ಆ್ಯಪ್ನಗರ

72 ದಿನಗಳ ಬಳಿಕ ಕಾಶ್ಮೀರದಲ್ಲಿ ಮತ್ತೆ ರಿಂಗಣಿಸಿತು ಮೊಬೈಲ್

ಸುಮಾರು ಎರಡು ತಿಂಗಳ ನಿರ್ಬಂಧದ ಬಳಿಕ ಜಮ್ಮು-ಕಾಶ್ಮೀರದಲ್ಲಿಸೋಮವಾರದಿಂದ ಪೋಸ್ಟ್‌ ಪೇಯ್ಡ್‌ ಮೊಬೈಲ್‌ ಸೇವೆ ಪುನಾರಂಭ­ವಾಗಿದೆ.

Vijaya Karnataka 15 Oct 2019, 6:23 am
ಶ್ರೀನಗರ: ಬರೋಬ್ಬರಿ 72 ದಿನಗಳ ಬಳಿಕ ಕಾಶ್ಮೀರ ಕಣಿವೆಯಲ್ಲಿಪೋಸ್ಟ್‌ ಪೇಯ್ಡ್‌ ಮೊಬೈಲ್‌ ಸಂಪರ್ಕ ಸೇವೆಗಳು ಪುನರಾರಂಭ­ಗೊಂಡಿದ್ದು, ಈ ಮೂಲಕ ಮೊಬೈಲ್‌ ಸಂಪರ್ಕವೇ ಇಲ್ಲದೇ ಪರಿತಪಿಸುತ್ತಿದ್ದ ಸ್ಥಳೀಯ ಜನತೆಗೆ ನಿರಾಳತೆ ದೊರೆತಿದೆ.
Vijaya Karnataka Web mobile


ವದಂತಿಗಳಿಗೆ ಹಾಗೂ ಅಹಿತಕರ ಘಟನೆಗಳಿಗೆ ದಾರಿಮಾಡಿಕೊಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿಕೇಂದ್ರ ಸರಕಾರ 370ನೇ ವಿಧಿ ರದ್ದತಿ ವೇಳೆ ಆಗಸ್ಟ್‌ 5ರಿಂದ ಕಣಿವೆಯಲ್ಲಿಮೊಬೈಲ್‌ ಸಂಪರ್ಕ ಸೇವೆ ಸ್ಥಗಿತಗೊಳಿಸಿತ್ತು. ಇದರಿಂದ ಸ್ಥಳೀಯರಿಗೆ ತಮ್ಮ ಬಂಧು-ಬಳಗವನ್ನು ಸಂಪರ್ಕಿಸುವುದು ಕಷ್ಟವಾಗಿತ್ತು. ಕಣಿವೆಯಲ್ಲಿಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿಸುಧಾರಿಸಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 11.45ರಿಂದ ಪೋಸ್ಟ್‌ ಪೇಯ್ಡ್‌ ಮೊಬೈಲ್‌ ಸಂಪರ್ಕ ಸೇವೆ ಪುನರಾರಂಭಿಸುವಂತೆ ಸರಕಾರ ಸೂಚಿಸಿದ ಬಳಿಕ ಬಿಎಸ್‌ಎನ್‌ಎಲ್‌ ಸೇರಿ ಹಲವು ಮೊಬೈಲ್‌ ಸೇವಾ ಕಂಪನಿಗಳು ಸೇವೆ ಪುನರಾರಂಭಿಸಿವೆ.

ಸೋಮವಾರದಿಂದ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಮೊಬೈಲ್‌ ರಿಂಗಣ

ಹಬ್ಬದ ವಾತಾವರಣ: ಪೋಸ್ಟ್‌ಪೇಯ್ಡ್‌ ಗ್ರಾಹ­ಕರಿಗಷ್ಟೇ ಸೇವೆ ಮರು ಆರಂಭದ ಲಾಭ ದೊರೆ­ತಿದೆ. ಇದು ವಾಯ್‌್ಸ ಕಾಲ್‌ ಹಾಗೂ ಎಸ್‌ಎಂಎಸ್‌ ಸೇವೆಗಷ್ಟೇ ಸೀಮಿತವಾಗಿದೆ. ಸುಮಾರು 40 ಲಕ್ಷ ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ಅನುಕೂಲವಾಗಿದೆ. ಆದರೆ 25 ಲಕ್ಷ ಪ್ರಿಪೇಯ್ಡ್‌ ಗ್ರಾಹಕರಿಗೆ ಇನ್ನೂ ಮೊಬೈಲ್‌ನಲ್ಲಿಮಾತನಾ­ಡುವ ಭಾಗ್ಯ ದೊರೆತಿಲ್ಲ. ಪರಿಸ್ಥಿತಿ ನೋಡಿಕೊಂಡು ಆಗಸ್ಟ್‌ 17ರಂದೇ ಹಲವು ಕಡೆ ಭಾಗಶಃ ಸ್ಥಿರ ದೂರವಾಣಿ ಸಂಪರ್ಕ ಪುನರಾ­ರಂಭಿಸಲಾಗಿತ್ತು. ಸೆಪ್ಟೆಂಬರ್‌ 4ರಂದು ಸುಮಾರು 50 ಸಾವಿರ ಸ್ಥಿರ ದೂರವಾಣಿಗಳ ಸಂಪರ್ಕ ಜಾಲ ಕಾರ್ಯಾರಂಭ ಮಾಡಿತ್ತು. ಈಗ ಮೊಬೈಲ್‌ ಪ್ರೀಪೇಯ್ಡ್‌ ಸೇವೆ ಆರಂಭ­ವಾಗಿರುವುದರಿಂದ ಜಮ್ಮು- ಕಾಶ್ಮೀರ­ದಲ್ಲಿ ಸೋಮವಾರ ಹಬ್ಬದ ವಾತಾವರಣ ಕಂಡುಬಂದಿತು. ''ಮೊಬೈಲ್‌ ಪೋಸ್ಟ್‌ ಪೇಯ್ಡ್‌ ಸೇವೆಯೂ ಪುನರಾರಂಭಗೊಂಡಿದ್ದು ನಮಗೆ ಅತೀವ ಸಂತೋಷವಾಗಿದೆ. ಇದೊಂದು ಈದ್‌ ಹಬ್ಬ­ದಂತೆ ಗೋಚರಿಸುತ್ತಿದ್ದು, ಬಂದು ಬಳಗದವರಿಗೆ ಕರೆ ಮಾಡಿ ಈದ್‌ ಮುಬಾರಕ್‌ ಹೇಳಿಕೊಂಡಿ­ದ್ದೇವೆ,'' ಎಂದು ಶ್ರೀನಗರದ ಬಷರತ್‌ ಅಹ್ಮದ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರವಾಸಿಗರಿಗೆ ಅನುಕೂಲ: ಕ್ರಮೇಣ ಸ್ಥಳೀಯ ರಾಜಕೀಯ ಮುಖಂಡರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಲಾಗಿದೆ. ಪ್ರವಾಸಿಗರಿಗೆ ವಿಧಿಸಲಾಗಿದ್ದ ನಿರ್ಬಂಧವನ್ನೂ ಕಳೆದ ಗುರುವಾರ ಸಡಿಲಿಸಲಾಗಿದೆ. ಸ್ಥಿರ ದೂರವಾಣಿಗಳ ಜತೆಗೆ ಈ ಪೋಸ್ಟ್‌ಪೇಯ್ಡ್‌ ಮೊಬೈಲ್‌ ಸೇವೆಯೂ ಆರಂಭ­ಗೊಂಡಿದೆ. ಇವೆಲ್ಲವೂ ಈ ಬಾರಿಯ ಚಳಿಗಾಲದ ಋುತುವಿನಲ್ಲಿಪ್ರವಾಸಿಗರ ಭೇಟಿ ಸಂಖ್ಯೆ ಹೆಚ್ಚಿಸಲು ಅನುವಾಗಲಿದೆ.

ಭದ್ರತಾ ಪಡೆಗಳ ನಿಗಾ: ಸ್ಥಿರ ದೂರವಾಣಿ/ಮೊಬೈಲ್‌ ಸಂಪರ್ಕ ಸೇವೆ ಬಹುತೇಕ ಪುನರಾ­ರಂಭಗೊಂಡ ಹಿನ್ನೆಲೆಯಲ್ಲಿಉಗ್ರರು ತಮ್ಮ ದುಷ್ಕೃತ್ಯಗಳಿಗೆ ಈ ಸಡಿಲಿಕೆಯನ್ನು ಬಳಸಿಕೊ­ಳ್ಳುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ

ಭದ್ರತಾ ಪಡೆಗಳು ಹೆಚ್ಚಿನ ನಿಗಾ ವಹಿಸಿವೆ. ಸೂಕ್ಷ್ಮ ಪ್ರದೇಶಗಳಲ್ಲಿಕಠಿಣ ತಪಾಸಣಾ ಕ್ರಮಗಳು ಮುಂದುವರಿದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ