ಆ್ಯಪ್ನಗರ

ಕಿಸಾನ್‌ಪಿಎಂ-ಕಿಸಾನ್‌ ಸಮ್ಮಾನ್‌ ಯೋಜನೆಗೆ ಇಂದು ಚಾಲನೆ

ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ, ಕರ್ನಾಟಕ, ಉತ್ತರಪ್ರದೇಶ ಸೇರಿದಂತೆ 14 ರಾಜ್ಯಗಳ ಒಂದು ಕೋಟಿಗೂ ಅಧಿಕ ರೈತರು ತಲಾ 2,000 ರೂ.ಪಡೆಯಲಿದ್ದಾರೆ.

Vijaya Karnataka 24 Feb 2019, 5:00 am
Vijaya Karnataka Web modi
ಹೊಸದಿಲ್ಲಿ : ರೈತರಿಗೆ ವಾರ್ಷಿಕ 6,000 ರೂ. ನೆರವು ನೀಡುವ ಪಿಎಂ-ಕಿಸಾನ್‌ ಸಮ್ಮಾನ್‌ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಯೋಜನೆಗೆ ಚಾಲನೆ ಸಿಗಲಿದೆ. ಮೊದಲ ಕಂತಾಗಿ ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿನ ಒಂದು ಕೋಟಿಗೂ ಅಧಿಕ ರೈತರ ಖಾತೆಗೆ ತಲಾ 2,000 ರೂ. ಜಮಾ ಮಾಡಲಾಗುತ್ತದೆ.

ಯೋಜನೆಯ ಮೊದಲ ಹಂತದಲ್ಲಿ ಆರಂಭದ ಕಂತಾದ 2,000 ರೂಪಾಯಿಯನ್ನು ಎಷ್ಟು ರೈತರು ಭಾನುವಾರ(ಫೆ.24) ಪಡೆಯಲಿದ್ದಾರೆ ಅನ್ನುವುದನ್ನು ಕೃಷಿ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ, ಕರ್ನಾಟಕ, ಉತ್ತರಪ್ರದೇಶ ಸೇರಿದಂತೆ 14 ರಾಜ್ಯಗಳ ಒಂದು ಕೋಟಿಗೂ ಅಧಿಕ ರೈತರು ತಲಾ 2,000 ರೂ.ಪಡೆಯಲಿದ್ದಾರೆ. ಸ್ಟೇಟ್‌ ನ್ಯಾಷನಲ್‌ ಅಕೌಂಟ್‌ ಮೂಲಕ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸುವುದಾಗಿ ಸಚಿವಾಲಯ ಹೇಳಿದೆ. ಇತರೆ ಒಂದು ಕೋಟಿ ರೂ. ರೈತರಿಗೆ ಮುಂದಿನ 2-3 ದಿನಗಳಲ್ಲಿ ಮೊದಲ ಕಂತನ್ನು ಪಾವತಿಸಲಾಗುವುದು ಎಂದು ಕೃಷಿ ಸಚಿವಾಲಯದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮಧ್ಯಂತರ ಬಜೆಟ್‌ನಲ್ಲಿ 75,000 ಕೋಟಿ ರೂ.ಗಳ ಪಿಎಂ-ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಪ್ರಕಟಿಸಲಾಗಿತ್ತು. ಎರಡು ಹೆಕ್ಟೇರ್‌ ವರೆಗೆ ಜಮೀನು ಹೊಂದಿರುವ ದೇಶದ ಸಣ್ಣ ಮತ್ತು ಮಧ್ಯವರ್ಗದ 12 ಕೋಟಿ ರೈತರಿಗೆ ಈ ಯೋಜನೆ ಲಭ್ಯ. ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ.ಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.

ನರೇಗಾ ಮಾಡೆಲ್‌ ಬಳಕೆ

ಪಿಎಂ-ಕಿಸಾನ್‌ ಯೋಜನೆಯ ಫಲಾನುಭವಿಗಳಿಗೆ ಹಣ ವರ್ಗಾಯಿಸಲು ನರೇಗಾ ಮಾದರಿಯನ್ನೇ ಕೇಂದ್ರ ಸರಕಾರ ಅನುಸರಿಸಿದೆ. ಸ್ಟೇಟ್‌ ನ್ಯಾಷನಲ್‌ ಅಕೌಂಟ್‌ ಮೂಲಕ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ. ಜಿಲ್ಲಾವಾರು ಫಲಾನುಭವಿಗಳ ಪಟ್ಟಿಯನ್ನು ದೃಢೀಕರಿಸಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಿಎಂ-ಕಿಸಾನ್‌ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡುತ್ತವೆ. ಆ ರೈತರಿಗೆ ನಗದು ನೆರವನ್ನು ಸರಕಾರವು ವಿತರಿಸುತ್ತದೆ. ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಭೂದಾಖಲೆಗಳು ಡಿಜಿಟಲೀಕರಣಗೊಂಡಿದ್ದು, ಪಿಎಂ-ಕಿಸಾನ್‌ ಯೋಜನೆಗೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವುದು ಸುಲಭ. ಮಾರ್ಚ್‌ ಅಂತ್ಯದೊಳಗೆ ದೇಶದ ಎಲ್ಲ ಅರ್ಹ ರೈತರಿಗೆ ಮೊದಲ ಕಂತಾದ 2,000 ರೂ.ಪಾವತಿಸುವ ಗುರಿಯನ್ನು ಸರಕಾರ ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ