ಆ್ಯಪ್ನಗರ

ಭಾರಿ ಮಳೆಗೆ ನಲುಗಿದ ಉತ್ತರ ಭಾರತ

ಮಳೆ ಸಂಬಂಧಿ ಅವಘಡಗಳಿಂದ ಹಿಮಾಚಲ ಹಾಗೂ ಉತ್ತರಾಖಂಡದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 35ರ ಗಡಿದಾಟಿದೆ.

Agencies 20 Aug 2019, 5:00 am
ಹೊಸದಿಲ್ಲಿ: ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉತ್ತರ ಭಾರತ ಅಕ್ಷರಶಃ ನಲುಗಿದೆ. ಗಂಗಾ, ಯಮುನಾ, ಸಟ್ಲೇಜ್‌ ಸೇರಿ ಅನೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಪಂಜಾಬ್‌, ಹರಿಯಾಣ ಮತ್ತು ದಿಲ್ಲಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.
Vijaya Karnataka Web rains wreak havoc in ukhand himachal flood like situation in some northern states
ಭಾರಿ ಮಳೆಗೆ ನಲುಗಿದ ಉತ್ತರ ಭಾರತ


ಉತ್ತರ ಭಾರತದ ಈ ಆರು ರಾಜ್ಯಗಳಲ್ಲಿ ಭೂ ಕುಸಿತಕ್ಕೆ ಹಳ್ಳಿಗಳು ತತ್ತರಿಸಿ ಹೋಗಿವೆ. ಪ್ರವಾಹದ ಅಬ್ಬರಕ್ಕೆ ರಸ್ತೆಗಳು ಹಾಗೂ ನೂರಾರು ಮನೆಗಳು ಕೊಚ್ಚಿಕೊಂಡು ಹೋಗಿದ್ದು ಲಕ್ಷಾಂತರ ಜನರ ಬದುಕು ದುರ್ಬರವಾಗಿದೆ. ಬೆಳೆದು ನಿಂತ ಕೋಟ್ಯಂತರ ರೂಪಾಯಿ ಮೌಲ್ಯದ ಪೈರು ನಾಶಗೊಂಡಿದೆ. ಭೂ ಸೇನೆ, ಭಾರತೀಯ ವಾಯುಪಡೆ ಹಾಗೂ ಎನ್‌ಡಿಆರ್‌ಎಫ್‌ ತಂಡಗಳು ಸಮರೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ಮಧ್ಯೆ ಗುಜರಾತಿನ ಕಛ್‌ನಲ್ಲಿ ರಿಕ್ಟರ್‌ ಮಾಪಕದ 4.2 ತೀವ್ರತೆಯ ಭೂಕಂಪ ಸಂಭವಿಸಿದೆ.

ಮಳೆ ಸಂಬಂಧಿ ಅವಘಡಗಳಿಂದ ಹಿಮಾಚಲ ಹಾಗೂ ಉತ್ತರಾಖಂಡದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 35ರ ಗಡಿದಾಟಿದೆ. ಉತ್ತರಾಖಂಡದ ಉತ್ತರಕಾಶಿಯಲ್ಲಿ ಭಾನುವಾರ ಮೇಘಸ್ಫೋಟದಿಂದ ಸಂಭವಿಸಿದ ಪ್ರವಾಹದಲ್ಲಿ ಕಣ್ಮರೆಯಾಗಿದ್ದ 18 ಮಂದಿಯ ಪೈಕಿ 10 ಮೃತದೇಹಗಳು ಸೋಮವಾರ ಸಿಕ್ಕಿವೆ. ಆರು ಜನರ ಸುಳಿವು ಪತ್ತೆಯಾಗಿಲ್ಲ. ಹಿಮಾಚಲದಲ್ಲಿ ಭೂಕುಸಿತದಿಂದ ರಸ್ತೆಗಳು ಕೊಚ್ಚಿಹೋಗಿದ್ದು ಛಾಂಬ್ರಾ, ಕಾಗ್ರಾ, ಶಿಮ್ಲಾ , ಕುಲು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ 500ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ಗುಡ್ಡ ಕುಸಿದು ಕುಲು-ಮನಾಲಿ ಹೆದ್ದಾರಿ ಬಂದ್‌ ಆಗಿದೆ.

ಕೇಜ್ರಿವಾಲ್‌ ತುರ್ತು ಸಭೆ: ಹರಿಯಾಣದ ಹತ್ನಿ ಕುಂಡ್‌ ಬ್ಯಾರೇಜ್‌ನಿಂದ 8.28 ಲಕ್ಷ ಕ್ಯೂಸೆಕ್ಸ್‌ ನೀರು ಯಮುನಾ ನದಿಗೆ ಹರಿಬಿಡಲಾಗಿದ್ದು ದಿಲ್ಲಿಯಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತುರ್ತು ಸಭೆ ನಡೆಸಿ ರಕ್ಷಣಾ ಕಾರ್ಯ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯಮುನಾ ಸೇತುವೆಯನ್ನು ಸಾರ್ವಜನಿಕರ ಸಂಚಾರಕ್ಕೆ ಸ್ಥಗಿತಗೊಳಿಸಲಾಗಿದೆ. 30 ದೋಣಿಗಳನ್ನು ಸಜ್ಜುಗೊಂಡ ಸ್ಥಿತಿಯಲ್ಲಿ ಇರಿಸಲಾಗಿದೆ. ತಗ್ಗು ಪ್ರದೇಶದ ನಿವಾಸಿಗಳ ತೆರವು ಕಾರ್ಯಾಚರಣೆ ತ್ವರಿತಗತಿಯಲ್ಲಿ ಸಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ