ಆ್ಯಪ್ನಗರ

ರಾಜಕೀಯ ದೇಣಿಗೆ: ಸಿಂಹಪಾಲು ಬಾಚಿದ ಬಿಜೆಪಿ, ಟಾಟಾ ಗ್ರೂಪ್‌ ಅತಿ ದೊಡ್ಡ ದಾನಿ

​2012-13 ರಿಂದ 2019 ರವರೆಗಿನ ಏಳು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್‌, ಎನ್‌ಸಿಪಿ, ಟಿಎಂಸಿ ಮತ್ತು ಸಿಪಿಎಂ ಈ ನಾಲ್ಕು ರಾಷ್ಟ್ರೀಯ ಪಕ್ಷಗಳ ಒಟ್ಟು ದೇಣಿಗೆಗಿಂತ 7 ಪಟ್ಟು ಹೆಚ್ಚಿನ ದೇಣಿಗೆಯನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಎಡಿಆರ್‌ ತಿಳಿಸಿದೆ.

TIMESOFINDIA.COM 16 Oct 2020, 7:49 pm
ಹೊಸದಿಲ್ಲಿ: ರಾಜಕೀಯ ದೇಣಿಗೆ ಗಿಟ್ಟಿಸಿದ ಪಕ್ಷಗಳ ಪಟ್ಟಿಯಲ್ಲಿ ಆಡಳಿತಾರೂಢ ಬಿಜೆಪಿ ಮುಂಚೂಣಿ ಸ್ಥಾನದಲ್ಲಿದೆ. 2018-19ರ ಸಾಲಿನಲ್ಲಿ ಕಾರ್ಪೊರೇಟ್‌ ಸಂಸ್ಥೆಗಳಿಂದ ಬಿಜೆಪಿ ಖಜಾನೆಗೆ 698 ಕೋಟಿ ರೂ. ದೇಣಿಗೆ ಹರಿದು ಬಂದಿದೆ. ಇದೇ ಅವಧಿಯಲ್ಲಿ 122.5 ಕೋಟಿ ರೂ. ದೇಣಿಗೆ ಪಡೆದ ಕಾಂಗ್ರೆಸ್‌ ಎರಡನೇ ಸ್ಥಾನದಲ್ಲಿದೆ.
Vijaya Karnataka Web BJP flag


ಒಟ್ಟಾರೆ ಬಿಜೆಪಿ 742.15 ಕೋಟಿ ರೂ. ದೇಣಿಗೆ ಪಡೆದುಕೊಂಡಿದ್ದರೆ, ಕಾಂಗ್ರೆಸ್‌ 148.58, ತೃಣಮೂಲ ಕಾಂಗ್ರೆಸ್‌ 44.26, ಎನ್‌ಸಿಪಿ 12.05, ಸಿಪಿಐಎಂ 3.03 ಕೋಟಿ ರೂ. ದೇಣಿಗೆ ಸ್ವೀಕರಿಸಿವೆ.

ಈ ಕುರಿತು ಎಡಿಆರ್‌ ಸಂಸ್ಥೆ, ಪಕ್ಷವಾರು ದೇಣಿಗೆ ಸಂಗ್ರಹದ ವಿವರ ಒಳಗೊಂಡ ವಾರ್ಷಿಕ ವರದಿ ಬಿಡುಗಡೆ ಮಾಡಿದೆ. ಟಾಟಾ ಸಮೂಹ ಬೆಂಬಲಿತ ಪ್ರೊಗ್ರೆಸಿವ್‌ ಎಲೆಕ್ಟೋರಲ್‌ ಟ್ರಸ್ಟ್‌ 2018-19ರ ಸಾಲಿನಲ್ಲಿ ರಾಜಕೀಯ ಪಕ್ಷಗಳಿಗೆ 455.15 ಕೋಟಿ ರೂ. ದೇಣಿಗೆ ನೀಡಿದ್ದು, ಅತಿ ಹೆಚ್ಚು ದೇಣಿಗೆ ನೀಡಿದ ಸಂಸ್ಥೆ ಎನಿಸಿದೆ. ಪ್ರುಡೆಂಟ್‌ ಎಲೆಕ್ಟೋರಲ್‌ ಟ್ರಸ್ಟ್‌ ಎರಡನೇ ಅತೀ ಹೆಚ್ಚಿನ 102.25 ಕೋಟಿ ರೂ. ದೇಣಿಗೆ ನೀಡಿದ್ದರೆ, ಎಬಿ ಜನರಲ್‌ ಎಲೆಕ್ಟೋರಲ್‌ ಟ್ರಸ್ಟ್‌ 30 ಕೋಟಿ ರೂ. ದೇಣಿಗೆಯೊಂದಿಗೆ ಮೂರನೇ ಸ್ಥಾನದಲ್ಲಿದೆ.

ಕಮ್ಯೂನಿಸ್ಟ್‌ ಪಕ್ಷಗಳಿಗೆ ಡಿಎಂಕೆ ದೇಣಿಗೆ, ರಾಜಕೀಯ ಪಕ್ಷಗಳ ಅಫಿಡವಿಟ್‌ನಲ್ಲಿ ಸ್ವಾರಸ್ಯಕರ ಸಂಗತಿ
"2012 ರಿಂದ 2019ರವರೆಗಿನ ಅವಧಿಯಲ್ಲಿ ಕಾರ್ಪೊರೇಟ್‌ ಕಂಪನಿಗಳ ದೇಣಿಗೆ ಪ್ರಮಾಣ ಭಾರಿ ಹೆಚ್ಚಳಗೊಂಡಿದೆ. ಈ ಅವಧಿಯಲ್ಲಿ ಶೇ.131ರಷ್ಟು ದೇಣಿಗೆ ಪ್ರಮಾಣ ಹೆಚ್ಚಿದೆ," ಎಂದು ಎಡಿಆರ್‌ ವರದಿ ತಿಳಿಸಿದೆ.

ಬಿಜೆಪಿಗೆ ಬಂಪರ್‌ ದೇಣಿಗೆ

2012-13 ರಿಂದ 2019 ರವರೆಗಿನ ಏಳು ವರ್ಷಗಳ ಅವಧಿಯಲ್ಲಿ ಬಿಜೆಪಿ ದೇಣಿಗೆ ಶೇ.82ರಷ್ಟು ಹೆಚ್ಚಾಗಿದೆ. ಕಾಂಗ್ರೆಸ್‌, ಎನ್‌ಸಿಪಿ, ಎಐಟಿಸಿ ಮತ್ತು ಸಿಪಿಎಂ ಈ ನಾಲ್ಕು ರಾಷ್ಟ್ರೀಯ ಪಕ್ಷಗಳ ಒಟ್ಟು ದೇಣಿಗೆಗಿಂತ ಏಳು ಪಟ್ಟು ಹೆಚ್ಚಿನ ದೇಣಿಗೆಯನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಎಡಿಆರ್‌ ತಿಳಿಸಿದೆ.

ಬಿಜೆಪಿ ಈ ಅವಧಿಯಲ್ಲಿ 2,319.19 ಕೋಟಿ ರೂ. ದೇಣಿಗೆ ಪಡೆದುಕೊಂಡಿದ್ದರೆ ಕಾಂಗ್ರೆಸ್‌ 376.02 ಕೋಟಿ ರೂ., ಎನ್‌ಸಿಪಿ 69.81, ತೃಣಮೂಲ ಕಾಂಗ್ರೆಸ್‌ 45.02, ಸಿಪಿಎಂ 7.50 ಕೋಟಿ ರೂ. ದೇಣಿಗೆ ಸ್ವೀಕರಿಸಿವೆ. ಇದರಲ್ಲಿ ತೃಣಮೂಲ ಕಾಂಗ್ರೆಸ್ ಮಾತ್ರ‌ 2016ರ ನಂತರ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದುಕೊಂಡಿತ್ತು.

ರಾಜಕೀಯ ಪಕ್ಷಗಳಿಗೆ 2,000 ರೂ.ಗಳಿಗಿಂತ ಹೆಚ್ಚು ನಗದು ದೇಣಿಗೆ ನೀಡಬೇಡಿ: ಐಟಿ ಇಲಾಖೆ ಸೂಚನೆ
ವಿವರ ಸಲ್ಲಿಕೆ ಕಡ್ಡಾಯ20,000 ರೂ.ಗಿಂತ ಹೆಚ್ಚಿನ ಹಣವನ್ನು ದೇಣಿಗೆ ನೀಡಿದ ಸಂಸ್ಥೆಗಳ ವಿವರಗಳನ್ನು ಪ್ರತಿವರ್ಷ (ಏಪ್ರಿಲ್‌ 1ರಿಂದ ಮಾರ್ಚ್‌ 31ರ ಒಳಗೆ) ಚುನಾವಣಾ ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯ. ದೇಣಿಗೆದಾತ ಕಂಪನಿ ಅಥವಾ ವ್ಯಕ್ತಿಯ ಹೆಸರು, ವಿಳಾಸ, ಪ್ಯಾನ್‌, ಪಾವತಿ ವಿಧಾನ ಮತ್ತು ಕೊಡುಗೆಯ ಮೊತ್ತವನ್ನು ಪಕ್ಷಗಳು ಸಲ್ಲಿಸಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ