ಆ್ಯಪ್ನಗರ

ಒಂದೇ ಕಲ್ಲಲ್ಲಿ ಹಲವು ಹಕ್ಕಿಗೆ ಬಿಜೆಪಿ ಗುರಿ, ಆರಿಫ್‌ ಮೊಹಮ್ಮದ್‌ ಖಾನ್‌ ಆಗ್ತಾರಾ ಮುಂದಿನ ರಾಷ್ಟ್ರಪತಿ?

ಕೇರಳ ರಾಜ್ಯಪಾಲರಾಗಿದ್ದುಕೊಂಡು ದೇಶದ ಪರವಾಗಿ, ಬಿಜೆಪಿಯ ನಿರ್ಧಾರಗಳ ಪರವಾಗಿ ಬ್ಯಾಟ್‌ ಬೀಸುತ್ತಾ ಬಂದಿರುವ ಆರಿಫ್‌ ಮೊಹಮ್ಮದ್‌ ಖಾನ್‌, ‘ಅರಬ್‌ ವರ್ಸಸ್‌ ಭಾರತ’ದ ಗದ್ದಲ ನಡೆಯುತ್ತಿರುವ ಹೊತ್ತಲ್ಲಿ ರಾಷ್ಟ್ರಪತಿಯಾದರೂ ಅಚ್ಚರಿಯಿಲ್ಲ!

Authored byಎನ್‌. ಸಚ್ಚಿದಾನಂದ | Agencies 10 Jun 2022, 12:39 pm
ಹೊಸದಿಲ್ಲಿ: ಚುನಾವಣಾ ಆಯೋಗವು ರಾಷ್ಟ್ರಪತಿ ಚುನಾವಣೆಗೆ ಗುರುವಾರ ವೇಳಾಪಟ್ಟಿ ಪ್ರಕಟಿಸಿದ್ದು, ಜು.18ರಂದು ಚುನಾವಣೆ ನಡೆಯಲಿದೆ. ಹಾಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು 2ನೇ ಅವಧಿಗೆ ಬಿಜೆಪಿ ಮರು ಆಯ್ಕೆ ಮಾಡಲಿದೆಯಾ ಎಂಬುದು ಇನ್ನೂ ಖಚಿತಗೊಳ್ಳದ ಹಿನ್ನೆಲೆಯಲ್ಲಿ ಹೊಸ ಹೊಸ ಹೆಸರುಗಳು ರೇಸ್‌ನಲ್ಲಿ ಬಂದು ಸೇರುತ್ತಿವೆ.
Vijaya Karnataka Web Kerala Governor Arif Mohammed Khan
ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌


ಇದೀಗ ಕೇಳಿ ಬಂದಿರುವ ಹೊಸ ಹೆಸರೇ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರದ್ದು. ರಾಜ್ಯಪಾಲರಾಗಿದ್ದುಕೊಂಡು, ದೇಶದ ಪರವಾಗಿ, ಬಿಜೆಪಿಯ ನಿರ್ಧಾರಗಳ ಪರವಾಗಿ ಬ್ಯಾಟ್‌ ಬೀಸುತ್ತಾ ಬಂದಿರುವ ಖಾನ್‌, ‘ಅರಬ್‌ ವರ್ಸಸ್‌ ಭಾರತ’ದ ಗಲಾಟೆ ನಡೆಯುತ್ತಿರುವ ಹೊತ್ತಲ್ಲಿ ರಾಷ್ಟ್ರಪತಿಯಾದರೂ ಅಚ್ಚರಿಯಿಲ್ಲ ಎಂಬ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿ ಬರಲಾರಂಭಿಸಿವೆ.

ಹಲವು ಹೆಸರು, ಥರ ಥರ ಲೆಕ್ಕಾಚಾರ

ಈ ವರ್ಷದ ಆರಂಭದಲ್ಲಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 'ಮೌನ ಪ್ರಚಾರ'ವನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಬಿಜೆಪಿಯೊಂದಿಗೆ 'ಒಳ ಒಪ್ಪಂದ' ಮಾಡಿಕೊಂಡಿದ್ದು ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.

Presidential Election 2022: ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿ: ಜುಲೈ 18ಕ್ಕೆ ಮತದಾನ
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಮಾತುಗಳನ್ನು ಉಲ್ಲೇಖಿಸಿದ್ದರು. ಅತ್ಯುನ್ನತ ಹುದ್ದೆಯಲ್ಲಿ ತಮಗೆ ಆಸಕ್ತಿ ಇಲ್ಲ ಎಂದು ಮಾಯಾವತಿ ಘೋಷಿಸಿಯೂ ಅವರ ಹೆಸರು ರಾಷ್ಟ್ರಪತಿ ಹುದ್ದೆಗೆ ಕೇಳಿ ಬಂದಿತ್ತು. ದಲಿತ ಹಿನ್ನೆಲೆ, ಮಾಯಾವತಿ ನಡೆದುಕೊಂಡ ರೀತಿಯಿಂದ ಇದು ಸುಲಭಕ್ಕೆ ತಳ್ಳಿ ಹಾಕುವಂತ ಲೆಕ್ಕಾಚಾರವೂ ಆಗಿರಲಿಲ್ಲ ಎಂಬುದೂ ಅಷ್ಟೇ ಅತ್ಯ.

ಅರಬ್‌ ಅಬ್ಬರಕ್ಕೆ ಆರಿಫ್‌ ಕೌಂಟರ್‌?

"ಪ್ರಸ್ತುತ ಕೇರಳದ ರಾಜ್ಯಪಾಲರಾಗಿರುವ ಜನಾಬ್ ಆರಿಫ್ ಮೊಹಮ್ಮದ್ ಖಾನ್ ಅವರು ಭಾರತದ ರಾಷ್ಟ್ರಪತಿ ಹುದ್ದೆಗೆ ಪ್ರಬಲ ಸ್ಪರ್ಧಿ ಎಂದು ನಂಬಲರ್ಹ ಮೂಲದಿಂದ ತಿಳಿದುಬಂದಿದೆ. ನರೇಂದ್ರ ಮೋದಿ ಅವರು ಭಾರತ-ವಿರೋಧಿ ನಿರೂಪಣೆಯನ್ನು ಎದುರಿಸಲು ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ನೋಡಿದಾಗ ಇದು ನಂಬಲರ್ಹವಾಗಿದೆ," ಎಂದು ಎಎಪಿಯ ಹಿರಿಯ ನಾಯಕ, ವಕೀಲ ಸೋಮನಾಥ್‌ ಭಾರ್ತಿ ಗುರುವಾರ ಹೇಳಿದ್ದಾರೆ.

ರಾಷ್ಟ್ರಪತಿ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಹೇಗಲೇರಿದ ವಿಪಕ್ಷ ಅಭ್ಯರ್ಥಿ ಆಯ್ಕೆ ಹೊಣೆ!
ಹೀಗಾಗಿ ಆರಿಫ್‌ ಮೊಹಮ್ಮದ್‌ ಖಾನ್‌ ಹೆಸರು ರೇಸ್‌ನಲ್ಲಿ ಮತ್ತಷ್ಟು ಜೋರಾಗಿ ಕೇಳಿ ಬರಲಾರಂಭಿಸಿದೆ.

ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯ ವೀಕ್ಷಕರು ಕೂಡ ಮುಸ್ಲಿಮರೊಬ್ಬರನ್ನು ಬಿಜೆಪಿ ರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಬಹುದು ಎಂದು ಅಂದಾಜಿಸಿದ್ದರು. ಶುಕ್ರವಾರ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ಸ್ಪರ್ಧಿಸದೇ ಇರುವೂ ಇದೇ ಕಾರಣಕ್ಕೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಈ ನಿಟ್ಟಿನಲ್ಲಿ ಇದೀಗ ಹೊರ ಬರುತ್ತಿರುವ ಇನ್ನೊಂದು ಹೆಸರೇ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರದ್ದು.

ಯಾರಿವರು ಆರಿಫ್‌ ಮೊಹಮ್ಮದ್‌ ಖಾನ್‌?

ಹಾಗೆ ನೋಡಿದರೆ ಖಾನ್‌ ಮೂಲತಃ ಕಾಂಗ್ರೆಸಿಗರು. ಶಾ ಬಾನೋ ಪ್ರಕರಣದಲ್ಲಿ ರಾಜೀವ್‌ ಗಾಂಧಿ ಸರ್ಕಾರ ತೆಗೆದುಕೊಂಡ ಕ್ರಮವನ್ನು ಒಪ್ಪದ ಅವರು 1986ರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಪುಟದಿಂದ ಹೊರ ಬಂದಿದ್ದರು. ನಂತರ ಆರಿಫ್ ಮೊಹಮ್ಮದ್ ಖಾನ್ ಮುಸ್ಲಿಮರಲ್ಲಿನ ಆಧುನಿಕತೆಯ ಪರವಾಗಿ ಧ್ವನಿ ಎತ್ತುತ್ತಾ ಖ್ಯಾತಿ ಗಳಿಸಿದರು. ಅವರು ತ್ರಿವಳಿ ತಲಾಖ್ ರದ್ದತಿಗಾಗಿಯೂ ಧ್ವನಿ ಎತ್ತಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ವಕ್ತಾರರು ಮಾಡಿದ ಪ್ರತಿಕ್ರಿಯೆಗಳಿಂದ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಮುಸ್ಲಿಂ ಅಧ್ಯಕ್ಷೀಯ ಅಭ್ಯರ್ಥಿಯ ವದಂತಿಗಳು ಮತ್ತಷ್ಟು ಜೋರಾಗಿವೆ.

ವಿಶೇಷವೆಂದರೆ ಈ ವಿವಾದ ಸೃಷ್ಟಿಯಾದಾಗ ಮಂಗಳವಾರ ಸ್ವತಃ ಆರಿಫ್ ಮೊಹಮ್ಮದ್ ಖಾನ್ ಅರಬ್‌ ದೇಶಗಳ ಬೇಡಿಕೆಯನ್ನು ತಳ್ಳಿ ಹಾಕಿದ್ದರು. ಪ್ರವಾದಿ ಮುಹಮ್ಮದ್ ಅವರ ಕಾಮೆಂಟ್‌ಗಳ ಕುರಿತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕತಾರ್‌ ಇಟ್ಟಿದ್ದ ಬೇಡಿಕೆ 'ಮುಖ್ಯವಲ್ಲ' ಎಂದು ಸಾರಾಸಗಟಾಗಿ ತಳ್ಳಿಹಾಕಿದ್ದರು. ಈ ಮೂಲಕ ದೇಶದ ಪರವಾಗಿ ಹೇಳಿಕೆ ನೀಡಿದ್ದರು. ಇದಿಷ್ಟೇ ಅಲ್ಲದೆ ಹಲವು ಸಂದರ್ಭದಲ್ಲಿ ಅವರು ಬಿಜೆಪಿಯ ನಡೆಯನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಿದ್ದಿದೆ.

ಈಗ ಬಿಜೆಪಿಯೂ ಎಂದಿಗಿಂತ ಹೆಚ್ಚಾಗಿ 'ಮುಸ್ಲಿಂ ವಿರೋಧಿ' ಎಂಬ ಆರೋಪ ಎದುರಿಸುತ್ತಿದೆ. ಹೀಗಾಗಿ ರಾಷ್ಟ್ರಪತಿ ಹುದ್ದೆಯಲ್ಲಿ ಅದೇ ಸಮುದಾಯದವರನ್ನು ಕೂರಿಸಿದರೆ ಒಂದಿಷ್ಟು 'ಡ್ಯಾಮೇಜ್‌ ಕಂಟ್ರೋಲ್‌' ಮಾಡಬಹುದು ಎಂಬ ಆಲೋಚನೆ ಕಮಲ ಪಾಳಯದಲ್ಲಿ ಮೂಡಿ ಬಂದರೂ ಅಚ್ಚರಿಯಿಲ್ಲ.

ಈ ಎಲ್ಲಾ ಕಾರಣಗಳಿಗಾಗಿ ಕೇಸರಿ ಪಾಳಯ ಆರಿಫ್‌ ಮೊಹಮ್ಮದ್‌ ಖಾನ್‌ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿಸಿಲೂಬಹುದು.

ಜು. 25ಕ್ಕೆ ಹೊಸ ರಾಷ್ಟ್ರಪತಿ

ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಅಧಿಕಾರವಧಿಯು ಜುಲೈ 24ಕ್ಕೆ ಕೊನೆಯಾಗಲಿದ್ದು, ಜುಲೈ 18ಕ್ಕೆ ನಡೆಯಲಿರುವ ಮತದಾನದ ಫಲಿತಾಂಶ ಜು. 21ರಂದು ಹೊರಬೀಳಲಿದೆ. ಜುಲೈ 25ರಂದು ನೂತನ ರಾಷ್ಟ್ರಪತಿ ಅಧಿಕಾರ ಸ್ವೀಕರಿಸಲಿದ್ದಾರೆ.

ರಾಜ್ಯಸಭೆ ಮತ್ತು ಲೋಕಸಭೆಯ ಸಂಸದರು ಹಾಗೂ ದಿಲ್ಲಿ, ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳು, ಎಲ್ಲಾ ರಾಜ್ಯಗಳ ವಿಧಾನಸಭೆಯ ಸದಸ್ಯರು ಸೇರಿ ಒಟ್ಟು 4,809 ಚುನಾಯಿತ ಸದಸ್ಯರಿಂದ ರಾಷ್ಟ್ರಪತಿಯ ಆಯ್ಕೆ ನಡೆಯಲಿದೆ. ಈ ಸಂಬಂಧ ಜೂನ್‌ 15ಕ್ಕೆ ಅಧಿಸೂಚನೆ ಹೊರಬೀಳಲಿದೆ.
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ