*ಗುರುವಿನ ದರ್ಶನ ಪಡೆಯಲು ಮೋದಿ ಗುಜರಾತ್ಗೆ
ಅಹಮದಾಬಾದ್: ಶನಿವಾರ ನಿಧನರಾದ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸಂಸ್ಥಾನ(ಬಾಫ್ಸ್)ದ ಅಧ್ಯಕ್ಷ ಹಾಗೂ ಆಧ್ಯಾತ್ಮಿಕ ಗುರು ಪ್ರಮುಖ್ ಸ್ವಾಮಿ ಅವರಿಗೆ ಅಂತಿಮ ನಮನ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗುಜರಾತ್ಗೆ ಭೇಟಿ ನೀಡಲಿದ್ದಾರೆ.
95 ವರ್ಷದ ಸ್ವಾಮೀಜಿ ಶನಿವಾರ ಸರಂಗಪುರದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಪ್ರಮುಖ ಸ್ವಾಮಿ ಮೋದಿ ಅವರ ಬಹುಕಾಲದ ಗುರು. ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ, ಅಂತಿಮ ನಮನ ಸಲ್ಲಿಸಲು ಸರಂಗಪುರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಸಿಎಂ ನಮನ: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ಜತೆಗೂಡಿ ಭಾನುವಾರ ಸರಂಗಪುರಕ್ಕೆ ಭೇಟಿ ನೀಡಿ, ನಮನ ಸಲ್ಲಿಸಿದರು. ಸ್ವಾಮೀಜಿ ನಿಧನಕ್ಕೆ ಸಂತಾಪ ಸೂಚಿಸಿರುವ ಮೋದಿ ಶನಿವಾರವೇ ಟ್ವೀಟ್ ಮಾಡಿದ್ದರು. ಸ್ವಾಮೀಜಿ ಆಶೀರ್ವಾದ ಪಡೆಯುತ್ತಿರುವ ಫೋಟೊವನ್ನು ಅವರು ಅಪ್ಲೋಡ್ ಮಾಡಿದ್ದರು.
ರಾಷ್ಟ್ರಪತಿ ಸಂತಾಪ: ಪ್ರಮುಖ್ ಸ್ವಾಮೀಜಿ ನಿಧನಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂತಾಪ ಸೂಚಿಸಿದ್ದಾರೆ. ಸ್ವಾಮೀಜಿ ಅಧ್ಯಾತ್ಮಿಕ ಮೌಲ್ಯಗಳ ಹೋರಾಟಗಾರರಾಗಿದ್ದರು ಎಂದು ಬಣ್ಣಿಸಿದ ಪ್ರಣಬ್ ಮುಖರ್ಜಿ, ಸ್ವಾಮೀಜಿ ಮನಸ್ಸು ಯಾವಾಗಲೂ ಮಾನವೀಯತೆ, ಮಾನವರ ಕಲ್ಯಾಣಕ್ಕೆ ತುಡಿಯುತ್ತಿತ್ತು ಎಂದು ಹೇಳಿದ್ದಾರೆ. ಸ್ವಾಮೀಜಿ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದಾರೆ.
ಕೇಜ್ರಿವಾಲ್ ಭೇಟಿ: ಸ್ವಾಮೀಜಿ ನಿಧನದ ಹಿನ್ನೆಲೆಯಲ್ಲಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸ್ವಾಮಿ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ಎಎಪಿ ಪಕ್ಷದ ಮೂಲಗಳು ಹೇಳಿವೆ.
ಅಂತಿಮ ದರ್ಶನಕ್ಕೆ ಅವಕಾಶ: ಆ. 17ರವರೆಗೆ ಸ್ವಾಮಿ ನಾರಾಯಣ ದೇವಸ್ಥಾನದಲ್ಲಿ ಸ್ವಾಮೀಜಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇಶದಾದ್ಯಂತ ಅಪಾರ ಭಕ್ತ ಸಮೂಹ ಹೊಂದಿರುವ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕಾಗಿ ಸಾವಿರಾರು ಜನ ಬರುವ ಹಿನ್ನೆಲೆಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ.
ಯಾರಿವರು ಪ್ರಮುಖ್ ಸ್ವಾಮೀಜಿ?
ಪ್ರಮುಖ್ ಸ್ವಾಮಿ ಮಹಾರಾಜ್ ಮೂಲ ಹೆಸರು ಶಾಂತಿಲಾಲ್ ಪಟೇಲ್. 1921 ಡಿ. 7 ಗುಜರಾತ್ನ ಚಾನ್ಸದ್ ಗ್ರಾಮದಲ್ಲಿ ಜನನ. ಮೋತಿಬಾಯ್ ಮತ್ತು ದಿವಾಲಿಬೇನ್ ಇವರ ಪಾಲಕರು. ಶಾಸ್ತ್ರಿ ನಾರಾಯಣಸ್ವರೂಪ ದಾಸ್ ಎಂಬ ಹೆಸರಲ್ಲಿ 1940 ರಲ್ಲಿ ಬಾಫ್ಸ್ನ ಸಂಸ್ಥಾಪಕ ಗುರು ಶಾಸ್ತ್ರೀಜಿ ಮಹಾರಾಜರಿಂದ ದೀಕ್ಷೆ ಪಡೆದರು. ಮುಂದೆ ಯೋಗಿಜಿ ಮಹಾರಾಜರು ಪ್ರಮುಖ್ ಸ್ವಾಮಿ ಮಹಾರಾಜ್ ಎಂದು ಘೋಷಿಸಿದರು. 1971ರಲ್ಲಿ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸಂಸ್ಥಾನ(ಬಾಫ್ಸ್) ಆಧ್ಯಾತ್ಮಿಕ ಗುರುವಾಗಿ ಅಧಿಕಾರಕ್ಕೆ ಬಂದರು.
ಬಾಫ್ಸ್ ಅಧ್ಯಕ್ಷರಾದ ಬಳಿಕ ಪ್ರಮುಖ್ ಸ್ವಾಮೀಜಿ ಗುಜರಾತ್, ಭಾರತ ಹಾಗೂ ವಿದೇಶಗಳಲ್ಲಿ ಮಂದಿರಗಳ ಅಭಿವೃದ್ಧಿಗೆ ಶ್ರಮಿಸಿದರು. 1,100ಕ್ಕೂ ಹೆಚ್ಚು ಹಿಂದೂ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಗಾಂಧಿನಗರ ಮತ್ತು ಹೊಸದಿಲ್ಲಿಯಲ್ಲಿ ನಿರ್ಮಾಣ ಮಾಡಲಾದ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯಗಳು ಪ್ರಮುಖವಾಗಿವೆ.