ಆ್ಯಪ್ನಗರ

ಹಳೆ ಪಕ್ಷಕ್ಕೆ ಸಿಗುತ್ತಿಲ್ಲ ಹೊಸ ನಾಯಕ!

ಎರಡು ತಿಂಗಳು ಸಮೀಪಿಸುತ್ತ ಕಳೆದರೂ ಹೊಸ ಸಾರಥಿಯನ್ನು ಹುಡುಕುವುದು ಪಕ್ಷಕ್ಕೆ ಕಷ್ಟಕರವಾಗಿದೆ. ಏತನ್ಮಧ್ಯೆ, 90ರ ಪ್ರಾಯದ ಮೋತಿಲಾಲ್‌ ವೋರಾ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಆದರೆ ಕಾಯಂ ಮುಖ್ಯಸ್ಥನಿಲ್ಲದೆ ಪಕ್ಷ ದಿಕ್ಕೆಟ್ಟು ಹೋಗಿದೆ.

PTI 22 Jul 2019, 5:00 am
ಹೊಸದಿಲ್ಲಿ: ತಲೆಮಾರುಗಳಿಂದ 'ಗಾಂಧಿ' ಕುಟುಂಬ ರಾಜಕಾರಣ ನೆಚ್ಚಿ ಅಸ್ತಿತ್ವ ಹಾಗೂ ವಿಸ್ತರಣೆ ಎರಡನ್ನೂ ಸಾಧಿಸುತ್ತ ಬಂದ ಕಾಂಗ್ರೆಸ್‌ಗೆ ಈಗ ಅದೇ ಕುಟುಂಬ ರಾಜಕಾರಣ ಕಂಟಕವಾಗಿ ಕಾಡತೊಡಗಿದೆ. ಲೋಕಸಭೆ ಚುನಾವಣೆ ಸೋಲಿನ ಬಳಿಕ ಈ ವಾಸ್ತವ ಅರಿತ ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನ ತೊರೆದು 'ಹೊರಗಿನವರಿಗೆ' ಮಣೆ ಹಾಕುವ ಮಾತಾಡಿದ್ದಾರೆ. ಇದಾಗಿ ಎರಡು ತಿಂಗಳು ಸಮೀಪಿಸುತ್ತ ಕಳೆದರೂ ಹೊಸ ಸಾರಥಿಯನ್ನು ಹುಡುಕುವುದು ಪಕ್ಷಕ್ಕೆ ಕಷ್ಟಕರವಾಗಿದೆ. ಏತನ್ಮಧ್ಯೆ, 90ರ ಪ್ರಾಯದ ಮೋತಿಲಾಲ್‌ ವೋರಾ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಆದರೆ ಕಾಯಂ ಮುಖ್ಯಸ್ಥನಿಲ್ಲದೆ ಪಕ್ಷ ದಿಕ್ಕೆಟ್ಟು ಹೋಗಿದೆ. ಕರ್ನಾಟಕ, ಗೋವಾದಲ್ಲಿ ಕಾಂಗ್ರೆಸ್‌ ಶಾಸಕರು ಸಾಮೂಹಿಕ ಗುಳೆ ಹೋಗಿದ್ದಾರೆ. ಇಷ್ಟೆಲ್ಲ ಅಧ್ವಾನದ ಹೊರತಾಗಿಯೂ ವರಿಷ್ಠರ ಮೌನದ ಅರ್ಥ ಏನು ಎನ್ನುವ ಪ್ರಶ್ನೆ ಕಾರ್ಯಕರ್ತರನ್ನು ಕಾಡತೊಡಗಿದೆ.
Vijaya Karnataka Web Rahul


ಚುನಾವಣೆ ಫಲಿತಾಂಶದ ಎರಡು ದಿನಗಳ ಬಳಿಕ ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್‌ ಗಾಂಧಿ ಅಧ್ಯಕ್ಷ ಸ್ಥಾನ ತ್ಯಜಿಸುವ ಘೋಷಣೆ ಮಾಡಿದರು. ಕಳೆದ ತಿಂಗಳು ಹಲವು ಪುಟಗಳ ರಾಜೀನಾಮೆ ಪತ್ರ ಬರೆದು ಹೊರ ನಡೆದರು. ಆದರೆ, ಗಾಂಧಿ ಕುಟುಂಬದ ಮೂವರು ಸಕ್ರಿಯ ರಾಜಕಾರಣಿಗಳನ್ನು ಹೊರಗಿಟ್ಟು ಕಾಂಗ್ರೆಸ್‌ ಮುನ್ನಡೆಸುವುದು ಸುಲಭವೇ ಎಂಬ ಪ್ರಶ್ನೆ ಕಾರ್ಯಕರ್ತರು ಮಾತ್ರವಲ್ಲದೇ, ಬಹುತೇಕ ನಾಯಕರನ್ನೂ ಕಾಡುತ್ತಿದೆ.

ಕೋರ್ಟ್‌ ಕೇಸ್‌ ಬಳಿಕ ವಾಪಸ್‌?: ಸದ್ಯ ದೇಶದ ವಿವಿಧ ಕೋರ್ಟ್‌ಗಳಲ್ಲಿ ತಮ್ಮ ವಿರುದ್ಧ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಮುಖಂಡರು ದಾಖಲಿಸಿರುವ 20ಕ್ಕೂ ಹೆಚ್ಚು ಮಾನನಷ್ಟ ಮೊಕದ್ದಮೆಗಳಿಗೆ ರಾಹುಲ್‌ ಖುದ್ದು ಹಾಜರಾಗಿ ವಿಚಾರಣೆ ಎದುರಿಸಬೇಕಿದೆ. ಈ ಗೋಜಲಿನ ನಡುವೆ, ನೆಲಕಚ್ಚಿರುವ ಪಕ್ಷವನ್ನು ಎತ್ತಿ ನಿಲ್ಲಿಸುವುದು ದುಸ್ತರ ಎನ್ನುವ ವಾಸ್ತವ ಅರಿತೇ ರಾಹುಲ್‌ ರಾಜೀನಾಮೆ ನೀಡಿದ್ದಾರೆ. ಒಂದೊಮ್ಮೆ ಈ ಎಲ್ಲ ಕೇಸ್‌ಗಳು ಇತ್ಯರ್ಥಗೊಂಡು, ಪಕ್ಷ ಚೇತರಿಸಿಕೊಂಡರೆ ಪುನಃ ಆ ಹುದ್ದೆಗೆ ವಾಪಸಾಗಲಿದ್ದಾರೆ ಎನ್ನುವ ಗುಸುಗುಸು ಕಾರ್ಯಕರ್ತರಲ್ಲಿ ಹರಿದಾಡಿದೆ. ಇದರ ಜತೆಗೆ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ತಾವು ನಡೆಸಿದ ಹೋರಾಟಕ್ಕೆ ಹಿಇರಯ ಮುಖಂಡರು ಸಾಥ್‌ ನೀಡಲಿಲ್ಲ, ಕೆಲವರಂತೂ ತಮ್ಮ ಮಕ್ಕಳನ್ನು ಗೆಲ್ಲಿಸಿಕೊಳ್ಳಲು ಮಾತ್ರವೇ ಗಮನ ನೀಡಿದರು ಎನ್ನುವ ಹತಾಶೆಯೂ ರಾಹುಲ್‌ ಗಾಂಧಿ ಅವರನ್ನು ಕಾಡುತ್ತಿದೆ.

ಬಣ ಸೃಷ್ಟಿ ಭೀತಿ: ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿ ಕಾಂಗ್ರೆಸ್‌ ಅಧ್ಯಕ್ಷ ಗಾದಿ ಅಲಂಕರಿಸಿದರೆ, ಅಂಥವರ ಪಾಲಿಗೆ ಅದು ಮುಳ್ಳಿನ ಗಾದಿಯೇ ಸರಿ. ಅದರಲ್ಲೂ ಸ್ವತಂತ್ರ ನಿರ್ಧಾರ ಕೈಗೊಳ್ಳುವ ದಿಟ್ಟ ವ್ಯಕ್ತಿತ್ವದವರು ಸಾರಥಿಯಾದರೆ ತಾಪತ್ರಯವೇ ಹೆಚ್ಚು. ಯಾವುದೇ ನೀತಿ-ನಿರ್ಧಾರಕ್ಕೆ ಮೊದಲು ಗಾಂಧಿ ಮರ್ಜಿ ಕಾಯಬೇಕು. ಅದಾಗದಿದ್ದರೆ, ಪಕ್ಷದಲ್ಲಿ ಬಣ ರಾಜಕಾರಣ ಭುಗಿಲೇಳುವ ಸಾಧ್ಯತೆಯೇ ಹೆಚ್ಚು. ಈ ಜಟಿಲ ಸಮಸ್ಯೆಗೆ ಸದ್ಯ ಯಾರ ಬಳಿಯೂ ಪರಿಹಾರ ಇಲ್ಲ.
ಗಾಂಧಿ ಕುಟುಂಬದ ಜತೆ ಹೊಂದಾಣಿಕೆ ಮಾಡಿಕೊಂಡು ಪಕ್ಷ ಮುನ್ನಡೆಸಬೇಕಾದರೆ ಹಳೆ ತಲೆಮಾರಿನ ನಾಯಕರೇ ಸೂಕ್ತ ಎನ್ನುವುದು ಕೆಲವರ ವಾದ. ಆದರೆ, ಅದರಿಂದ ಪ್ರಯೋಜನವಾಗುವುದಿಲ್ಲ. ಈಗಿನ ಪೀಳಿಗೆಯನ್ನು ಅರ್ಥ ಮಾಡಿಕೊಂಡು ಪಕ್ಷ ಕಟ್ಟುವ ಜೆನ್‌ ನೆಕ್ಸ್ಟ್‌ ನಾಯಕ ಬೇಕು ಎನ್ನುವುದು ಹಲವರ ಪಟ್ಟು. ಇದರ ಜತೆಗೆ ಜಾತಿ, ಧರ್ಮಾಧಾರಿತ ಮೀಸಲು ಮಾತುಗಳೂ ಕೇಳಿ ಬಂದಿದ್ದು, ಇದೆಲ್ಲದರ ಪರಿಣಾಮ ಕಾಂಗ್ರೆಸ್‌ಗೆ ನೂತ ಸಾರಥಿ ನೇಮಿಸುವುದು ಭಗೀರಥ ಪ್ರಯತ್ನವಾಗಿ ಪರಿಣಮಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ