ಆ್ಯಪ್ನಗರ

ಬಾಡಿಗೆ ಹೆಚ್ಚಳಕ್ಕಾಗಿ ಹೋರಾಟಕ್ಕಿಳಿದ ಮೋದಿ ಆಂಟಿ

ಪ್ರಧಾನಿ ನರೇಂದ್ರ ಮೋದಿ ಅವರ ಸಂಬಂಧಿ ಎಂದು ಹೇಳಿಕೊಂಡ ವಡ್ನಾಗರದ 90 ವರ್ಷದ ವಿಧವೆ ಮಹಿಳೆ ಈಗ ದೊಡ್ಡದೊಂದು ಕಾನೂನು ಸಮರಕ್ಕೆ ಇಳಿದಿದ್ದಾರೆ.

Vijaya Karnataka 26 Jun 2018, 2:08 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಬಂಧಿ ಎಂದು ಹೇಳಿಕೊಂಡ ವಡ್ನಾಗರದ 90 ವರ್ಷದ ವಿಧವೆ ಮಹಿಳೆ ಈಗ ದೊಡ್ಡದೊಂದು ಕಾನೂನು ಸಮರಕ್ಕೆ ಇಳಿದಿದ್ದಾರೆ.
Vijaya Karnataka Web Modi 90


ದಹಿಬೆನ್‌ ನರೋತ್ತಮದಾಸ್‌ ಮೋದಿ ಅವರ ಮನೆಯ ಆವರಣದಲ್ಲಿರುವ ಸರಕಾರಿ ಔಷಧಾಲಯದ ಬಾಡಿಗೆಯನ್ನು 1998ರಿಂದ ನವೀಕರಿಸಿಲ್ಲ. ಯಾರಲ್ಲಿ ಕೇಳಿದರೂ ಸರಿಯಾದ ಉತ್ತರ ಸಿಗುತ್ತಿಲ್ಲ ಎಂದು ಆಪಾದಿಸಿ ಅವರು ಈಗ ಮೇಲ್ಮನವಿ ಪ್ರಾಧಿಕಾರದ ಮೊರೆ ಹೊಕ್ಕಿದ್ದಾರೆ.

ದೊಡ್ಡ ಹೋರಾಟ

1983ರಲ್ಲಿ ಅವರ ಮನೆಯ ಆವರಣದ ಕಟ್ಟಡವನ್ನು ಬೀಡಿ ಕಾರ್ಮಿಕರ ಕಲ್ಯಾಣ ನಿಧಿಯ ಔಷಧಾಲಯಕ್ಕೆ ನೀಡಲಾಗಿತ್ತು. ಆಗ ಇದ್ದ ತಿಂಗಳ ಬಾಡಿಗೆ 600 ರೂ. ಅದು ನವೀಕರಣಗೊಳ್ಳುತ್ತಾ 1998ಕ್ಕೆ 1500 ರೂ. ಆಗಿತ್ತು. ಅಂದಿನಿಂದ ಬಾಡಿಗೆ ಹೆಚ್ಚಲೇ ಇಲ್ಲ.

ಬಾಡಿಗೆ ಹೆಚ್ಚಿಸಬೇಕೆಂಬ ಮನವಿಯನ್ನು ಯಾರೂ ಕಿವಿಗೆ ಹಾಕಿಕೊಳ್ಳದೆ ಇದ್ದಾಗ ಸಿಟ್ಟಿಗೆದ್ದ ಮಹಿಳೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದರು. ಯಾಕೆ ಬಾಡಿಗೆ ಹೆಚ್ಚಿಸಿಲ್ಲ, ಭೋಗ್ಯ ಮತ್ತು ನವೀಕರಣದ ಕರಾರುಗಳು ಏನಿದ್ದವು ಎಂಬುದನ್ನು ತಿಳಿಸಬೇಕು ಎಂದು ಕೋರಿದ್ದರು. ಜತೆಗೆ ಇಲಾಖೆ ಹಿಂದಿನಿಂದ ಬಾಕಿಯಾಗಿರು ಅರಿಯರ್ಸ್‌ ಕೊಡುವುದೇ ಎಂದು ಕೇಳಿದ್ದರು. ‘‘ಒಂಟಿಯಾಗಿರುವ ತಾನು ಕೇವಲ ಕಟ್ಟಡ ಬಾಡಿಗೆ ಆದಾಯದಿಂದ ಬದುಕುತ್ತಿದ್ದೇನೆ. 1500 ರೂ. ಯಾವುದಕ್ಕೂ ಸಾಲುವುದಿಲ್ಲ,’’ ಎಂದು ಅವರು ನಿವೇದಿಸಿದ್ದರು.

ಖುದ್ದು ಮಾಹಿತಿ ಆಯುಕ್ತ ಶ್ರೀಧರ್‌ ಆಚಾರ್ಯುಲು ಅವರೇ ವಿಚಾರಣೆ ನಡೆಸಿದರೂ ಅಂತಿಮವಾಗಿ ಅವರಿಗೆ ತೃಪ್ತಿದಾಯಕವಾದ ಉತ್ತರ ಲಭಿಸಿಲ್ಲ.

ಭೋಗ್ಯದ ಒಪ್ಪಂದದ ಅವಧಿ ಅಂತ್ಯಗೊಂಡಿದ್ದು, 2002 ಮತ್ತು 2008ರಲ್ಲಿ ಎರಡು ಬಾರಿ ಹೊಸ ದಾಖಲೆ ಸಲ್ಲಿಸುವಂತೆ ಮಾಲೀಕರನ್ನು ಕೋರಲಾಗಿತ್ತು. ಅವರು ದಾಖಲೆ ನೀಡದೆ ಇರುವುದರಿಂದ ಒಪ್ಪಂದ ನವೀಕರಣ ಆಗಿಲ್ಲ ಎಂದು ಡಿಸ್ಪೆನ್ಸರಿಗೆ ಸಂಬಂಧಿಸಿದ ಆಯುಕ್ತ ಎಸ್‌.ಎಸ್‌. ಭೋಪ್ಲೆ ಹೇಳಿದ್ದರು.

‘‘ನನಗೆ 90 ವರ್ಷ ವಯಸ್ಸು. ಈ ದಾಖಲೀಕರಣದ ಹೆಸರಿನಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿ ಸುತ್ತ ಓಡಾಡಲು ಸಾಧ್ಯವಿಲ್ಲ. ಇಂಥ ಕ್ರೌರ್ಯವನ್ನು ಎದುರಿಸಲು ಸಾಧ್ಯವಿಲ್ಲ’’ ಎಂದು ಮಹಿಳೆ ಹೇಳಿದ್ದಾರೆ.

ಪ್ರಧಾನಿಗೆ ಹೇಳುವೆ

ಈ ನಡುವೆ, ಯಾರೂ ಸರಿಯಾಗಿ ಸ್ಪಂದಿಸದೆ ಇದ್ದ ಸಂದರ್ಭದಲ್ಲಿ ‘ನಾನು ಪ್ರಧಾನಿ ನರೇಂದ್ರ ಮೋದಿ ಅವರ ಹತ್ತಿರದ ಸಂಬಂಧಿ. ನ್ಯಾಯ ಒದಗಿಸದಿದ್ದರೆ ಅವರಿಗೆ ತಿಳಿಸುತ್ತೇನೆ,’’ ಎಂದಿದ್ದರು. ಆದರೆ, ಸಂಬಂಧದ ವಿವರಣೆ ನೀಡಿರಲಿಲ್ಲ. ಈಗ ಮೇಲ್ಮನವಿ ಪ್ರಾಧಿಕಾರ ಆಕೆಗೆ ಹೇಗೆ ಸ್ಪಂದಿಸುತ್ತದೆ ಎಂದು ಕಾದು ನೋಡಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ