ಆ್ಯಪ್ನಗರ

1% ಕಮಿಷನ್‌ ಭ್ರಷ್ಟಾಚಾರ: ಎರಡೇ ತಿಂಗಳಲ್ಲಿ ಪಂಜಾಬ್ ಆರೋಗ್ಯ ಸಚಿವರ ವಜಾ, ಬಂಧನ

Punjab Health Minister Vijay Singla Sacked: ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ಸಿಎಂ ಭಗವಂತ್ ಮಾನ್ ಅವರು ಸಂಪುಟದಿಂದ ವಜಾಗೊಳಿಸಿದ್ದಾರೆ. ಅದರ ಬೆನ್ನಲ್ಲೇ ಸಿಂಗ್ಲಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ.

Edited byಅಮಿತ್ ಎಂ.ಎಸ್ | Vijaya Karnataka Web 24 May 2022, 3:39 pm

ಹೈಲೈಟ್ಸ್‌:

  • ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ವಜಾ, ಬಂಧನ
  • ಸಿಂಗ್ಲಾ ಅವರನ್ನು ಸಂಪುಟದಿಂದ ಕಿತ್ತುಹಾಕಿದ ಭಗವಂತ್ ಮನ್
  • ಟೆಂಡರ್‌ಗಳಲ್ಲಿ ಶೇ 1ರಷ್ಟು ಕಮಿಷನ್ ನೀಡುವಂತೆ ಬೇಡಿಕೆ
  • ಸಿಂಗ್ಲಾ ವಿರುದ್ಧ ಭಗವಂತ್ ಮನ್‌ಗೆ ದೂರು ನೀಡಿದ್ದ ಅಧಿಕಾರಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web punjab health minister vijay singla sacked by bhagwant mann over corruption charges and arrested
1% ಕಮಿಷನ್‌ ಭ್ರಷ್ಟಾಚಾರ: ಎರಡೇ ತಿಂಗಳಲ್ಲಿ ಪಂಜಾಬ್ ಆರೋಗ್ಯ ಸಚಿವರ ವಜಾ, ಬಂಧನ
ಚಂಡೀಗಡ: ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಭ್ರಷ್ಟಾಚಾರ ಆರೋಪ ಹೊತ್ತ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಮಂಗಳವಾರ ಸಂಪುಟದಿಂದ ಕಿತ್ತುಹಾಕಲಾಗಿದೆ. ಸಿಂಗ್ಲಾ ವಿರುದ್ಧದ ಆರೋಪಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾದ ಕಾರಣ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸಂಪುಟದಿಂದ ವಜಾಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಟೆಂಡರ್‌ಗಳ ಮೇಲೆ ಶೇ 1ರಷ್ಟು ಕಮಿಷನ್ ನೀಡುವಂತೆ ಸಿಂಗ್ಲಾ ಬೇಡಿಕೆ ಇರಿಸಿದ್ದರು ಎನ್ನಲಾಗಿದೆ. ಸಂಪುಟದಿಂದ ವಜಾಗೊಳಿಸಿದ ಕೆಲವೇ ಸಮಯದಲ್ಲಿ ಪಂಜಾಬ್ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳ ಅವರನ್ನು ಬಂಧಿಸಿದೆ.
ಇನ್ಮುಂದೆ ಪಂಜಾಬ್ ಜೈಲಿನಲ್ಲಿ ವಿಐಪಿ ಸೆಲ್‌ ಇರಲ್ಲ : ಸಿಎಂ ಭಗವಂತ್‌ ಮಾನ್‌

ಕೇವಲ 10 ದಿನಗಳ ಹಿಂದಷ್ಟೇ ಸಿಎಂ ಭಗವಂತ್ ಮಾನ್ ಅವರಿಗೆ ಆರೋಗ್ಯ ಸಚಿವ ಸಿಂಗ್ಲಾ ವಿರುದ್ಧ ದೂರು ಬಂದಿತ್ತು. ದೇಶದ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ತಮ್ಮದೇ ಪಕ್ಷದ ಸಂಪುಟ ಸಹೋದ್ಯೋಗಿ ವಿರುದ್ಧ ಈ ರೀತಿ ಕಠಿಣ ಕ್ರಮ ತೆಗೆದುಕೊಂಡಿರುವುದು ಇದು ಎರಡನೇ ಸಲವಾಗಿದೆ. ಇದಕ್ಕೂ ಮುನ್ನ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2015ರಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ತಮ್ಮ ಸಚಿವರೊಬ್ಬರನ್ನು ವಜಾಗೊಳಿಸಿದ್ದರು.


ಸಿಂಗ್ಲಾ ವಿರುದ್ಧ ಮುಖ್ಯಮಂತ್ರಿ ಕಚೇರಿಗೆ ಹತ್ತು ದಿನಗಳ ಹಿಂದೆ ಸರ್ಕಾರಿ ಅಧಿಕಾರಿಯೊಬ್ಬರು ದೂರು ಸಲ್ಲಿಸಿದ್ದರು. ಸಚಿವರ ಬಗ್ಗೆ ಯಾವುದೇ ಭಯಪಡುವ ಅಗತ್ಯವಿಲ್ಲ ಮತ್ತು ನಾನು ನಿಮ್ಮ ಜತೆಗೆ ಇರುತ್ತೇನೆ ಎಂದು ಅಧಿಕಾರಿಗೆ ಸಿಎಂ ಮಾನ್ ವೈಯಕ್ತಿಕ ಭರವಸೆ ನೀಡಿದ್ದರು ಎನ್ನಲಾಗಿದೆ. ಅಧಿಕಾರಿಯ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಅದರಲ್ಲಿ ಸಚಿವರು ಮತ್ತು ಅವರ ಆಪ್ತರು ಶೇ 1ರಷ್ಟು ಕಮಿಷನ್ ಕೇಳುತ್ತಿರುವುದು ಬಯಲಾಗಿತ್ತು. ಕಾಲ್ ರೆಕಾರ್ಡಿಂಗ್‌ಗಳು ಮತ್ತು ಇತರೆ ಪುರಾವೆಗಳನ್ನು ಸಂಗ್ರಹಿಸಿದ ಬಳಿಕ, ಸಿಎಂ ಮಾನ್ ಕ್ರಮ ಕೈಗೊಂಡಿದ್ದಾರೆ. ಜತೆಗೆ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕುಡಿದ ಮತ್ತಿನಲ್ಲಿ ಗುರುದ್ವಾರಕ್ಕೆ ಬಂದ ಸಿಎಂ ಭಗವಂತ್ ಮಾನ್: ಬಿಜೆಪಿಯಿಂದ ಪೊಲೀಸರಿಗೆ ದೂರು!

"ಶೇ 1ರಷ್ಟು ಭ್ರಷ್ಟಾಚಾರವನ್ನು ಕೂಡ ಸಹಿಸುವುದಿಲ್ಲ. ಜನರು ಬಹಳಷ್ಟು ಭರವಸೆಯೊಂದಿಗೆ ಎಎಪಿ ಸರ್ಕಾರಕ್ಕೆ ಮತ ಹಾಕಿದ್ದಾರೆ. ನಾವು ಅದಕ್ಕೆ ಅನುಗುಣವಾಗಿ ಬದುಕಬೇಕು. ಅರವಿಂದ್ ಕೇಜ್ರಿವಾಲ್ ಅವರಂತಹ ಮಗ ಮತ್ತು ಭಗವಂತ್ ಮಾನ್ ಅವರಂತಹ ಸೈನಿಕನನ್ನು ಭಾರತ ಮಾತೆ ಹೊಂದಿರುವವರೆಗೂ ಭ್ರಷ್ಟಾಚಾರದ ವಿರುದ್ಧದ ಮಹಾ ಯುದ್ಧ ಮುಂದುವರಿಯುತ್ತದೆ" ಎಂದು ವಿಡಿಯೋ ಸಂದೇಶದಲ್ಲಿ ಮಾನ್ ಹೇಳಿದ್ದಾರೆ. ತಮ್ಮ ತಪ್ಪನ್ನು ಸಿಂಗ್ಲಾ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಈ ನಿರ್ಧಾರದ ಬೆನ್ನಲ್ಲೇ ಭಗವಂತ್ ಮಾನ್ ಅವರನ್ನು ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದ್ದಾರೆ. "ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ ಭಗವಂತ್. ನಿಮ್ಮ ಕ್ರಮವು ನನ್ನ ಕಣ್ಣುಗಳಲ್ಲಿ ನೀರು ತರಿಸಿದೆ. ಇಂದು ಇಡೀ ದೇಶ ಎಎಪಿ ಬಗ್ಗೆ ಹೆಮ್ಮೆ ಪಡುತ್ತಿದೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
'ವಿದೇಶಿಗರು ಇಲ್ಲಿ ಬಂದು ಕೆಲಸ ಹುಡುಕುತ್ತಾರೆ': ಪಂಜಾಬ್ ಸಿಎಂ ಮನ್ ಹೇಳಿಕೆಗೆ ವ್ಯಾಪಕ ಟೀಕೆ

"ಭ್ರಷ್ಟಾಚಾರ ಆರೋಪದ ನೆಲಗಟ್ಟಿನಲ್ಲಿ ತನ್ನದೇ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಮಗ್ರತೆ, ಧೈರ್ಯ ಮತ್ತು ನೇರವಂತಿಕೆ ಹೊಂದಿರುವ ಏಕೈಕ ಪಕ್ಷವೆಂದರೆ ಆಮ್ ಆದ್ಮಿ ಪಕ್ಷ. ಇದನ್ನು ನಾವು ದಿಲ್ಲಿಯಲ್ಲಿ ನೋಡಿದ್ದೆವು. ಈಗ ನಾವು ಪಂಜಾಬ್‌ನಲ್ಲಿ ಕಾಣುತ್ತಿದ್ದೇವೆ. ಭ್ರಷ್ಟಾಚಾರ ಕುರಿತು ಶೂನ್ಯ ಸಹಿಷ್ಣುತೆ" ಎಂದು ಪಕ್ಷದ ಸಂಸದ ರಾಘವ ಛಡ್ಡಾ ಟ್ವೀಟ್ ಮಾಡಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ