ಪುಣೆ: ಜಗತ್ತು ಇಂದು ಎದುರಿಸುತ್ತಿರುವ ಸವಾಲುಗಳಲ್ಲಿ ತಂತ್ರಜ್ಞಾನ ಕೇಂದ್ರಬಿಂದು ಎನಿಸಿಕೊಂಡಿದ್ದು, ಹೊಸ ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಅಪಡೇಟ್ ಆಗುತ್ತಾ ದೇಶದ ಶಸ್ತ್ರಾಸ್ತ್ರ ಕೋಠಿಯನ್ನು ಆಧುನೀಕರಣಗೊಳಿಸುತ್ತಲೇ ಇರಿ ಎಂದು ಎಳೆಯ ಸೇನಾ ಇಂಜಿನಿಯರುಗಳಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕಿವಿಮಾತು ಹೇಳಿದ್ದಾರೆ. ಶನಿವಾರ ಇಲ್ಲಿನ ಮಿಲಿಟರಿ ಇಂಜಿನಿಯರಿಂಗ್ ಕಾಲೇಜಿನ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 'ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿ ನೀವು 'ಉತ್ತಮ ಇಂಜಿನಿಯರ್ ಹಾಗೂ ಉತ್ತಮ ಸೇನಾನಿ' ... ಹೀಗೆ ಎರಡು ಪಾತ್ರಗಳಿಗೆ ಸಜ್ಜಾಗಬೇಕು,' ಎಂದು ಮಿಲಿಟರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
'ಇಂದು ಭದ್ರತೆಗೆ ಸಂಬಂಧಪಟ್ಟಂತೆ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿತ್ಯನೂತನ ಎಂಬಂತಹ ಸವಾಲುಗಳಿವೆ. ಜಗತ್ತು ಇಂದು ಎದುರಿಸುತ್ತಿರುವ ಸವಾಲುಗಳ ಪೈಕಿ ತಂತ್ರಜ್ಞಾನಕ್ಕೆ ಕೇಂದ್ರ ಸ್ಥಾನವಿದೆ. ಆದ್ದರಿಂದ, ದೇಶದ ಸುಭದ್ರತೆಗೆ ಅಗತ್ಯವಿರುವಷ್ಟು ತಾಂತ್ರಿಕ ಜ್ಞಾನ ಒದಗಿಸಲು ನೀವು ಸದಾ ಸಜ್ಜಾಗಿರಬೇಕು,' ಎಂದರು.
ಅದಾದ ಬಳಿಕ, ಶಸ್ತ್ರಾಸ್ತ್ರ ಪಡೆಗಳಿಗೆ 'ಪರಿಷ್ಕೃತ ತಂತ್ರಜ್ಞಾನ' ಒದಗಿಸುವುದು ವಿದ್ಯಾರ್ಥಿಗಳ ಮುಂದಿನ ಸವಾಲು ಎಂದರು.
ಇದಕ್ಕೂ ಮೊದಲು ಮಾತನಾಡಿದ ಲೆಫ್ಟಿನೆಂಟ್ ಜನರಲ್ ಡಿ.ಆರ್ ಸೋನಿ, 'ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಶಸ್ತ್ರಾಸ್ತ್ರ ಪಡೆಗಳು ಕಡಿಮೆ ತೀವ್ರತೆಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಪರೋಕ್ಷ ಯುದ್ಧವೇ (ಪ್ರಾಕ್ಸಿ ವಾರ್) ಇಂದು ದೊಡ್ಡ ಸವಾಲಾಗಿದೆ,' ಎಂದರು.
ಪುಣೆಯಲ್ಲಿರುವ ಭಾರತೀಯ ಸೇನೆಯ ಮುಂಚೂಣಿ ತಾಂತ್ರಿಕ ಹಾಗೂ ಯುದ್ಧತಂತ್ರ ತರಬೇತಿ ಸಂಸ್ಥೆಯಲ್ಲಿ ಈ ವರ್ಷ ಒಟ್ಟು 71 ಎಂ.ಟೆಕ್ ಹಾಗೂ ಬಿ.ಟೆಕ್ ವಿದ್ಯಾರ್ಥಿಗಳು ಪದವಿ ಮುಗಿಸಿದರು. ಈ ಇನ್ಸ್ಟಿಟ್ಯೂಟ್ 1943ರಲ್ಲಿ ಸ್ಥಾಪನೆಯಾಗಿತ್ತು.