ಆ್ಯಪ್ನಗರ

ಪಕ್ಷದ ಹಿತಕ್ಕಿಂತ ಮಕ್ಕಳ ಹಿತಕ್ಕೆ ಒತ್ತುಕೊಟ್ಟ ಗೆಹ್ಲೋಟ್‌, ಕಮಲ್ ನಾಥ್‌, ಚಿದಂಬರಂ: ರಾಹುಲ್ ನೇರ ವಾಗ್ದಾಳಿ

ಸೋಲಿನ ಪರಾಮರ್ಶೆ ನಡೆಸಲು ಕರೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಹಿರಿಯ ನಾಯಕರು ತಮ್ಮ ಪುತ್ರರಿಗೆ ಟಿಕೆಟ್ ನೀಡಬೇಕೆಂದು ದುಂಬಾಲು ಬಿದ್ದುದೇ ಸೋಲಿಗೆ ಕಾರಣವಾಯಿತು ಎಂದು ಟೀಕಿಸಿದರು. ಸ್ಥಳೀಯ ನಾಯಕರನ್ನು ಕಾಂಗ್ರೆಸ್‌ ಬೆಳೆಸಬೇಕು ಎಂದು ಜ್ಯೋತಿರಾದಿತ್ಯ ಸಿಂಧಿಯಾ ಆಗ್ರಹಿಸಿದ ಬಳಿಕ ರಾಹುಲ್ ಮಧ್ಯೆ ಪ್ರವೇಶಿಸಿ ಈ ಹೇಳಿಕೆ ನೀಡಿದರು.

TNN 26 May 2019, 11:02 am
ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಹೊಣೆ ಹೊತ್ತು ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡುವ ರಾಹುಲ್ ಗಾಂಧಿ ಪ್ರಸ್ತಾವವನ್ನು ಪಕ್ಷದ ಇತರ ಪ್ರಮುಖರು ತಿರಸ್ಕರಿಸಿದ್ದಾರೆ. ಇದೇ ವೇಳೆ ಕೆಲವು ಹಿರಿಯ ಮುಖಂಡರು ತಮ್ಮ ಮಕ್ಕಳ ಹಿತವನ್ನೇ ಪಕ್ಷದ ಹಿತಕ್ಕಿಂತ ಹೆಚ್ಚಾಗಿ ಪರಿಗಣಿಸಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದರು.
Vijaya Karnataka Web Sonia-Rahul Gandhi


ಸೋಲಿನ ಪರಾಮರ್ಶೆ ನಡೆಸಲು ಕರೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಹಿರಿಯ ನಾಯಕರು ತಮ್ಮ ಪುತ್ರರಿಗೆ ಟಿಕೆಟ್ ನೀಡಬೇಕೆಂದು ದುಂಬಾಲು ಬಿದ್ದುದೇ ಸೋಲಿಗೆ ಕಾರಣವಾಯಿತು ಎಂದು ಟೀಕಿಸಿದರು. ಸ್ಥಳೀಯ ನಾಯಕರನ್ನು ಕಾಂಗ್ರೆಸ್‌ ಬೆಳೆಸಬೇಕು ಎಂದು ಜ್ಯೋತಿರಾದಿತ್ಯ ಸಿಂಧಿಯಾ ಆಗ್ರಹಿಸಿದ ಬಳಿಕ ರಾಹುಲ್ ಮಧ್ಯೆ ಪ್ರವೇಶಿಸಿ ಈ ಹೇಳಿಕೆ ನೀಡಿದರು.

ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಹೀನಾಯ ಸೋಲು ಅನುಭವಿಸಿದೆ ಎಂಬುದನ್ನು ರಾಹುಲ್ ಪ್ರಸ್ತಾಪಿಸಿದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್ ತಮ್ಮ ಪುತ್ರರಿಗೆ ಟಿಕೆಟ್ ನೀಡಬೇಕೆಂದು ಪಟ್ಟುಹಿಡಿದರು. ಅವರ ಬೇಡಿಕೆಗಳನ್ನು ಒಪ್ಪುವ ಸ್ಥಿತಿಯಲ್ಲಿ ತಾವಿರಲಿಲ್ಲ, ಆದರೂ ಒತ್ತಡಕ್ಕೆ ಮಣಿದು ಟಿಕೆಟ್ ನೀಡಬೇಕಾಯಿತು ಎಂದು ರಾಹುಲ್ ಹೇಳಿದರು. ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹೆಸರನ್ನೂ ಈ ಸಂದರ್ಭ ರಾಹುಲ್ ಪ್ರಸ್ತಾಪಿಸಿದರು.

ಹೀನಾಯ ಸೋಲಿನ ಹಿನ್ನೆಲೆಯಲ್ಲಿ ತೀವ್ರ ಹತಾಶರಾದಂತೆ ಕಾಣುತ್ತಿದ್ದ ರಾಹುಲ್, ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ತಾವು ಎತ್ತಿದ ವಿಚಾರಗಳನ್ನು ಹಿರಿಯ ನಾಯಕರು ಮುಂದಕ್ಕೊಯ್ಯಲಿಲ್ಲ ಎಂದು ದೂಷಿಸಿದರು. ರಫೇಲ್‌ ಡೀಲ್ ಸಂಬಂಧಿತ 'ಚೌಕಿದಾರ್ ಚೋರ್‌ ಹೈ' ಘೋಷಣೆಯನ್ನು ಸರಿಯಾಗಿ ಜನತೆಗೆ ಮುಟ್ಟಿಸಲಿಲ್ಲ, ಯಾರ್ಯಾರು ಈ ವಿಚಾರದಲ್ಲಿ ತಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ದುಡಿದಿರಿ? ಕೈ ಎತ್ತಿ ಎಂದು ರಾಹುಲ್ ಸೂಚಿಸಿದರು.

ಸಂಘಟನೆಯಲ್ಲಿ ಉತ್ತರದಾಯಿತ್ವ ಇರಬೇಕು ಎಂದ ರಾಹುಲ್, ಚುನಾವಣೆ ಸೋಲಿನ ಹೊಣೆಯನ್ನು ಸ್ವೀಕರಿಸಿ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಆದರೆ ಕಾರ್ಯಕಾರಿಣಿ ಈ ಪ್ರಸ್ತಾವವನ್ನು ತಿರಸ್ಕರಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ