ಆ್ಯಪ್ನಗರ

ಕಾಂಗ್ರೆಸ್‌ಗೆ ಸಡ್ಡು ಹೊಡೆದ ಆರ್‌ಜೆಡಿ, ಮಿತ್ರಪಕ್ಷಕ್ಕೆ ರಾಜ್ಯಸಭೆ ಸ್ಥಾನ ಬಿಟ್ಟುಕೊಡಲು ನಕಾರ

ಎಐಸಿಸಿಯಲ್ಲಿ ಬಿಹಾರ ಉಸ್ತುವಾರಿಯಾಗಿರುವ ಶಕ್ತಿಸಿಂಗ್‌ ಗೋಹಿಲ್‌ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಬಿಟ್ಟುಕೊಡುವುದಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ನೀಡಿದ್ದ ಭರವಸೆ ನೆನಪಿಸಿ ಬಹಿರಂಗ ಪತ್ರ ಬರೆದ ಬೆನ್ನಲ್ಲಿಯೇ ಈ ವಿದ್ಯಮಾನ ನಡೆದಿದೆ.

Agencies 12 Mar 2020, 8:12 pm
ಪಟನಾ: ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ಗೆ ಒಂದು ರಾಜ್ಯಸಭಾ ಸ್ಥಾನ ಬಿಟ್ಟುಕೊಡಲು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಿರಾಕರಿಸಿದ್ದು, ತನ್ನ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.
Vijaya Karnataka Web RJD


ಎಐಸಿಸಿಯಲ್ಲಿ ಬಿಹಾರ ಉಸ್ತುವಾರಿಯಾಗಿರುವ ಶಕ್ತಿಸಿಂಗ್‌ ಗೋಹಿಲ್‌ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಬಿಟ್ಟುಕೊಡುವುದಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ನೀಡಿದ್ದ ಭರವಸೆ ನೆನಪಿಸಿ ಬಹಿರಂಗ ಪತ್ರ ಬರೆದ ಬೆನ್ನಲ್ಲಿಯೇ ಈ ವಿದ್ಯಮಾನ ನಡೆದಿದೆ. ಹಾಲಿ ಸಂಸದ ಹಾಗೂ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರ ಆಪ್ತ ಪ್ರೇಮ್‌ಚಂದ್ರ ಗುಪ್ತಾ, ಅಮರೇಂದ್ರ ಧರಿ ಸಿಂಗ್‌ ಅವರನ್ನು ಪಕ್ಷದ ಅಭ್ಯರ್ಥಿಗಳಾಗಿ ತೇಜಸ್ವಿ ಗುರುವಾರ ಪ್ರಕಟಿಸಿದರು. ಕೆಲಹೊತ್ತಿನಲ್ಲಿಯೇ ಇಬ್ಬರೂ ನಾಮಪತ್ರ ಸಲ್ಲಿಸಿದರು.

ಬಿಹಾರದಿಂದ ಐದು ಸದಸ್ಯರು ಈ ಮಾಸಾಂತ್ಯಕ್ಕೆ ನಿವೃತ್ತರಾಗಲಿದ್ದು, ಮಾರ್ಚ್‌ 26ರಂದು ಚುನಾವಣೆ ನಡೆಯಲಿದೆ. ಜೆಡಿಯು-ಬಿಜೆಪಿ ಮೈತ್ರಿಕೂಟವು ಮೂವರು ಅಭ್ಯರ್ಥಿಗಳನ್ನು ಘೋಷಿಸಿದೆ. ಜೆಡಿಯು ಎರಡು ಮತ್ತು ಬಿಜೆಪಿ ಒಂದು ಸ್ಥಾನ ಹಂಚಿಕೊಂಡಿವೆ. ಮೂವರೂ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಬಿಹಾರ ವಿಧಾನಸಭೆಯಲ್ಲಿಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು 127 ಶಾಸಕರನ್ನು ಹೊಂದಿದ್ದು, ಮೂವರೂ ಅಭ್ಯರ್ಥಿಗಳ ಗೆಲುವು ಖಚಿತ. ಆರ್‌ಜೆಡಿ 79 ಶಾಸಕರನ್ನು ಹೊಂದಿದ್ದು, ಮೊದಲ ಅಭ್ಯರ್ಥಿಯಾಗಿರುವ ಗುಪ್ತಾ ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ. ಎರಡನೇ ಅಭ್ಯರ್ಥಿಯಾಗಿರುವ ಧರಿ ಆಯ್ಕೆಗೆ ಕಾಂಗ್ರೆಸ್‌ನ ಕೆಲವು ಶಾಸಕರು ಹಾಗೂ ಪ್ರತಿಪಕ್ಷ ಪಾಳಯದ ಸಣ್ಣಪುಟ್ಟ ಪಕ್ಷಗಳ ಶಾಸಕರ ಬೆಂಬಲ ಪಡೆಯುವುದು ಆರ್‌ಜೆಡಿ ತಂತ್ರವಾಗಿದೆ.

ಮಹಾರಾಷ್ಟ್ರದಲ್ಲಿ ಚೌಕಾಸಿ

ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಮೈತ್ರಿಕೂಟದಲ್ಲಿ ನಾಲ್ಕನೇ ಸ್ಥಾನಕ್ಕಾಗಿ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌ ನಡುವೆ ಚೌಕಾಸಿ ನಡೆದಿದೆ. ಮೂರೂ ಪಕ್ಷಗಳು ತಲಾ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಿವೆ. ಎನ್‌ಸಿಪಿಯು ಎರಡನೇ ಅಭ್ಯರ್ಥಿಯಾಗಿ ಮಾಜಿ ಸಚಿವೆ ಫೌಜಿಯಾ ಖಾನ್‌ ಅವರನ್ನು ಕಣಕ್ಕೆ ಇಳಿಸಲು ಬಯಸಿದ್ದರೆ, ಕಾಂಗ್ರೆಸ್‌ ಸಹ ತನಗೆ ಎರಡು ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದೆ. ಶಿವಸೇನೆ 56, ಎನ್‌ಸಿಪಿ 54, ಕಾಂಗ್ರೆಸ್‌ 44 ಶಾಸಕರನ್ನು ಹೊಂದಿವೆ. ಎನ್‌ಡಿಎ ಅಭ್ಯರ್ಥಿಗಳಾಗಿ ಕೇಂದ್ರ ಸಚಿವ ರಾಮದಾಸ್‌ ಅಠಾವಳೆ ಮತ್ತು ಬಿಜೆಪಿ ನಾಯಕ ಉದಯನ್‌ರಾಜೇ ಭೋಂಸ್ಲೆ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಮಹಾ ವಿಕಾಸ ಅಘಾಡಿ ಪರವಾಗಿ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಅಸಮಾಧಾನ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ದಿಗ್ವಿಜಯ್‌ ಸಿಂಗ್‌ ಗುರುವಾರ ಉಮೇದುವಾರಿಕೆ ಸಲ್ಲಿಸಿದ ಬೆನ್ನಲ್ಲಿಯೇ ಪಕ್ಷದೊಳಗಿನ ಅಸಮಾಧಾನ ಮತ್ತೆ ಸ್ಫೋಟಗೊಂಡಿದೆ. ಸ್ಪರ್ಧೆ ಬಯಸಿದ್ದ ಸುರೇಶ್‌ ಪಚೌರಿ ಅವರು ತಮಗೆ ಟಿಕೆಟ್‌ ನೀಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ದಿಲ್ಲಿಗೆ ದೌಡಾಯಿಸಿದ್ದಾರೆ. ಅವರ ಬೆಂಬಲಿಗ ಶಾಸಕರು ಅಡ್ಡಮತದಾನ ಮಾಡುವ ಸಾಧ್ಯತೆ ಇದೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲೇ ಕೇಳಿಬಂದಿದೆ.

ಬಿಜೆಪಿಯು ಮೂರನೇ ಅಭ್ಯರ್ಥಿಯಾಗಿ ಆರ್‌ಎಸ್‌ಎಸ್‌ ಬೆಂಬಲಿತ ಪ್ರೊ. ಸುಮೇರ್‌ ಸಿಂಗ್‌ ಸೋಳಂಕಿ ಅವರನ್ನು ಕಣಕ್ಕೆ ಇಳಿಸುವುದಾಗಿ ಗುರುವಾರ ಘೋಷಿಸಿದೆ. ಆದಿವಾಸಿಗಳ ಕುರಿತು ಪ್ರೊ. ಸೋಳಂಕಿ ಆಳವಾದ ಅಧ್ಯಯನ ಕೈಗೊಂಡಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೂರು ಸ್ಥಾನಗಳನ್ನು ಗೆಲ್ಲಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ