ಆ್ಯಪ್ನಗರ

Rahul Gandhi Defamation Case: ಮಾನಹಾನಿ ಪ್ರಕರಣದಲ್ಲಿ 2 ವರ್ಷ ಶಿಕ್ಷೆ: ಕೋಲಾರದಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಏನು?

Rahul Gandhi Latest News: ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಷ್ಟಕ್ಕೂ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಏನು? ಅದರಲ್ಲಿ ಮಾನಹಾನಿ ಉಂಟುಮಾಡುವಂತೆ ಇದ್ದ ಅಂಶಗಳೇನು?

Authored byಅಮಿತ್ ಎಂ.ಎಸ್ | Vijaya Karnataka Web 23 Mar 2023, 2:21 pm
ಹೊಸದಿಲ್ಲಿ: ಮೋದಿ ಸರ್‌ನೇಮ್ ಕುರಿತಾದ ವಿವಾದಾತ್ಮಕ ಹೇಳಿಕೆ ಕಾರಣದಿಂದ ಮಾನಹಾನಿ ಪ್ರಕರಣ ಎದುರಿಸುತ್ತಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಗುಜರಾತ್‌ನ ಸೂರತ್ ನ್ಯಾಯಾಲಯವೊಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತೀರ್ಪಿನ ಬೆನ್ನಲ್ಲೇ ಅವರಿಗೆ ಜಾಮೀನು ಕೂಡ ದೊರಕಿದ್ದು, ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.
Vijaya Karnataka Web rahul gandhi convicted in defamation case what he said over modi surname
Rahul Gandhi Defamation Case: ಮಾನಹಾನಿ ಪ್ರಕರಣದಲ್ಲಿ 2 ವರ್ಷ ಶಿಕ್ಷೆ: ಕೋಲಾರದಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಏನು?

"ಎಲ್ಲ ಕಳ್ಳರೂ ಮೋದಿ ಎಂಬ ಸರ್‌ನೇಮ್ ಹೊಂದಿರುತ್ತಾರೆ" ಎಂಬ ವಿವಾದಾತ್ಮಕ ಹೇಳಿಕೆಗಾಗಿ ರಾಹುಲ್ ಗಾಂಧಿ ಅವರಿಗೆ ಐಪಿಸಿ ಸೆಕ್ಷನ್ 504ರ ಅಡಿ (ಶಾಂತಿ ಕದಡುವ ಸಲುವಾಗಿ ಉದ್ದೇಶಪೂರ್ವಕ ಅವಮಾನ) ಈ ಶಿಕ್ಷೆ ವಿಧಿಸಲಾಗಿದೆ.

ಎಲ್ಲ ಕಳ್ಳರಲ್ಲೂ ಮೋದಿ ಎಂಬ ಸರ್‌ನೇಮ್​

Rahul Gandhi Convicted: ಮೋದಿ ಉಪನಾಮ ಹೇಳಿಕೆ ವಿಚಾರ, ರಾಹುಲ್‌ ಗಾಂಧಿ ದೋಷಿ ಎಂದು ಸೂರತ್‌ ಕೋರ್ಟ್‌ ಆದೇಶ


2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ರಾಹುಲ್ ಗಾಂಧಿ, "ಎಲ್ಲ ಕಳ್ಳರೂ ಮೋದಿ ಎಂಬ ಸಾಮಾನ್ಯ ಸರ್‌ನೇಮ್ ಹೊಂದಿರುವುದು ಹೇಗೆ?" ಎಂದು ಕುಚೋದ್ಯ ಮಾಡಿದ್ದರು. ಈ ಮೂಲಕ ನೀರವ್ ಮೋದಿ, ಲಲಿತ್ ಮೋದಿ ಅವರ ಜತೆ ಪ್ರಧಾನಿ ನರೇಂದ್ರ ಮೊದಿ ಅವರೂ ಸೇರಿಸಿದ್ದಾರೆ ಎಂದು ಟೀಕಿಸಿದ್ದರು.


"ನನ್ನ ಬಳಿ ಒಂದು ಪ್ರಶ್ನೆ ಇದೆ. ನೀರವ್ ಮೋದಿ ಇರಬಹುದು, ಲಲಿತ್ ಮೋದಿ ಇರಬಹುದು ಅಥವಾ ನರೇಂದ್ರ ಮೋದಿ ಇರಬಹುದು. ಎಲ್ಲ ಕಳ್ಳರ ಹೆಸರಿನಲ್ಲಿಯೂ ಮೋದಿ ಎಂದು ಏಕೆ ಇದೆ? ಅಂತಹ ಇನ್ನೂ ಎಷ್ಟು ಮೋದಿಗಳು ಹೊರಗೆ ಬರಬಹುದು ಎಂದು ನಮಗೆ ಗೊತ್ತಿಲ್ಲ" ಎಂದ ವ್ಯಂಗ್ಯವಾಡಿದ್ದರು.

​ರಫೇಲ್ ವಿಚಾರವಾಗಿ ವಾಗ್ದಾಳಿ

ಫ್ರಾನ್ಸ್ ಜತೆಗೆ ಮಾಡಿಕೊಂಡ ರಫೇಲ್ ಒಪ್ಪಂದದ ಕುರಿತಂತೆ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆ ಸಂದರ್ಭದಲ್ಲಿ ನಿರಂತರ ವಾಗ್ದಾಳಿ ನಡೆಸುತ್ತಿದ್ದರು. ರಫೇಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದ ಅವರು, ಅನಿಲ್ ಅಂಬಾನಿ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದಿದ್ದರು. ಪ್ರಧಾನಿ ಅವರನ್ನು ಟೀಕಿಸಲು ರಾಹುಲ್, 'ಚೌಕಿದಾರ್ ಚೋರ್ ಹೈ' ಎಂಬ ಘೋಷಣೆ ಹುಟ್ಟುಹಾಕಿದ್ದರು.

ದೂರು ಸಲ್ಲಿಸಿದ್ದ ಗುಜರಾತ್ ಬಿಜೆಪಿ ಮುಖಂಡ​

ಈ ಹೇಳಿಕೆಗೆ ಸಂಬಂಧಿಸಿದಂತೆ ಗುಜರಾತ್‌ನ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಸೂರತ್‌ನಲ್ಲಿ ದೂರು ನೀಡಿದ್ದರು. ಮೋದಿ ಸರ್‌ನೇಮ್ ಕುರಿತಾದ ಟೀಕೆಯು ಇಡೀ ಮೋದಿ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಅವರು ದೂರಿನಲ್ಲಿ ಹೇಳಿದ್ದರು.
ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ವಿರುದ್ಧ ಪೂರ್ಣೇಶ್ ಮೋದಿ ನೀಡಿದ್ದ ದೂರಿನಂತೆ ಐಪಿಸಿ ಸೆಕ್ಷನ್‌ಗಳಾದ 499 ಮತ್ತು 500ರ ಅಡಿ (ಮಾನಹಾನಿ) ಪ್ರಕರಣ ದಾಖಲಿಸಲಾಗಿತ್ತು.

ಮೂರು ಬಾರಿ ಹಾಜರಾಗಿದ್ದ ರಾಹುಲ್

ಪ್ರಕರಣದ ವಿಚಾರಣೆಗಾಗಿ ರಾಹುಲ್ ಗಾಂಧಿ ಅವರು ಮೂರು ಬಾರಿ ಸೂರತ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. 2021ರ ಅಕ್ಟೋಬರ್‌ನಲ್ಲಿ ಕೊನೆಯ ಸಲ ಹಾಜರಾಗಿದ್ದರು. ಆಗ ಅವರ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿತ್ತು. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದರು.
ರಾಹುಲ್ ಗಾಂಧಿ ಅವರು ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಒತ್ತಾಯಿಸಿ ದೂರುದಾರ ಪೂರ್ಣೇಶ್ ಮೋದಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ 2022ರ ಮಾರ್ಚ್‌ನಲ್ಲಿ ವಿಚಾರಣೆಗೆ ಗುಜರಾತ್ ಹೈಕೋರ್ಟ್ ತಡೆ ನೀಡಿತ್ತು. ಅದನ್ನು ತೆರವುಗೊಳಿಸಿದ ಬಳಿಕ 2023ರ ಫೆಬ್ರವರಿಯಲ್ಲಿ ಸೂರತ್ ನ್ಯಾಯಾಲಯ ಮಾನಹಾನಿ ಪ್ರಕರಣದ ಅಂತಿಮ ವಿಚಾರಣೆಯನ್ನು ಮತ್ತೆ ಆರಂಭಿಸಿತ್ತು.

​ರಾಹುಲ್ ಗಾಂಧಿ ಸಮರ್ಥನೆ

ಕೋಲಾರದಲ್ಲಿ ರಾಹುಲ್ ಗಾಂಧಿ ಅವರು ಮಾಡಿದ್ದ ಭಾಷಣದ ಸಿಡಿಗಳು ಮತ್ತು ಪೆನ್‌ಡ್ರೈವ್‌ಗಳ ದಾಖಲೆಗಳು ಅವರು ಮಾನಹಾನಿಕರ ಹೇಳಿಕೆ ನೀಡಿರುವುದನ್ನು ಸಾಬೀತುಪಡಿಸಿವೆ ಎಂದು ದೂರುದಾರ ಪೂರ್ಣೇಶ್ ಮೋದಿ ವಾದಿಸಿದ್ದರು.
ನ್ಯಾಯಾಲಯದ ಪ್ರಕ್ರಿಯೆಯು ದೋಷಪೂರಿತವಾಗಿದೆ. ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 202ರ ಅಡಿಯಲ್ಲಿನ ಸಮರ್ಪಕ ಪ್ರಕ್ರಿಯೆಯನ್ನು ಅನುಸರಿಸುತ್ತಿಲ್ಲ ಎಂದು ರಾಹುಲ್ ಪರ ವಕೀಲರು ಹೇಳಿದ್ದರು. ಈ ಪ್ರಕರಣದಲ್ಲಿ ಪೂರ್ಣೇಶ್ ಮೋದಿ ಅವರಿಗೆ ಯಾವುದೇ ಅಧಿಕಾರ ಇಲ್ಲ. ಈ ಭಾಷಣವು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವಾಗಿದ್ದರಿಂದ ದೂರು ಕೂಡ ನರೇಂದ್ರ ಮೋದಿ ಅವರೇ ನೀಡಬೇಕಿತ್ತೇ ವಿನಾ ಪೂರ್ಣೇಶ್ ಮೋದಿ ಅಲ್ಲ ಎಂದು ವಾದ ಮಂಡಿಸಿದ್ದರು.
"ನಾನು ಯಾವಾಗಲೂ ಭ್ರಷ್ಟಾಚಾರದ ವಿರುದ್ಧದ ನನ್ನ ಧ್ವನಿಯನ್ನು ಎತ್ತುತ್ತೇನೆ. ನನ್ನ ಉದ್ದೇಶ ಯಾವತ್ತೂ ತಪ್ಪಿಲ್ಲ ಅಥವಾ ಯಾರನ್ನೂ ನೋವುಂಟುಮಾಡಿಲ್ಲ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ