ಆ್ಯಪ್ನಗರ

ಕಠುವಾ ಪ್ರಕರಣ: ಬಾಲಾಪರಾಧಿಯದು ಖೊಟ್ಟಿ ಜನ್ಮ ದಿನಾಂಕ

ಕಠುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ 8 ಆರೋಪಿಗಳಲ್ಲೊಬ್ಬನಾದ 'ಬಾಲಾಪರಾಧಿ'ಯ ಜನ್ಮ ದಿನಾಂಕವೇ ಖೊಟ್ಟಿ ಎಂಬ ಸಂಗತಿ ಬಯಲಾಗಿದ್ದು, ಈತನನ್ನೂ ವಯಸ್ಕ ಆರೋಪಿ ಎಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಪೊಲೀಸರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Vijaya Karnataka 4 Jun 2018, 7:28 am
ಶ್ರೀನಗರ: ಕಠುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ 8 ಆರೋಪಿಗಳಲ್ಲೊಬ್ಬನಾದ 'ಬಾಲಾಪರಾಧಿ'ಯ ಜನ್ಮ ದಿನಾಂಕವೇ ಖೊಟ್ಟಿ ಎಂಬ ಸಂಗತಿ ಬಯಲಾಗಿದ್ದು, ಈತನನ್ನೂ ವಯಸ್ಕ ಆರೋಪಿ ಎಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಪೊಲೀಸರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Vijaya Karnataka Web Arrest


14 ವರ್ಷಗಳ ಹಿಂದೆ ಕಠುವಾ 'ಬಾಲಾಪರಾಧಿ'ಯ ತಂದೆ ತಮ್ಮ 3 ಮಕ್ಕಳ ಜನ್ಮ ದಿನಾಂಕ ದಾಖಲಿಸಲು ಸಲ್ಲಿಸಿದ ಅರ್ಜಿ ಜಮ್ಮು-ಕಾಶ್ಮೀರ ಪೊಲೀಸರಿಗೆ ಹೈಕೋರ್ಟ್‌ ಮೆಟ್ಟಿಲೇರಲು ವೇದಿಕೆ ನಿರ್ಮಿಸಿಕೊಟ್ಟಿದೆ. ಸ್ಥಳೀಯ ವಿಚಾರಣಾ ನ್ಯಾಯಾಲಯವೊಂದರ ಆದೇಶದ ಮೇರೆಗೆ 'ಬಾಲಕ' ಸದ್ಯ ರಿಮ್ಯಾಂಡ್‌ ಹೋಮ್‌ನಲ್ಲಿದ್ದಾನೆ.

'ಬಾಲಾಪರಾಧಿ'ಯನ್ನು 'ಅಪ್ರಾಪ್ತ ವಯಸ್ಕ' ಎಂದು ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಪೊಲೀಸ್‌ ಇಲಾಖೆಯ ಕ್ರೈಂ ಬ್ರಾಂಚ್‌ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಇದರ ಜತೆ 'ಬಾಲಕ'ನ ತಂದೆ ಮಕ್ಕಳ ಜನನ ಪ್ರಮಾಣ ಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನೂ ಲಗತ್ತಿಸಲಾಗಿದೆ.

ಕಠುವಾ 'ಬಾಲಾಪರಾಧಿ'ಯ ವಯಸ್ಸು ನಿರ್ಧರಿಸಿದ ವೈದ್ಯಕೀಯ ಮಂಡಳಿಯ ತಜ್ಞರ ವರದಿಯೂ 'ಬಾಲಕ'ನದು 19 ವರ್ಷಕ್ಕೆ ಕಡಿಮೆ ಇಲ್ಲದ, ಆದರೆ 23 ಮೀರದ ವಯಸ್ಸು ಎಂದು ಸ್ಪಷ್ಟಪಡಿಸಿದ್ದು, ಅದನ್ನೂ ಪೊಲೀಸರು ತಮ್ಮ ಅರ್ಜಿಯ ಜತೆ ಲಗತ್ತಿಸಿದ್ದಾರೆ. ಹೈಕೋರ್ಟ್‌ ಜೂನ್‌ 6ರಂದು ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ತಂದೆಯ ಅರ್ಜಿಯಲ್ಲಿ ಏನಿದೆ?

'ಬಾಲಾಪರಾಧಿ'ಯ ತಂದೆ ತಮ್ಮ ಮಕ್ಕಳ 'ಜನನ ಪ್ರಮಾಣ ಪತ್ರ' ಬಯಸಿ 2004ರ ಏಪ್ರಿಲ್‌ 15ರಂದು ಜಮ್ಮು ಪ್ರಾಂತದ ಹೀರಾನಗರದ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಮೊದಲ ಮಗುವಿನ ಜನ್ಮ ದಿನಾಂಕ 23-11-1997 ಎಂದೂ, 2ನೇ ಮಗುವಿನ ಜನ್ಮ ದಿನಾಂಕವನ್ನು 21-02-1998 ಎಂದೂ, ಕೊನೆಯ ಮಗು('ಬಾಲಾಪರಾಧಿ')ವಿನ ಜನ್ಮ ದಿನಾಂಕವನ್ನು 23-10-2002 ಎಂದೂ ನಮೂದಿಸಲಾಗಿತ್ತು. ಅಂದರೆ, ಮೊದಲ ಎರಡು ಮಕ್ಕಳ ನಡುವಿನ ಅಂತರ ಕೇವಲ 2 ತಿಂಗಳು 28 ದಿನ. ವೈದ್ಯಕೀಯ ಇತಿಹಾಸದಲ್ಲಿ ಇಲ್ಲಿಯ ತನಕ ಇಂಥದ್ದೊಂದು ಅಚ್ಚರಿ ನಡೆದ ಉದಾಹರಣೆ ಇಲ್ಲ! ಇದೇ ಆಧಾರದ ಮೇಲೆ ಮೂರನೇ ಮಗುವಿನ ಜನ್ಮದಿನಾಂಕವೂ ಖೊಟ್ಟಿ ಎಂಬುದು ಪೊಲೀಸರ ವಾದವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ