ಆ್ಯಪ್ನಗರ

ಉಗ್ರ ಪೋಷಕ ಪಾಕ್‌ ಮಣಿಸಲು ಭಾರತ ಹೊಸ ತಂತ್ರ: ಪ್ರಬಲ ಪುರಾವೆ ಸಂಗ್ರಹಿಸಲು ಉಗ್ರ ನಿಗ್ರಹ ದಳಗಳಿಗೆ ಸೂಚನೆ

ಒಂದು ದೇಶವೇ ಉಗ್ರರ ಪರವಾಗಿ ನಿಂತರೆ ನಿಜಕ್ಕೂ ಅದೊಂದು ದೊಡ್ಡ ಸವಾಲೇ ಸರಿ. ಏಷ್ಯಾ ಉಪಖಂಡದ ಮಟ್ಟಿಗೆ ಹೇಳುವುದಾದರೆ ನಮಗೆ ಉಗ್ರ ಪೋಷಕ ಪಾಕಿಸ್ತಾನ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Vijaya Karnataka 15 Oct 2019, 8:45 am
ಹೊಸದಿಲ್ಲಿ: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದನ್ನು ಮುಂದುವರಿಸಿರುವ ಪಾಕಿಸ್ತಾನದ ವಿರುದ್ಧ ಪ್ರಬಲ ಸಾಕ್ಷ್ಯ ಸಂಗ್ರಹ, ವಾಸ್ತವಿಕ ಅಂಕಿ-ಅಂಶ ಆಧಾರಿತ ವರದಿ ಸಿದ್ಧಪಡಿಸುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಉಗ್ರ ನಿಗ್ರಹ ದಳಗಳಿಗೆ ಸೂಚನೆ ನೀಡಿದ್ದಾರೆ.
Vijaya Karnataka Web Ajit Dhoval


ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವ ಕುರಿತು ಪ್ಯಾರಿಸ್‌ನಲ್ಲಿನಡೆಯುತ್ತಿರುವ ಹಣಕಾಸು ಕ್ರಿಯಾ ಸಮಿತಿ (ಎಫ್‌ಎಟಿಎಫ್‌) ಸಭೆ ನಡೆಸುತ್ತಿರುವ ಹೊತ್ತಿನಲ್ಲಿಯೇ ದೋವಲ್‌ ಅವರು ಈ ನಿರ್ದೇಶನ ನೀಡಿದ್ದಾರೆ. ಉಗ್ರ ನಿಗ್ರಹ ಕುರಿತ ಎರಡು ದಿನಗಳ ಸಮಾವೇಶದಲ್ಲಿ ಪಾಲ್ಗೊಂಡ ದೋವಲ್‌ ಅವರು, ಭಯೋತ್ಪಾದನೆಗೆ ಹಾಗೂ ಉಗ್ರ ಕೃತ್ಯಗಳಿಗೆ ಹಣಕಾಸಿನ ನೆರವು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬಲ ಪುರಾವೆಗಳನ್ನು ಸಂಗ್ರಹಿಸಬೇಕು. ಆ ಪುರಾವೆಗಳು ಹಾಗೂ ವಾಸ್ತವಿಕ ಅಂಕಿ-ಅಂಶಗಳ ಮೂಲಕ ಸಿದ್ಧಪಡಿಸಲಾಗುವ ವರದಿಯನ್ನು ಮುಂದಿಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಲು ಭಾರತಕ್ಕೆ ಸುಲಭವಾಗಲಿದೆ ಎಂದರು.

ಉಗ್ರನಿಗ್ರಹಕ್ಕೆ ನೆರವಾಗಲು ಪಾಕ್‌ಗೆ ಸೇನೆ ಕಳುಹಿಸಲು ರೆಡಿ!: ಇಮ್ರಾನ್‌ಗೆ ರಾಜನಾಥ್‌ ಸಿಂಗ್‌ ಟಾಂಗ್

ಬುದ್ಧಿ ಕಲಿಯದ ಪಾಕ್‌: ''ಒಂದು ದೇಶವೇ ಉಗ್ರರ ಪರವಾಗಿ ನಿಂತರೆ ನಿಜಕ್ಕೂ ಅದೊಂದು ದೊಡ್ಡ ಸವಾಲೇ ಸರಿ. ಏಷ್ಯಾ ಉಪಖಂಡದ ಮಟ್ಟಿಗೆ ಹೇಳುವುದಾದರೆ ನಮಗೆ ಉಗ್ರ ಪೋಷಕ ಪಾಕಿಸ್ತಾನ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಷ್ಟೇ ಪೆಟ್ಟು ತಿಂದರೂ ಅದು ಬುದ್ಧಿ ಕಲಿಯುತ್ತಿಲ್ಲ. ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು ಎಂದರೆ ಅವರಿಗೆ ಶಸ್ತಾಸ್ತ್ರ ಸಿಗದಂತೆ, ಹಣದ ಹರಿವು ತಲುಪದಂತೆ ನೋಡಿಕೊಳ್ಳಬೇಕು,'' ಎಂದು ವಿಶ್ಲೇಷಿಸಿದರು. ಈಗಂತೂ ಆರ್ಥಿಕ ಹಾಗೂ ಅಪಾರ ಮಾನವ ಸಂಪನ್ಮೂಲ ಬೇಡುವ ಯುದ್ಧವನ್ನು ತಡೆದುಕೊಳ್ಳುವ ಯಾರಿಗೂ ಇಲ್ಲ. ಹೀಗಾಗಿಯೇ ಪಾಕಿಸ್ತಾನ ಭಯೋತ್ಪಾದನೆಯನ್ನು ಒಂದು ಅಸ್ತ್ರವಾಗಿ ಬಳಸುತ್ತಿದೆ ಎಂದು ಕಿಡಿಕಾರಿದರು.

ಭಯೋತ್ಪಾದನೆ ಪ್ರಕರಣಗಳ ತನಿಖೆಯಲ್ಲಿಎನ್‌ಐಎ ವೃತ್ತಿಪರತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಾಶ್ಮೀರದಲ್ಲಿನ ಟೆರರ್‌ ಫಂಡಿಂಗ್‌ ಕೇಸ್‌ಗಳು, ಫಲ್ಹಾ-ಇ-ಇನ್ಸಾನಿಯತ್‌ ಮತ್ತು ಖಲಿಸ್ತಾನ್‌ ಉಗ್ರರು ನಡೆಸಿದ ಕುಕೃತ್ಯಗಳ ಕುರಿತ ತನಿಖೆಯು ಪಾಕಿಸ್ತಾನದ ಕೈವಾಡವನ್ನು ತೋರಿಸಿಕೊಟ್ಟಿವೆ ಎಂದು ಹೇಳಿದರು. ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಉಗ್ರ ನಿಗ್ರಹ ದಳ (ಎಟಿಎಸ್‌) ಹಾಗೂ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಸಮಾವೇಶದಲ್ಲಿಭಾಗವಹಿಸಿದ್ದರೆ.

ಪ್ಯಾರಿಸ್‌ನಲ್ಲಿ ಪಾಕ್‌ ನಿಯೋಗ


ಪ್ಯಾರಿಸ್‌ ಮೂಲದ ಹಣಕಾಸು ಕ್ರಿಯಾ ಸಮಿತಿ (ಎಫ್‌ಎಟಿಎಫ್‌) ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಪಾಕಿಸ್ತಾನವನ್ನು ಬೂದು ಲಿಸ್ಟ್‌ಗೆ ಸೇರಿಸಿದೆ. ಈಗ ಅದನ್ನು ಕಪ್ಪುಪಟ್ಟಿಗೆ ಸೇರಿಸುವ ಕುರಿತು ಸಭೆ ನಡೆಸುತ್ತಿದೆ. ಅ.13ರಿಂದ 16ರವರೆ ಸಭೆ ನಡೆಯಲಿದೆ. ತನ್ನ ದೇಶ ಉಗ್ರ ನಿರ್ಮೂಲನೆ ವಿಚಾರವೂ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿಸಾಧಿಸಿರುವ ಪ್ರಗತಿ ವಿವರವನ್ನು ಸಭೆಯ ಗಮನಕ್ಕೆ ತರಲು ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಸಚಿವ ಹಮ್ಮದ್‌ ಅಜಾದ್‌ ನೇತೃತ್ವದ ನಿಯೋಗವು ಪ್ಯಾರಿಸ್‌ನಲ್ಲಿ ಬೀಡುಬಿಟ್ಟಿದೆ. ಬೂದು ಪಟ್ಟಿಯಲ್ಲೇ ಉಳಿದರೂ ಸರಿ, ಹೇಗಾದರೂ ಮಾಡಿ ಕಪ್ಪುಪಟ್ಟಿಗೆ ಸೇರ್ಪಡೆಯಾಗುವುದನ್ನು ತಡೆಯಬೇಕು ಎನ್ನುವುದು ಇಮ್ರಾನ್‌ ಖಾನ್‌ ಸರಕಾರದ ಹಠ. ಆದರೆ, ಪಾಕಿಸ್ತಾನ ಉಗ್ರ ನಿಗ್ರಹ ವಿಚಾರದಲ್ಲಿಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿವಿಫಲವಾಗಿದೆ ಎಂಬ ನಿಲುವಿಗೆ ಬಂದಿರುವ ಎಫ್‌ಎಟಿಎಫ್‌, ಈ ಸಲ ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವುದು ಖಚಿತ ಎನ್ನಲಾಗುತ್ತಿದೆ. ಕಪ್ಪುಪಟ್ಟಿಗೆ ಸೇರಿದರೆ ಪಾಕ್‌ಗೆ ಅಂತಾರಾಷ್ಟ್ರೀಯ ಹಣಕಾಸು ನೆರವಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ