ಆ್ಯಪ್ನಗರ

ಬಿಜೆಪಿ ಅಬ್ಬರದ ಪ್ರಚಾರ, ನಿತೀಶ್‌ಗೆ ಧಿಕ್ಕಾರದ ಸ್ವಾಗತ: ರಂಗೇರಿದ ಬಿಹಾರ ಚುನಾವಣೆ ಅಖಾಡ!

ಬಿಹಾರದ ಚುನಾವಣಾ ಅಖಾಡ ರಂಗೇರಿದೆ. ಮತದಾರರನ್ನು ಸೆಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಕಸರತ್ತು ಆರಂಭಿಸಿದ್ದು, ಎನ್‌ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟಗಳು ತಮ್ಮ ತಮ್ಮ ಪ್ರಚಾರವನ್ನು ತೀವ್ರಗೊಳಿಸಿವೆ. ಇಂದು(ಅ.21) ನಡೆದ ಪ್ರಚಾರ ಅಬ್ಬರದ ಸಂಫೂರ್ಣ ಮಾಹಿತಿ ಇಲ್ಲಿದೆ.

Vijaya Karnataka Web 21 Oct 2020, 8:07 pm
ಬಿಹಾರದ ಚುನಾವಣಾ ಅಖಾಡ ರಂಗೇರಿದೆ. ಮತದಾರರನ್ನು ಸೆಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಕಸರತ್ತು ಆರಂಭಿಸಿದ್ದು, ಎನ್‌ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟಗಳು ತಮ್ಮ ತಮ್ಮ ಪ್ರಚಾರವನ್ನು ತೀವ್ರಗೊಳಿಸಿವೆ. ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಇತರ ರಾಜಕೀಯ ಪಕ್ಷಗಳಿಗಿಂತ ಮುಂದಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ಪ್ರಮುಖರು ಈಗಾಗಲೇ ಬಿಹಾರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಜೆಡಿಯು ಕೂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಪ್ರಚಾರವನ್ನು ತೀವ್ರಗೊಳಿಸಿದ್ದು, ಮಹಾಘಟಬಂಧನ್ ಮೈತ್ರಿಕೂಟ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ನೆಚ್ಚಿಕೊಂಡು ಕುಳಿತಿದೆ. ಬಿಹಾರ ಚುನಾವಣಾ ಅಖಾಡಕ್ಕೆ ಇದುವರೆಗೂ ರಾಹುಲ್ ಗಾಂಧಿ ರಂಗಪ್ರವೇಶವಾಗಿಲ್ಲ. ಇದೆಲ್ಲದರ ನಡುವೆ ರಾಜ್ಯಮಟ್ಟದಲ್ಲಿ ಎನ್‌ಡಿಎದಿಂದ ಬೇರ್ಪಟ್ಟು, ನಿತೀಶ್ ಕುಮಾರ್ ಅವರನ್ನು ಸೋಲಿಸುವ ಉದ್ದೇಶದೊಂದಿಗೆ ಸ್ವತಂತ್ರವಾಗಿ ಸ್ಪರ್ಧಿಸಿರುವ ಎಲ್‌ಜೆಪಿಯ ಚಿರಾಗ್ ಪಾಸ್ವಾನ್, ಸದ್ದಿಲ್ಲದೇ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಅದರಂತೆ ಇಂದು(ಅ.21) ನಡೆದ ಪ್ರಚಾರ ಅಬ್ಬರವನ್ನು ಗಮನಿಸುವುದಾದರೆ....
Vijaya Karnataka Web political parties boost election campaign in bihar ahead of assembly election
ಬಿಜೆಪಿ ಅಬ್ಬರದ ಪ್ರಚಾರ, ನಿತೀಶ್‌ಗೆ ಧಿಕ್ಕಾರದ ಸ್ವಾಗತ: ರಂಗೇರಿದ ಬಿಹಾರ ಚುನಾವಣೆ ಅಖಾಡ!


ಬಿಹಾರದಲ್ಲಿ ಯೋಗಿ ಆದಿತ್ಯನಾಥ್ ಕಮಾಲ್!

ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರಣಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಇಲ್ಲಿನ ಪಾಲಿಗಂಜ್‌ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಪಾಕಿಸ್ತಾನ ಪರ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರಂತ ನಾಯಕರಿಂದ ಬಿಹಾರದ ಕಲ್ಯಾಣ ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಪಾಕ್ ಜಪ ಮಾಡುತ್ತಿರುವ ರಾಹುಲ್, ಒವೈಸಿ ಅವರಿಂದ ಬಿಹಾರದ ಕಲ್ಯಾಣ ಸಾಧ್ಯವೇ?: ಯೋಗಿ ಕಿಡಿ!

ರಾಹುಲ್ ಗಾಂಧಿ ಹಾಗು ಅಸಾದುದ್ದೀನ್ ಒವೈಸಿ ಪಾಕ್ ಜಪ ಮಾಡುತ್ತಿದ್ದಾರೆ. ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹವರ ಕೈಗೆ ಅಧಿಕಾರ ಸಿಕ್ಕರೆ ರಾಜ್ಯದ ಗತಿ ಏನಾಗಲಿದೆ ಎಂಬುದನ್ನು ಊಹಿಸಿ ಎಂದು ಯೋಗಿ ಆದಿತ್ಯನಾಥ್ ಮತದಾರರಲ್ಲಿ ಮನವಿ ಮಾಡಿದರು.

ಮೋದಿ-ನಿತೀಶ್ ಜೋಡಿಯನ್ನು ಸಚಿನ್-ಸೆಹ್ವಾಗ್‌ಗೆ ಹೋಲಿಸಿದ ರಾಜನಾಥ್!

ಬಿಹಾರ ವಿಧಾನಸಭಾ ಚುನಾವಣೆಯ ರಣಕಣ ರಂಗೇರಿದ್ದು, ರಾಜಕೀಯ ನಾಯಕರ ಹೇಳಿಕೆಗಳು ಭಾರೀ ಸುದ್ದಿಯಾಗುತ್ತಿವೆ. ಹೌದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಬಿಹಾರ ರಾಜಕೀಯದಲ್ಲಿ ಬಿಜೆಪಿ - ಜೆಡಿಯು ಮೈತ್ರಿಯನ್ನು ಕ್ರಿಕೆಟ್‌ನಲ್ಲಿ ಸಚಿನ್‌ - ಸೆಹ್ವಾಗ್‌ ಆರಂಭಿಕ ಜೋಡಿಗೆ ಹೋಲಿಕೆ ಮಾಡಿದ್ದಾರೆ.

ಬಿಹಾರದ ಬಿಜೆಪಿ-ಜೆಡಿಯು ಮೈತ್ರಿ ಸಚಿನ್‌-ಸೆಹ್ವಾಗ್‌ರಂತೆ ಸೂಪರ್‌ಹಿಟ್‌: ರಾಜನಾಥ್‌ ಸಿಂಗ್‌

ಬುಧವಾರ ಭೋಜ್‌ಪುರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ರಾಜನಾಥ್‌ ಸಿಂಗ್‌, ಬಿಹಾರ ರಾಜಕೀಯದಲ್ಲಿ ಬಿಜೆಪಿ ಮತ್ತು ಜೆಡಿಯು ಜೋಡಿಯನ್ನು ತಿರಸ್ಕರಿಸಬೇಡಿ. ಇದು ಕ್ರಿಕೆಟ್‌ನ ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್‌ ಅವರ ಆರಂಭಿಕ ಜೋಡಿಯಂತೆ. ನಿತೀಶ್‌ ಕುಮಾರ್ ಮತ್ತು ಸುಶೀಲ್ ಮೋದಿ ಮೇಲೆ ಭ್ರಷ್ಟಾಚಾರದ ಆರೋಪ ಇದುವರೆಗೂ ಬಂದಿಲ್ಲ ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್‌ಗೆ ಧಿಕ್ಕಾರದ ಸ್ವಾಗತ!

ಇನ್ನು ಚುನಾವಣಾ ಪ್ರಚಾರದಲ್ಲಿ ನಿರತವಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಧಿಕ್ಕಾರದ ಸ್ವಾಗತ ನೀಡಿರುವುದು ಗಮನ ಸೆಳೆದಿದೆ. ಇಲ್ಲಿನ ಪಾರ್ಸಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆ ವೇಳೆ ಕೆಲವರು ನಿತೀಶ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಚಿರಾಗ್‌‌ಗೆ ತೇಜಸ್ವಿ ಯಾದವ್‌ ಬೆಂಬಲ, ನಿತೀಶ್‌ ಕುಮಾರ್‌ ಚಿಂತೆ ಹೆಚ್ಚಿಸಿದ ಯುವ ನಾಯಕರ ನಡೆ

ಜೆಡಿಯು ಅಭ್ಯರ್ಥಿ ಚಂದ್ರಿಕಾ ರಾಯ್ ಪರ ಪ್ರಚಾರ ನಡೆಸಲು ಬಂದಿದ್ದ ನಿತೀಶ್ ಕುಮಾರ್, ಏಕಾಏಕಿ ನಡೆದ ಪ್ರತಿಭಟನೆಯಿಂದ ಕೆಲಕ್ಷಣ ಗೊಂದಲಕ್ಕೀಡಾದರು. ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಿತೀಶ್, ಹೀಗೆ ಕಾರಣವಿಲ್ಲದೇ ಪ್ರತಿಭಟನೆ ನಡೆಸುವುದರಿಂದ ಅಭ್ಯರ್ಥಿಯ ಕುರಿತು ನಕಾರಾತ್ಮಕ ಸಂದೇಶ ರವಾನಿಸದಂತಾಗುತ್ತದೆ. ದಯವಿಟ್ಟು ಪ್ರತಿಭಟನೆ ಹಿಂಪಡೆಯಿರಿ ಎಂದು ನಿತೀಶ್ ಮನವಿ ಮಾಡಿದರು.

ನಿತೀಶ್ ಮತ್ತೆ ಅಧಿಕಾರಕ್ಕೆ ಬರುವುದು ಬಿಹಾರದ ಪಾಲಿಗೆ ದುರಂತ ಎಂದ ಚಿರಾಗ್!

ಮತ್ತೊಂದೆಡೆ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತಮ್ಮ ವಾಗ್ದಾಅಳಿಯನ್ನು ತೀವ್ರಗೊಳಿಸಿರುವ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್, ನಿತೀಶ್ ಕುಮಾರ್ ಮತ್ತೆ ಅಧಿಕಾರಕ್ಕೆ ಬಂದರೆ ಬಿಹಾರದ ಪಾಲಿಗೆ ದೊಡ್ಡ ದುರಂತವಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ.

ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಚಿರಾಗ್ ಪಾಸ್ವಾನ್, ಬಿಹಾರದ ಹಿತದೃಷ್ಟಿಯಿಂದ ನಿತೀಶ್ ಮತ್ತೆ ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತುಕೊಳ್ಳದಿರುವುದೇ ಒಳಿತು ಎಂದು ಹೇಳಿದರು.

ರಾಮ್ ವಿಲಾಸ್ ಪಾಸ್ವಾನ್ ಶ್ರಾದ್ಧ ಕಾರ್ಯಕ್ರಮದಲ್ಲಿ ಚಿರಾಗ್ ಭೇಟಿ ಮಾಡಿದ ನಿತೀಶ್ ಕುಮಾರ್!

ಬಿಹಾರಕ್ಕೆ ಯುವ ನಾಯಕತ್ವದ ಅವಶ್ಯಕತೆಯಿದ್ದು, ಈ ನಾಯಕತ್ವವನ್ನು ಒದಗಿಸಲು ಎಲ್‌ಜೆಪಿ ಸಿದ್ಧವಾಗಿದೆ ಎಂದು ಚಿರಾಗ್ ನುಡಿದರು.

ಒಟ್ಟಿನಲ್ಲಿ ಬಿಹಾರ ವಿಧಾನಸಭೆ ಚುನಾವಣಾ ಅಖಾಡ ರಂಗೇರಿದ್ದು, ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರ ಮತದಾರರನ್ನು ಸೆಳೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ