ಹೊಸದಿಲ್ಲಿ: ಆ್ಯಸಿಡ್ ದಾಳಿ ಸಂತ್ರಸ್ತರು, ಆಟಿಸಂ ಕಾಯಿಲೆಯಿಂದ ಬಳಲುತ್ತಿರುವವರು, ಮಾನಸಿಕ ಅಸ್ವಸ್ಥತೆ ಹಾಗೂ ಬೌದ್ಧಿಕ ಅಸಾಮರ್ಥ್ಯದಿಂದ ಬಳಲುತ್ತಿರುವವರಿಗೆ ಕೇಂದ್ರ ಸರಕಾರದ ಉದ್ಯೋಗ ಮತ್ತು ಬಡ್ತಿ ನೀಡಿಕೆಯಲ್ಲಿ ಮೀಸಲು ಕಲ್ಪಿಸಲು ಚಿಂತನೆ ನಡೆಯುತ್ತಿದೆ.
ವೈಕಲ್ಯ ಇರುವವರಿಗೆ ಹುದ್ದೆಗಳ ಭರ್ತಿ, ಬಡ್ತಿಯಲ್ಲಿ ಮೀಸಲು ಹಾಗೂ ವಯೋಮಿತಿ ಸಡಿಲಿಕೆ ನೀಡುವ ಕುರಿತು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಕರಡು ನೀತಿ ಸಿದ್ಧಪಡಿಸಿದೆ.
ಪ್ರಸ್ತುತ ವಿಕಲ ಚೇತನರಿಗೆ ಬಡ್ತಿಯಲ್ಲಿ ಮೀಸಲು ಕಲ್ಪಿಸುವ ಕುರಿತ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವುದರಿಂದ ಸರಕಾರದ ಈ ಮೀಸಲು ನೀತಿ ಮುಂದಿನ ದಿನಗಳಲ್ಲಿ ವಿವಾದಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.
ದೃಷ್ಟಿ ಹೀನತೆ, ಶ್ರವಣದೋಷ, ವಾಕ್ದೋಷ ಹಲವು ಸಮಸ್ಯೆ ಹೊಂದಿರುವ ವಿಕಲ ಚೇತನರಿಗೆ ಈಗಾಗಲೇ ಮೀಸಲು ಅನ್ವಯವಾಗುತ್ತಿದ್ದು, ಆ್ಯಸಿಡ್ ದಾಳಿ ಸಂತ್ರಸ್ತರು, ಆಟಿಸಂನಿಂದ ಬಳಲುತ್ತಿರುವವರು , ಮಾನಸಿಕ ಅಸ್ವಸ್ಥತೆ, ಬೌದ್ಧಿಕ ಅಸಾಮರ್ಥ್ಯ ಹೊಂದಿದವರು, ದೃಷ್ಟಿ ಹಾಗೂ ಶ್ರವಣ ಸಮಸ್ಯೆ ಎರಡನ್ನೂ ಹೊಂದಿರುವವರಿಗೂ ಶೇಕಡ 1ರಷ್ಟು ಮೀಸಲು ದೊರೆಯುವ ಸಾಧ್ಯತೆಯಿದೆ.
ಈ ಕರಡು ನೀತಿ ಕುರಿತು 15 ದಿನದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಎಲ್ಲ ಇಲಾಖೆಗಳಿಗೆ ಸೂಚಿಸಿದೆ.