ಆ್ಯಪ್ನಗರ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಚಾರಕ್ಕೆ ರಾಹುಲ್‌ ಚಾಲನೆ

ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೋಮವಾರ ರೋಡ್‌ ಶೋ ನಡೆಸುವ ಮೂಲಕ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿದರು.

Vijaya Karnataka 18 Sep 2018, 9:53 am
ಭೋಪಾಲ್‌: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೋಮವಾರ ರೋಡ್‌ ಶೋ ನಡೆಸುವ ಮೂಲಕ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿದರು.
Vijaya Karnataka Web Rahul Gandi 23


ಇಲ್ಲಿನ ಲಾಲ್ಘಟಿ ಚೌಕ್‌ನಿಂದ ದಸರಾ ಮೈದಾನದವರೆಗೂ ಸುಮಾರು 15 ಕಿ.ಮೀ. ದೂರ ಬಸ್‌ನಲ್ಲಿ ಸಾಗಿದ ರೋಡ್‌ ಶೋಗೆ ರಸ್ತೆಯ ಇಕ್ಕೆಲೆಗಳಲ್ಲೂ ಕಿಕ್ಕಿರಿದು ನೆರೆದಿದ್ದ ಜನರು ಸಾಕ್ಷಿಯಾದರು. ಕಾಂಗ್ರೆಸ್‌ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ, ಹೂ ಚೆಲ್ಲುತ್ತಾ ರಾಹುಲ್‌ ಗಾಂಧಿ ಅವರನ್ನು ಹುರಿದುಂಬಿಸಿದರು. ರಾಹುಲ್‌ ಅವರನ್ನು 'ಶಿವಭಕ್ತ' ಎಂದು ಬಣ್ಣಿಸುವ ಬೃಹತ್‌ ಬ್ಯಾನರ್‌ಗಳು ಹಾಗೂ ಪೋಸ್ಟರ್‌ಗಳು ಭೋಪಾಲ್‌ನ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ರಾರಾಜಿಸುತ್ತಿದ್ದವು. ದಸರಾ ಮೈದಾನದಲ್ಲಿ ರಾಹುಲ್‌ ಗಾಂಧಿ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಜತೆ ಬಹಿರಂಗ ಸಭೆಯಲ್ಲಿ ಸಂವಾದ ನಡೆಸಿದರು.

ಇದಕ್ಕೂ ಮುನ್ನ, ಭೋಪಾಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್‌ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಮಧ್ಯಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಕಮಲ್‌ನಾಥ್‌, ಪಕ್ಷದ ಹಿರಿಯ ನಾಯಕ ಮತ್ತು ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇತರರು ರಾಹುಲ್‌ ಅವರನ್ನು ಸ್ವಾಗತಿಸಿದರು. ರಾಹುಲ್‌ ವಿಮಾನ ನಿಲ್ದಾಣದಿಂದ ಹೊರಗೆ ಅಡಿ ಇರಿಸುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಧ್ವಜವನ್ನು ಆಡಿಸುತ್ತಾ ''ರಾಹುಲ್‌ ಗಾಂಧಿ ಜಿಂದಾಬಾದ್‌'' ಘೋಷಣೆಗಳನ್ನು ಮೊಳಗಿಸಿದರು.

ನೋಟು ಅಮಾನ್ಯೀಕರಣ ಅತಿದೊಡ್ಡ ಹಗರಣ

ರೋಡ್‌ ಶೋ ಬಳಿಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌, 2016ರ ನವೆಂಬರ್‌ 8ರಂದು ಪ್ರಧಾನಿ ಮೋದಿ ಘೋಷಿಸಿದ ನೋಟು ಅಮಾನ್ಯೀಕರಣವು, ಕಪ್ಪು ಹಣವನ್ನು ಸಕ್ರಮ ಮಾಡಲು ಕೇಂದ್ರ ಸರಕಾರ ನಡೆಸಿದ ಬಹುದೊಡ್ಡ ಹಗರಣ ಎಂದು ಆರೋಪಿಸಿದರು. ''ಸಣ್ಣ ವರ್ತಕರು ಮತ್ತು ವ್ಯಾಪಾರಿಗಳಿಂದ ಹಣವನ್ನು ಕಸಿದುಕೊಂಡು, ದೇಶದ 15 ಶ್ರೀಮಂತ ವ್ಯಕ್ತಿಗಳ ಕಿಸೆಗೆ ಸೇರಿಸುವ ಉದ್ದೇಶದಿಂದ ಅಮಾನ್ಯೀಕರಣ ನಿರ್ಧಾರ ಕೈಗೊಳ್ಳಲಾಯಿತು,'' ಎಂದರು.

15 ಬೃಹತ್‌ ಕೈಗಾರಿಕೆಗಳು ಬ್ಯಾಂಕ್‌ಗಳಿಂದ ಪಡೆದಿದ್ದ 1.5 ಲಕ್ಷ ಕೋಟಿ ರೂ. ಸಾಲವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮನ್ನಾ ಮಾಡಿದೆ ಎಂದು ಆರೋಪಿಸಿದ ಅವರು, ಕೇವಲ 5000 ರೂ. ಪಡೆದಿದ್ದ ರೈತರ ಸಾಲವನ್ನೇಕೆ ಮನ್ನಾ ಮಾಡಲಿಲ್ಲ?'' ಎಂದು ಪ್ರಶ್ನಿಸಿದರು. ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡುವ ಭರವಸೆ ನೀಡಿದರು.

11 ಅರ್ಚಕರ ಆಶೀರ್ವಾದ

ಇತ್ತೀಚೆಗಷ್ಟೇ ಮಾನಸ ಸರೋವರ ಯಾತ್ರೆ ಪೂರೈಸಿದ ರಾಹುಲ್‌, 11 ಹಿಂದೂ ಅರ್ಚಕರ ಆಶೀರ್ವಾದದೊಂದಿಗೆ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದು ವಿಶೇಷವಾಗಿತ್ತು. ಲಾಲ್ಘಟಿ ಚೌಕದಲ್ಲಿ ಮಂತ್ರಘೋಷಗಳ ನಡುವೆ ಪೂಜೆ ನೆರವೇರಿಸಿದ ಬಳಿಕ ರಾಹುಲ್‌ ರೋಡ್‌ ಶೋ ಆರಂಭಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ