ಆ್ಯಪ್ನಗರ

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪದ ಬಳಕೆ: ರಾಹುಲ್ ವಿರುದ್ಧ ಬಿಜೆಪಿ ಕೆಂಡ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೇಂದ್ರ ಸರಕಾರ ಹಾಗೂ ಪ್ರಮುಖ ಸಚಿವರು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Vijaya Karnataka Web 22 Sep 2018, 9:25 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೇಂದ್ರ ಸರಕಾರ ಹಾಗೂ ಪ್ರಮುಖ ಸಚಿವರು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web PM Modi- Rahul Gandhi


ರಫೇಲ್‌ ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ನೀಡಿದ ಹೇಳಿಕೆ ನಾಚಿಕೆಗೇಡು ಹಾಗೂ ಬೇಜವಾಬ್ದಾರಿತನದ್ದು ಎಂದು ಸರಕಾರ ವಾಗ್ದಾಳಿ ನಡೆಸಿದೆ.

'ರಾಹುಲ್ ಗಾಂಧಿ ಹೇಳುವುದೂ 'ಮೋದಿ ಹಟಾವೋ'; ಪಾಕಿಸ್ತಾನ ಹೇಳೋದೂ 'ಮೋದಿ ಹಟಾವೋ'. ಪ್ರಧಾನಿ ಮೋದಿ ಅವರ ವಿರುದ್ಧ ರಾಹುಲ್ ಗಾಂಧಿ ಮಾಡಿದ ಆಧಾರರಹಿತ ಆರೋಪಗಳನ್ನು ಈಗ ಪಾಕಿಸ್ತಾನವೂ ಬೆಂಬಲಿಸುತ್ತದೆ. ಪ್ರಧಾನಿ ಮೋದಿ ವಿರುದ್ಧ ಅಂತಾರಾಷ್ಟ್ರೀಯ 'ಗಟಬಂಧನ್' ರಚಿಸಲು ಕಾಂಗ್ರೆಸ್‌ ಹೊರಟಿದೆಯೇ? ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ.


'ಒಬ್ಬ ಪ್ರಧಾನಿ ವಿರುದ್ಧ ಒಂದು ಪಕ್ಷದ ಅಧ್ಯಕ್ಷರು ಇಂತಹ ಪದಗಳನ್ನು ಬಳಸಿದ ಪ್ರಕರಣ ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಲ್ಲ. ರಾಹುಲ್ ಗಾಂಧಿಯಿಂದ ನಾವು ಏನನ್ನೂ ನಿರೀಕ್ಷಿಸಲಾಗದು. ಅವರಿಗೆ ಯಾವುದೇ ಅರ್ಹತೆಯೂ ಇಲ್ಲ, ಸಾಮರ್ಥ್ಯವೂ ಇಲ್ಲ... ಕುಟುಂಬದ ಹಿನ್ನೆಲೆಯಿಂದ ಮಾತ್ರವೇ ರಾಜಕೀಯದಲ್ಲಿದ್ದಾರೆ ಅಷ್ಟೆ' ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌ ಪ್ರತಿಕ್ರಿಯಿಸಿದರು.

ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಹೊಲಾಂಡೆ ಹೇಳಿಕೆಗೆ ಪ್ರತಿಕ್ರಿಯಿಸುತ್ತ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಒಬ್ಬ 'ಕಳ್ಳ' ಎನ್ನಲು ಬೇರೆ ಯಾವುದೇ ಸಾಕ್ಷಿ ಬೇಕಿಲ್ಲ ಎಂದು ದೂಷಿಸಿದ್ದರು.

ರಾಹುಲ್ ಹೇಳಿಕೆಯಿಂದ ಕೆರಳಿ ಕೆಂಡವಾಗಿರುವ ಬಿಜೆಪಿ ನಾಯಕರು ಹಾಗೂ ಕೇಂದ್ರದ ಹಲವು ಸಚಿವರು #RahulKaPuraKhandanChor ಹ್ಯಾಶ್‌ ಟ್ಯಾಗ್‌ನಲ್ಲಿ ಸರಣಿ ಟ್ವೀಟ್ ಮಾಡಿದ್ದು, ರಾಹುಲ್‌ ಅವರನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.


ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ರಾಹುಲ್ ಗಾಂಧಿ ಮತ್ತು ಅವರ ಕುಟುಂಬವೇ ಈ ದೇಶದಲ್ಲಿ ಬಹುಕಾಲದಿಂದ ಭ್ರಷ್ಟಾಚಾರದ ಮೂಲವಾಗಿದೆ. ಅಂಥವರು ಇಂದು ರಫೇಲ್‌ ವಿಚಾರದಲ್ಲಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತ ನೀಡುತ್ತಿರುವವರು ಪ್ರಧಾನಿ ನರೇಂದ್ರ ಮೋದಿ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಟ್ವೀಟ್‌ ಮಾಡಿದ್ದಾರೆ.


ಸಚಿವ ಅನಂತ ಕುಮಾರ್‌, ಪ್ರಿಯ ರಾಹುಲ್‌ ಗಾಂಧಿ ನಿಮಗೆ ಮುಂದ್ರಾ ಜೀಪ್‌ ಹಗರಣದಿಂದ ಬೋಫೋರ್ಸ್‌, ಸಿಡಬ್ಲ್ಯುಜಿ, ನ್ಯಾಷನಲ್ ಹೆರಾಲ್ಡ್‌ ವರೆಗಿನ ಎಲ್ಲ ಹಗರಣಗಳಲ್ಲಿ ನಿಮ್ಮದೇ ಕುಟುಂಬ ಶಾಮೀಲಾಗಿರುವುದು ನಿಮಗೆ ಗೊತ್ತಿಲ್ಲವೆ? ಎಂದು ಕಾಲೆಳೆದಿದ್ದಾರೆ.

ಕಾಂಗ್ರೆಸ್‌ ಪಾಲಿಗೆ ರಫೇಲ್‌ ಎಂದರೆ ರಾಹುಲ್'ಫಿರ್‌ಸೇ ಲಾಂಚ್‌ ಅಭಿಯಾನ್'. ಕಾಂಗ್ರೆಸ್ ಎಷ್ಟೇ ಹವಣಿಸಿದರೂ ರಫೇಲ್‌ನಿಂದ ರಾಹುಲ್ ಗಾಂಧಿಯ ಭವಿಷ್ಯಕ್ಕೆ ಏನೂ ಪ್ರಯೋಜನವಿಲ್ಲ. ರಾಹುಲ್ ಸುಳ್ಳಿನ ವ್ಯಾಪಾರಿ ಎಂಬುದನ್ನಷ್ಟೇ ಅವರ ಹೇಳಿಕೆಗಳು ಸಾಬೀತುಪಡಿಸುತ್ತವೆ ಎಂದು ಮತ್ತೊಬ್ಬ ಸಚಿವ ಜೆ.ಪಿ ನಡ್ಡಾ ಟ್ವೀಟ್ ಮಾಡಿದ್ದಾರೆ.


'ಗಲೀ ಗಲೀ ಮೇ ಶೋರ್‌ ಹೈ, ರಾಜೀವ್ ಗಾಂಧಿ ಚೋರ್‌ ಹೈ'- ಈ ಘೋಷಣೆಯನ್ನು ಒಮ್ಮೆ ನೆನಪಿಸಿಕೊಳ್ಳಿ ರಾಹುಲ್ ಗಾಂಧಿ. ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ಆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ' ಎಂದು ಸಹಾಯಕ ಸಚಿವ ವಿಜಯ್ ಸಂಪ್ಲಾ ಛೇಡಿಸಿದ್ದಾರೆ.


ಕಾಂಗ್ರೆಸ್‌ ಪಕ್ಷ ಪದೇ ಪದೇ ಸುಳ್ಳುಗಳನ್ನೇ ಹೇಳುತ್ತಿದೆ. ಕಾಂಗ್ರೆಸ್‌ ಅಧ್ಯಕ್ಷರು ಆಲೂಗಡ್ಡೆಯಿಂದ ಚಿನ್ನ ತಯಾರಿಸುವ ಯಂತ್ರ ಕಂಡು ಹಿಡಿದಿರಬಹುದು; ಆದರೆ ದುರದೃಷ್ಟವಶಾತ್‌ ಸುಳ್ಳನ್ನು ಸತ್ಯವಾಗಿಸುವ ಯಂತ್ರವನ್ನು ಶೋಧಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ಹಿರಿಯ ಪತ್ರಕರ್ತ, ಸಚಿವ ಎಂ.ಜೆ ಅಕ್ಬರ್‌ ಟೀಕಿಸಿದ್ದಾರೆ.


ಹಲವು ತಲೆಮಾರುಗಳ ಕಾಲ ದೇಶವನ್ನು ದೋಚಿದ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು. ರಾಹುಲ್‌, ನಿಮ್ಮ ತಂದೆ ಬೋಫೋರ್ಸ್‌ ಹಗರಣದಲ್ಲಿ ಭಾಗಿಯಾಗಿದ್ದರು. ನೀವು, ನಿಮ್ಮ ತಾಯಿ ಹಲವು ವರ್ಷಗಳ ಕಾಲ ಕಡು ಭ್ರಷ್ಟ ಆಡಳಿತ ನಡೆಸಿದ ಯುಪಿಎ ಸರಕಾರದ ಚುಕ್ಕಾಣಿ ಹಿಡಿದಿದ್ದಿರಿ. ಇಂತಹ ಹಿನ್ನೆಲೆಯ ನೀವು ದೇಶದ ಪ್ರಧಾನ ಸೇವಕರನ್ನು 'ಕಳ್ಳ' ಎಂದು ಕರೆಯವ ದಾರ್ಷ್ಟ ಪ್ರದರ್ಶಿಸಿದ್ದೀರಿ!! ಶೇಮ್‌ ಶೇಮ್‌- ಎಂದು ಸಚಿವ ಡಿ.ವಿ ಸದಾನಂದ ಗೌಡ ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು? ಇಲ್ಲಿದೆ ನೋಡಿ ವಿವರ:

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ