ಆ್ಯಪ್ನಗರ

ನೆರೆ 'ಹೊರೆ' ಆದರೆ ತಕ್ಕ ಉತ್ತರ ನೀಡಲು ದೇಶ ಸಜ್ಜು: ಚೀನಾಗೆ ಚಾಟಿ ಬೀಸಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌

ಜಗತ್ತಿನಲ್ಲೇ ಅತಿ ದೊಡ್ಡ ಎನ್ನುಬಹುದಾದ ಉಚಿತ ಆಹಾರ ಪೂರೈಕೆ ಕಾರ್ಯ ಕ್ರಮವನ್ನು ಈ ವರ್ಷದ ನವೆಂಬರ್ ಅಂತ್ಯದವರೆಗೆ ವಿಸ್ತರಿಸಿದ್ದು, ಇದರಿಂದ ಪ್ರತಿ ತಿಂಗಳು 80 ಕೋಟಿ ಜನರಿಗೆ ಅನುಕೂಲವಾಗಿದೆ. ವಿದೇಶದಲ್ಲಿ ಸಿಲುಕಿದ್ದ 10 ಲಕ್ಷಕ್ಕೂ ಹೆಚ್ಚು ಜನರನ್ನು ತಾಯ್ನಾಡಿಗೆ ಕರೆತರಲಾಗಿದೆ.ವಿಶ್ವ ಸಮುದಾಯದ ಜೊತೆ ನಾವಿದ್ದೇವೆ ಎಂಬುದನ್ನು ಭಾರತ ಮತ್ತೊಮ್ಮೆ ತೋರಿಸಿಕೊಟ್ಟಿದೆ

Vijaya Karnataka Web 14 Aug 2020, 10:10 pm
ಹೊಸದಿಲ್ಲಿ: ನೆರೆ ಹೊರೆ ದೇಶಗಳು ತಮ್ಮ ಗಡಿಯನ್ನು ವಿಸ್ತರಣೆ ಮಾಡಿಕೊಳ್ಳುವ ಹಪಾಹಪಿತನವನ್ನು ಹೊಂದಿರುವುದು ಕಂಡುಬಂದಿದೆ. ಭಾರತ ಎಂದಿಗೂ ಶಾಂತಿಯನ್ನೇ ನಂಬಿಕೊಂಡು ಬಂದಿರುವುದು. ಒಂದು ಆಕ್ರಮಣಕಾರಿ ಮನೋಭಾವ ತೋರಿದರೆ ಅದಕ್ಕೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ಹೊಂದಿದ್ದೇವೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ತಿಳಿಸಿದರು.
Vijaya Karnataka Web ರಾಮನಾಥ್‌ ಕೋವಿಂದ್‌
ರಾಮನಾಥ್‌ ಕೋವಿಂದ್‌


74ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಇಂದು ದೇಶವಾಸಿಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಿದರು.

ಭಾರತ ಎಷ್ಟು ಸಮರ್ಥ ಎಂಬುದಕ್ಕೆ ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರು ಸಾಮರ್ಥ್ಯವೇ ಸಾಕ್ಷಿ ಎಂದು ರಾಮನಾಥ್‌ ಕೋವಿಂದ್‌ ತಿಳಿಸಿದರು.

ಗಡಿ ವಿವಾದದ ಜತೆಗೆ ಜಾಗತಿಕವಾಗಿ ಈಗ ವಿಚಿತ್ರ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಮನುಷ್ಯ, ಪ್ರಕೃತಿಯ ಯಜಮಾನ ಎಂಬ ಭ್ರಮೆಯನ್ನು ಕಣ್ಣಿಗೆ ಕಾಣದ ಕೊರೋನಾ ವೈರಾಣು ಧ್ವಂಸ ಮಾಡಿದ್ದು, ಮನು ಕುಲ ತನ್ನ ಧೋರಣೆ ಸರಿಪಡಿಸಿಕೊಂಡು ಪ್ರಕೃತಿಯೊಂದಿಗೆ ಸಹಬಾಳ್ವೆ ನಡಸಲು ಈಗಲೂ ಕಾಲ ಮಿಂಚಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಇಂತಹ ಸಂಕಷ್ಟಸ್ಥಿತಿಯಲ್ಲಿ ಆರೋಗ್ಯ ಮೂಲ ಸೌಕರ್ಯ ವೃದ್ಧಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸದೃಢಗೊಳಿಸಬೇಕಾದ ಅಗತ್ಯವಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ತ್ವರಿತಗೊಳಿಸಬೇಕಾದ ಅಗತ್ಯವನ್ನು ಈ ಸೋಂಕು ಪ್ರತಿಪಾದಿಸಿದೆ. ಲಾಕ್‌ಡೌನ್ ಕಾಲದಲ್ಲಿ ಆಡಳಿತ, ಶಿಕ್ಷಣ, ವ್ಯಾಪಾರ, ಕಚೇರಿ ಕೆಲಸ ಮತ್ತು ಸಾಮಾಜಿಕ ಸಂಪರ್ಕಕ್ಕೆ ಮಾಹಿತಿ, ಸಂಪರ್ಕ ತಂತ್ರಜ್ಞಾನ ಪರಿಣಾಮಕಾರಿ ಸಾಧನವಾಗಿ ಹೊರಹೊಮ್ಮಿದೆ ಎಂದು ರಾಮನಾಥ್‌ ಕೋವಿಂದ್‌ ಹೇಳಿದರು.

ಯುವ ಸಮುದಾಯದಲ್ಲಿ ಭಾರತದ ಭವಿಷ್ಯ ಸುರಕ್ಷಿತವಾಗಿರುತ್ತದೆ ಎಂಬ ವಿಶ್ವಾಸವಿದೆ. ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಉಂಟು ಮಾಡಿದ್ದು, ಸದ್ಯದ ಮಟ್ಟಿಗೆ ಅವರ ಕನಸುಗಳು - ಆಶೋತ್ತರಗಳ ಮೇಲೆ ಕರಿಛಾಯೆ ಆವರಿಸಿದೆ. ಆದರೆ ಈ ಕಠಿಣ ಸಮಯ ಶಾಶ್ವತವಲ್ಲ. ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವುದರಿಂದ ಯುವ ಜನತೆ ವಿಮುಖರಾಗಬಾರದು. ಇಂತಹ ವಿನಾಶಗಳ ಬಳಿಕ ಚಕಿತಗೊಳಿಸುವ ರೀತಿ ಸಮಾಜ, ಆರ್ಥಿಕತೆ ಮತ್ತು ದೇಶಗಳು ಮರು ನಿರ್ಮಾಣವಾದಂತಹ ಸ್ಫೂರ್ತಿದಾಯಕ ನಿದರ್ಶನಗಳನ್ನು ಕಂಡಿದ್ದೇವೆ ಎಂದು ಹೇಳಿದರು.

ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಂಕರ್ತರು, ಪೊಲೀಸ್, ನೈರ್ಮಲ್ಯ ಸಿಬ್ಬಂದಿಗೆ ದೇಶ ಆಭಾರಿಯಾಗಿದೆ. ಇವರೆಲ್ಲ ನಮ್ಮ ರಾಷ್ಟ್ರೀಯ ಹೀರೋಗಳು ಮತ್ತು ಆದರ್ಶಪ್ರಾಯರು. ಎಲ್ಲರೂ ಪ್ರಶಂಸಾರ್ಹರು. ಜೀವ ಉಳಿಸುವಲ್ಲಿ, ಅಗತ್ಯ ಸೇವೆ ಒದಗಿಸುವಲ್ಲಿ ಅಪಾರ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ನಗರ-ಪಟ್ಟಣಗಳು ಸ್ಥಬ್ದವಾದಾಗ, ರಸ್ತೆಗಳು ಬಿಕೋ ಎನ್ನುತ್ತಿರುವಾಗ, ಆರೋಗ್ಯ ರಕ್ಷಣೆ, ಪರಿಹಾರ, ನೀರು, ವಿದ್ಯುತ್, ಸಾರಿಗೆ ಹೀಗೆ ಅಗತ್ಯತೆಗಳಿಂದ ಜನ ವಂಚಿತರಾಗದಂತೆ ನೋಡಿಕೊಳ್ಳಲು ಇವರೆಲ್ಲ ಅವಿರತವಾಗಿ ಶ್ರಮಿಸಿದ್ದಾರೆ. ಇವರು ತಮ್ಮ ಜೀವವನ್ನೇ ಪಣಕ್ಕೊಡಿದ್ದಾರೆ ಎಂದು ಶ್ಲಾಘಿಸಿದರು.

ಕೇಂದ್ರ ಸರಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ನೀತಿಯ ಅನುಷ್ಠಾನದೊಂದಿಗೆ, ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದಂತಾಗಲಿದೆ. ಇದು, ಮುಂದೆ ಎದುರಾಗಬಹುದಾದ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿ, ನವ ಭಾರತ ನಿರ್ಮಾಣಕ್ಕೆ ಹಾದಿ ಮಾಡಿಕೊಡುತ್ತದೆ. ಎಂದರು.

ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತಿದ್ದು, ಇದು ನಿಜವಾಗಿಯೂ ಪ್ರತಿಯೊಬ್ಬರಿಗೂ ಅಭಿಮಾನದ ಸಂಗತಿ. ದೇಶದ ಜನತೆ ಸುದೀರ್ಘ ಕಾಲದಿಂದ ಸಂಯಮ-ಶಾಂತಿ ಕಾಪಾಡಿಕೊಂಡು ಬಂದಿದ್ದರು. ಇಂತಹ ಶ್ಲಾಘನೀಯ ನಡವಳಿಕೆಗಾಗಿ, ದೇಶ ಬಾಂಧವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ರಾಮನಾಥ್ ಕೋವಿಂದ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ