ಆ್ಯಪ್ನಗರ

ಅಬುಧಾಬಿಯಲ್ಲಿ ಮೊದಲ ಹಿಂದೂ ಮಂದಿರಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಶ್ಚಿಮ ಏಷ್ಯಾ ಪ್ರವಾಸದ ವೇಳೆ ಅಬುಧಾಬಿಯಲ್ಲಿ ನಿರ್ಮಾಣವಾಗಲಿರುವ ಮೊದಲ ಹಿಂದೂ ದೇವಾಲಯಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಲಿದ್ದಾರೆ.

Vijaya Karnataka Web 10 Feb 2018, 5:44 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಶ್ಚಿಮ ಏಷ್ಯಾ ಪ್ರವಾಸದ ವೇಳೆ ಅಬುಧಾಬಿಯಲ್ಲಿ ನಿರ್ಮಾಣವಾಗಲಿರುವ ಮೊದಲ ಹಿಂದೂ ದೇವಾಲಯಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಲಿದ್ದಾರೆ.
Vijaya Karnataka Web pm modi to inaugurate abu dhabis first hindu temple 20000 sq m complex likely to be completed by 2020
ಅಬುಧಾಬಿಯಲ್ಲಿ ಮೊದಲ ಹಿಂದೂ ಮಂದಿರಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ


ಪ್ರಸ್ತುತ ಯುನೈಟೆಡ್ ಅರಬ್‌ ಎಮಿರೇಟ್ಸ್‌ (ಯುಎಇ) ನ ದುಬೈನಲ್ಲಿ ಮಾತ್ರ ಒಂದು ಹಿಂದೂ ದೇವಾಲಯವಿದೆ.

ಮೋದಿ ಅವರು 2015ರಲ್ಲಿ ಮೊದಲ ಬಾರಿ ಭೇಟಿ ನೀಡಿದ್ದಾಗ ಯುಎಇ ಸರಕಾರ ಅಬುಧಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಭೂಮಿ ನೀಡುವುದಾಗಿ ಘೋಷಿಸಿತ್ತು. ಅದರಂತೆ ಅಲ್‌ ವತಾಬದಲ್ಲಿ 20,000 ಚದರ ಮೀಟರ್‌ ವಿಸ್ತೀರ್ಣದ ಭೂಮಿ ಮಂಜೂರು ಮಾಡಿತ್ತು. ಅಲ್ಲಿ ಮಂದಿರವನ್ನು ಖಾಸಗಿ ದೇಣಿಗೆಗಳಿಂದ ನಿರ್ಮಿಸಲಾಗುತ್ತಿದೆ. ಬೊಚಸನ್ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್‌ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್‌) ಈ ಮಂದಿರದ ಆಡಳಿತ ನೋಡಿಕೊಳ್ಳಲಿದೆ.

ಯುಎಇಯಲ್ಲಿ ಒಟ್ಟು 26 ಲಕ್ಷ ಭಾರತೀಯರಿದ್ದು ಒಟ್ಟು ಜನಸಂಖ್ಯೆಯ ಶೇ 30ರಷ್ಟಿದ್ದಾರೆ.

ಅಬುಧಾಬಿಯಲ್ಲಿ ನಿರ್ಮಾಣಗೊಳ್ಳಲಿರುವ ಹಿಂದೂ ದೇವಸ್ಥಾನದ ಚಿತ್ರವಿದು. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಫೆ.11) ಈ ಮಂದಿರದ ಶಿಲಾಪೂಜನ ವಿಧಿ ನೆರವೇರಿಸಲಿದ್ದಾರೆ. (ಚಿತ್ರ ಕೃಪೆ: ಖಲೀಜ್‌ ಟೈಮ್ಸ್‌)

2020ರ ವೇಳೆಗೆ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ. ದುಬೈ-ಅಬುಧಾಬಿ ಹೆದ್ದಾರಿಯ ಪಕ್ಕದಲ್ಲಿ ಅಬು ಮುರೈಖಾ ಎಂಬಲ್ಲಿ ಸಂಪೂರ್ಣ ಹಿಂದೂ ಸಾಂಪ್ರದಾಯಿಕ ಶೈಲಿಯಲ್ಲಿ ಮಂದಿರ ನಿರ್ಮಾಣವಾಗಲಿದೆ. ಶಿಲೆಗಳ ಕೆತ್ತನೆಯನ್ನು ಭಾರತದಲ್ಲೇ ಪೂರ್ಣಗೊಳಿಸಿ ಯುಎಇನಲ್ಲಿ ಜೋಡಿಸುವ ಕಾರ್ಯ ನಡೆಯಲಿದೆ. ಯಾತ್ರಿಕರ ಕೇಂದ್ರ, ಪ್ರಾರ್ಥನಾ ಮಂದಿರಗಳು, ಪ್ರದರ್ಶನ ಕೇಂದ್ರ, ಅಧ್ಯಯನ ಚಾವಡಿಗಳು, ಮಕ್ಕಳ ಆಟದ ಬಯಲು, ಗಾರ್ಡನ್‌ಗಳು, ಕಾರಂಜಿಗಳು ಮತ್ತು ಫುಡ್‌ ಕೋರ್ಟ್‌ ಈ ಮಂದಿರ ಸಮುಚ್ಚಯದಲ್ಲಿ ಇರಲಿದೆ. ಎಲ್ಲ ಧಾರ್ಮಿಕ ನಂಬಿಕೆಯವರಿಗೂ ಈ ಮಂದಿರಕ್ಕೆ ಪ್ರವೇಶ ಇರುತ್ತದೆ.

ಚಿತ್ರಗಳಲ್ಲಿ ನೋಡಿ: ಅಬುಧಾಬಿಯಲ್ಲಿ ಭವ್ಯ ಶ್ರೀಕೃಷ್ಣ ಮಂದಿರದ ಮಾಡೆಲ್‌

ದಿಲ್ಲಿ, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುಕೆಗಳಲ್ಲಿ ಇರುವ ಸ್ವಾಮಿನಾರಾಯಣ ಅಕ್ಷರಧಾಮ ಮಂದಿರಗಳ ನಿರ್ವಹಣೆಯನ್ನು ಬಿಎಪಿಎಸ್‌ ನೋಡಿಕೊಳ್ಳುತ್ತಿದೆ.

'ಅಬುಧಾಬಿಯ ಪಟ್ಟಾಭಿಷಿಕ್ತ ರಾಜಕುಮಾರ ಹಿಂದೂ ದೇವಾಲಯ ನಿರ್ಮಾಣಕ್ಕೆ ಉದಾರ ಕೊಡುಗೆಯಾಗಿ ಭೂಮಿ ನೀಡಿರುವುದು ಜಾಗತಿಕ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಒಳಗೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ. ಜಾಗತಿಕ ಶಾಂತಿಯ ಪ್ರಬಲ ಸಂದೇಶವೊಂದು ಇಲ್ಲಿಂದ ಹೊರಹೊಮ್ಮಿದೆ' ಎಂದು ಮಧ್ಯಪ್ರಾಚ್ಯದಲ್ಲಿ ಬಿಎಪಿಎಸ್‌ ಚಟುವಟಿಕೆಗಳ ಉಸ್ತುವಾರಿ ಹೊತ್ತಿರುವ ಬ್ರಹ್ಮವಿಹಾರಿದಾಸ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಾಂತಿ ಮತ್ತು ಸೌಹಾರ್ದತೆಗೆ ಅಬುಧಾಬಿಯ ದೊರೆ ಶೇಖ್‌ ಮೊಹಮ್ಮದ್‌ ಬಿನ್‌ ಝಾಯೇದ್‌ ಅಲ್‌ ನಹ್ಯಾನ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ತೋರಿದ ಬದ್ಧತೆಗೆ ಹಾಗೂ ಎರಡೂ ದೇಶಗಳ ಜನತೆಗೆ ನಾವು ಆಭಾರಿಯಾಗಿದ್ದೇವೆ ಎಂದು ಅವರು ತಿಳಿಸಿದರು.

ದುಬೈನಲ್ಲಿ ಒಂದು ಸಿಖ್‌ ಗುರುದ್ವಾರವೂ ಇದೆ. ಅಲ್ಲದೆ ಅಬುಧಾಬಿ ಮತ್ತು ದುಬೈಗಳಲ್ಲಿ ಕ್ರೈಸ್ತ ಚರ್ಚ್‌ಗಳೂ ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ