ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಹುಂಡಿಯಲ್ಲಿ ಪಾಕಿಸ್ತಾನದ ನೋಟು ಪತ್ತೆಯಾಗಿರುವುದು ಕೇರಳ ಪೊಲೀಸರಿಗೆ ಹೊಸ ತಲೆ ನೋವು ತಂದೊಡ್ಡಿದೆ.
ಇತ್ತೀಚೆಗೆ ದೇವಸ್ಥಾನದ ಹುಂಡಿಯನ್ನು ತೆರೆದಾಗ, ಪಾಕಿಸ್ತಾನದ 20 ರೂ. ಮುಖಬೆಲೆಯ ನೋಟು ಮಡಚಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜೂನ್ 28ರಂದು ಸ್ವರ್ಣ ಧ್ವಜಸ್ತಂಭ ಪ್ರತಿಷ್ಠಾಪನೆ ಸಮಾರಂಭಕ್ಕೆ ದೇಗುಲ ತೆರೆದ ಸಂದರ್ಭದಲ್ಲಿ ಈ ನೋಟು ಹುಂಡಿಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಬೇರೆ ದೇಶಗಳ ಹಣ ಹುಂಡಿಯಲ್ಲಿ ಪತ್ತೆಯಾಗುವುದು ಸಾಮಾನ್ಯವಾದರೂ, ಪಾಕಿಸ್ತಾನದ ಹಣ ಹುಂಡಿಯಲ್ಲಿ ಸಿಕ್ಕಿರುವುದು ಇದೇ ಮೊದಲು.
''ಈ ಸಂಬಂಧ ಗುಪ್ತಚರ ವಿಭಾಗಕ್ಕೆ ವರದಿ ಸಲ್ಲಿಸಲಾಗಿದೆ. ಸಿಸಿಟಿವಿ ಕ್ಯಾಮರಾವನ್ನೂ ಪರಿಶೀಲಿಸಲಾಗುತ್ತಿದೆ. ಕಿಡಿಗೇಡಿಗಳ ಕೃತ್ಯ ಇರಬಹುದು ಎಂದು ಊಹಿಸಲಾದರೂ, ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು,'' ಎಂದು ಪೊಲೀಸರು ಹೇಳಿದ್ದಾರೆ.