆ. 2022ರೊಳಗೆ ಪ್ರತಿಯೊಬ್ಬರಿಗೂ ಮನೆ ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಬಯಲು ಶೌಚಾಲಯದಿಂದ ಜನರನ್ನು ಮುಕ್ತಗೊಳಿಸಿದ್ದೇವೆ. ಇಂದೋರಿನಲ್ಲಿ ಸ್ವಚ್ಛ ಭಾರತ್‌ ಯೋಜನೆ ಯಶಸ್ವಿಯಾಗಿದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ