ಆ್ಯಪ್ನಗರ

Rajnath Singh: ಹುತಾತ್ಮರಿಗೆ ಕೋಟಿ ರೂಪಾಯಿ ಪರಿಹಾರ: ರಾಜನಾಥ್ ಸಿಂಗ್

ದೇಶದ ಭದ್ರತೆಗೆ ದೊಡ್ಡ ಸವಾಲು ಒಡ್ಡಿದ್ದ ನಕ್ಸಲ್‌ ವಾದ ಮತ್ತು ಉಗ್ರ ವಾದ ಈಗ ಕ್ಷೀಣಿಸುತ್ತಿದ್ದು, ನಕ್ಸಲರು ಹಾಗೂ ಉಗ್ರಗಾಮಿಗಳು ನೆಲೆ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Vijaya Karnataka 22 May 2018, 10:01 am
ಅಂಬಿಕಾಪುರ (ಛತ್ತೀಸ್‌ಗಢ): ದೇಶದ ಭದ್ರತೆಗೆ ದೊಡ್ಡ ಸವಾಲು ಒಡ್ಡಿದ್ದ ನಕ್ಸಲ್‌ ವಾದ ಮತ್ತು ಉಗ್ರ ವಾದ ಈಗ ಕ್ಷೀಣಿಸುತ್ತಿದ್ದು, ನಕ್ಸಲರು ಹಾಗೂ ಉಗ್ರಗಾಮಿಗಳು ನೆಲೆ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.
Vijaya Karnataka Web rajanath singh


ಸೋಮವಾರ ಇಲ್ಲಿ ನಡೆದ ಕೇಂದ್ರ ಮೀಸಲು ಪೊಲೀಸ್‌ ಪಡೆಯ 'ಬಸ್ತಾರಿಯಾ' ಬೆಟಾಲಿಯನ್‌ನ ನಿರ್ಗಮನ ಪಥ ಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ಸಚಿವರು, ಸಿಆರ್‌ಪಿಎಫ್‌ ಪರಿಶ್ರಮದಿಂದಾಗಿ ಬಿಹಾರ ಮತ್ತು ಛತ್ತೀಸಗಢದಲ್ಲಿ ನಕ್ಸಲರು ನೆಲೆ ಕಳೆದುಕೊಳ್ಳುತ್ತಿದ್ದಾರೆ. ಸೇನೆಯ ಪ್ರಯತ್ನದಿಂದ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳಕ್ಕೆ ಕಡಿವಾಣ ಬಿದ್ದಿದೆ ಎಂದು ಬಣ್ಣಿಸಿದರು.

ಬಸ್ತಾರಿಯಾ ಬೆಟಾಲಿಯನ್‌ಗೆ ಛತ್ತೀಸ್‌ಗಢದ ನಕ್ಸಲ್‌ ಪೀಡಿತ ಜಿಲ್ಲೆಗಳ ಬಸ್ತಾರಿಯಾ ವಲಯದ ಬುಡಕಟ್ಟು ಯುವಕರ ನೇಮಕಾತಿಗೆ ಇದೇ ವೇಳೆ ಚಾಲನೆ ನೀಡಲಾಯಿತು.

ನಕ್ಸಲ್‌ ಚಟುವಟಿಕೆ ಹತ್ತಿಕ್ಕುವಲ್ಲಿ ಸಿಆರ್‌ಪಿಎಫ್‌ ಮತ್ತು ಛತ್ತೀಸ್‌ಗಢ ಪೊಲೀಸರು ನಡೆಸಿದ ಪ್ರಯತ್ನವನ್ನು ಶ್ಲಾಘಿಸಿದ ಗೃಹ ಸಚಿವರು, ಈಗ ನಕ್ಸಲರ ದಾಳಿಯಿಂದ ಪೊಲೀಸ್‌ ಪಡೆಗಳಿಗೆ ಸಂಭವಿಸುವ ಹಾನಿ ಶೇ.53ರಿಂದ 55ರಷ್ಟು ತಗ್ಗಿದೆ. ನಕ್ಸಲ್‌ ವಾದದ ಭೌಗೋಳಿಕ ವ್ಯಾಪ್ತಿ ಕೂಡ ಶೇ.40ರಿಂದ 45ರಷ್ಟು ಕುಂಠಿತಗೊಂಡಿದೆ ಎಂದರು.

ಸೈನಿಕನೊಬ್ಬನ ಪ್ರಾಣವನ್ನು ಹಣದಿಂದ ಸರಿದೂಗಿಸಲು ಸಾಧ್ಯವಿಲ್ಲ. ಆದರೂ, ಹುತಾತ್ಮರಾದ ಪ್ರತಿ ಸಿಬ್ಬಂದಿಯ ಕುಟುಂಬಕ್ಕೆ ಕೃತಜ್ಞತೆಯ ಸಂಕೇತವಾಗಿ ಸರಕಾರ ಒಂದು ಕೋಟಿ ರೂಪಾಯಿಗೆ ಕಡಿಮೆಯಿಲ್ಲದಂತೆ ಪರಿಹಾರ ನೀಡಲು ತೀರ್ಮಾನಿಸಿದೆ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್‌ ಸಿಂಗ್‌, ಸಿಆರ್‌ಪಿಎಫ್‌ ಪ್ರಧಾನ ನಿರ್ದೇಶಕ ಆರ್‌.ಆರ್‌. ಭಟ್ನಾಗರ್‌, ಡಿಜಿಪಿ ಎ.ಎನ್‌. ಉಪಾಧ್ಯಾಯ ಮುಂತಾದರು ಈ ಸಂದರ್ಭದಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ