ಆ್ಯಪ್ನಗರ

ರಗಳೆ ರಾಷ್ಟ್ರಕ್ಕೆ ದಂಡವೇ ಮದ್ದು: ಕೇಡು ಬಯಸುವವರಿಗೆ ಉಪಕಾರ ಮಾಡುವುದು ಅರ್ಥಹೀನ ಎಂದ ಮೋದಿ

​​ಕಾಶ್ಮೀರ ವಿಚಾರದಲ್ಲಿಸಲ್ಲದ ತರಲೆ ಮಾಡು­ತ್ತಿರುವ ನೆರೆ ರಾಷ್ಟ್ರದ ಮುಂದೆ ಸಮಾಧಾನದಿಂದ ಸ್ನೇಹ ಹಸ್ತ ಚಾಚಿದರೆ ಪ್ರಯೋಜನವಿಲ್ಲ, ಅದನ್ನು ದಂಡಿಸಲು ಇನ್ನು ದಂಡವೇ ಬೇಕು ಎನ್ನುವ ನಡೆಯನ್ನು ನೇರವಾಗಿಯೇ ಪ್ರಧಾನಿ ಪ್ರತಿಪಾದಿಸಿದರು..

Vijaya Karnataka 16 Oct 2019, 6:41 am
ಚಂಡೀಗಢ: ಸದಾ ಕೇಡನ್ನೇ ಯೋಚಿಸುವ ಪಾಕಿಸ್ತಾನಕ್ಕೆ ಭಾರತ ಯಾವ ರೀತಿಯ ಉಪಕಾರ ಮಾಡಿದರೂ ವ್ಯರ್ಥ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್‌ಗೆ ನೀರು ಹರಿಸದೇ ಇರುವ ತಮ್ಮ ಸರಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.
Vijaya Karnataka Web modi 1111


ಹರಿಯಾಣದ ಛರ್ಖಿ ದಾದ್ರಿಯಲ್ಲಿ ಮಂಗಳ­ವಾರ ಬಿಜೆಪಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ''ಕಳೆದ ಏಳು ದಶಕಗಳಿಂದ ಪಾಕಿಸ್ತಾನಕ್ಕೆ ಹರಿದು ಹೋಗುತ್ತಿರುವ ನೀರಿನ ಮೇಲೆ ನಿಜವಾದ ಹಕ್ಕು ಇರುವುದು ಹರಿಯಾಣ ಮತ್ತು ರಾಜಸ್ಥಾನದ ಜನತೆಗೆ ಮಾತ್ರ. ಈ ಸತ್ಯ ಗೊತ್ತಿದ್ದರೂ ಹಿಂದಿನ ಸರಕಾರಗಳು ನೀರು ನಿಲ್ಲಿಸುವ ಪ್ರಯತ್ನ ಮಾಡಲಿಲ್ಲ. ಇನ್ನು ಮುಂದೆ ಅದು ನಡೆಯುವುದಿಲ್ಲ,'' ಎಂದು ಗುಡುಗಿದರು.

ಕಾಶ್ಮೀರ ವಿಚಾರದಲ್ಲಿಸಲ್ಲದ ತರಲೆ ಮಾಡು­ತ್ತಿರುವ ನೆರೆ ರಾಷ್ಟ್ರದ ಮುಂದೆ ಸಮಾಧಾನದಿಂದ ಸ್ನೇಹ ಹಸ್ತ ಚಾಚಿದರೆ ಪ್ರಯೋಜನವಿಲ್ಲ, ಅದನ್ನು ದಂಡಿಸಲು ಇನ್ನು ದಂಡವೇ ಬೇಕು ಎನ್ನುವ ನಡೆಯನ್ನು ನೇರವಾಗಿಯೇ ಪ್ರಧಾನಿ ಪ್ರತಿಪಾದಿಸಿದರು. ''ಮೋದಿ ಆಪ್‌ಕಿ ಲಡಾಯಿ ಲಡೇಗಾ,'' (ನಿಮ್ಮ ಯುದ್ಧದಲ್ಲಿಮೋದಿಯೂ ಹೋರಾಡುತ್ತಾರೆ) ಎಂದು ಘೋಷಿಸಿದರು.

ಕಾಂಗ್ರೆಸ್‌ ಸುಳ್ಳುಬುರುಕ ಪಕ್ಷ:
ಜಮ್ಮು-­ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದು ಪಡಿಸಿದ ತಮ್ಮ ಸರಕಾರದ ನಡೆಯನ್ನು ಪ್ರಧಾನಿ ಬಲವಾಗಿ ಸಮರ್ಥಿಸಿ­ದರು. ''ಐಕ್ಯತೆಯ ದೃಷ್ಟಿಯಿಂದ ಅಗತ್ಯವಾಗಿದ್ದ ಈ ವಿಧಿ ರದ್ದು ಕ್ರಮಕ್ಕೆ ಇಡೀ ದೇಶದ ಜನತೆ ಒಕ್ಕೊರಲ ಬೆಂಬಲ ಸೂಚಿಸಿದ್ದಾರೆ. ಆದರೆ ರಾಷ್ಟ್ರೀಯತೆಯ ಗಂಧಗಾಳಿ ಅರಿಯದ ಕಾಂಗ್ರೆಸ್‌ಗೆ ಇದು ಅಪಥ್ಯ ಎನಿಸಿತು. ಆದ್ದರಿಂದ ಅದು 370 ವಿಧಿ ರದ್ದತಿ ಕುರಿತು ಸುಳ್ಳುಗಳನ್ನು ಹರಿಬಿಟ್ಟಿತು,'' ಎಂದು ಟೀಕಿಸಿದರು.

ಹೆಣ್ಣು ಮಕ್ಕಳಿಗೆ ಅರ್ಪಣೆ: ''ನಾವು ಈ ಸಲ ಎರಡು ದೀಪಾವಳಿ ಆಚರಿಸಲಿದ್ದೇವೆ. ಒಂದು ಬೆಳಕಿನ ದೀಪಾವಳಿ, ಮತ್ತೊಂದು ಕಮಲದ ದೀಪಾವಳಿ. ಈ ವರ್ಷದ ದೀಪಾವಳಿಯನ್ನು ನಮ್ಮ ಹೆಣ್ಣುಮಕ್ಕಳಿಗೆ ಅರ್ಪಿಸೋಣ, ಅವರ ಸಾಧನೆಗಳನ್ನು ಸಂಭ್ರಮಿಸೋಣ,'' ಎಂದು ಮೋದಿ ಹೇಳಿದರು. ಇದೇ ವೇಳೆ ಹರಿಯಾಣ ಗ್ರಾಮೀಣ ಬಾಲಕಿಯರ ಶೌರ್ಯ-ಸಾಹಸ­ಗಳನ್ನು ಕೊಂಡಾಡಿದ ಪ್ರಧಾನಿ, ಇವರನ್ನು ಹೊರತು ಪಡಿಸಿ 'ಬೇಟಿ ಬಚಾವೊ, ಬೇಟಿ ಪಢಾವೊ' ಆಂದೋಲನದ ಯಶಸ್ಸು ಕಲ್ಪಿಸಲು ಸಾಧ್ಯವೇ ಇಲ್ಲಎಂದು ಕೊಂಡಾಡಿದರು. ''ನಾನು ಚುನಾವಣಾ ಪ್ರಚಾರಕ್ಕೆ ಅಥವಾ ಬಿಜೆಪಿಗೆ ಮತ ಕೇಳಲು ಹರಿಯಾಣಕ್ಕೆ ಬಂದಿಲ್ಲ. ಹರಿಯಾಣವೇ ನನ್ನನ್ನು ಕರೆಸಿಕೊಂಡಿದೆ. ನನ್ನ ಬಗ್ಗೆ ರಾಜ್ಯದ ಜನತೆ ಅಷ್ಟು ಪ್ರೀತಿ ತೋರುತ್ತಿ­ದ್ದಾರೆ,'' ಎಂದು ಭಾವನಾತ್ಮಕವಾಗಿ ಜನರ ಮನಸ್ಸು ತಟ್ಟುವ ಪ್ರಯತ್ನ ಮಾಡಿದರು. ಕುರುಕ್ಷೇತ್ರದಲ್ಲಿಯೂ ಮೋದಿ ರಾರ‍ಯಲಿ ಉದ್ದೇಶಿಸಿ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ